ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನ ಅಗಸಬಾಳ ಹಾಗೂ ಸಂಕನಾಳ ಕೆರೆಗೆ ಹೋಗುವ ಪೈಪ್ಲೈನ್ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಆಲಮಟ್ಟಿಯಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿದರು.
‘ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಕುದರಿ ಸಾಲವಾಡಗಿ ಶಾಖಾ ಕಾಲುವೆಯಿಂದ ಅಗಸಬಾಳ ಹಾಗೂ ಸಂಕನಾಳ ಕೆರೆಗೆ ನೀರು ಭರ್ತಿಗಾಗಿ ಪೈಪ್ಲೈನ್ ಮಾಡಲು ಈಗಾಗಲೇ ಟೆಂಡರ್ ಕರೆದು ಒಂದು ವರ್ಷ ಗತಿಸಿದೆ. ಆದರೂ ಇನ್ನೂ ಪೈಪ್ಲೈನ್ ಕಾಮಗಾರಿ ಆರಂಭಿಸಿಲ್ಲ. ಕೆರೆಯವರೆಗೆ ಪೈಪ್ಲೈನ್ ಹೋಗಬೇಕಾದರೆ ಸುಮಾರು 1.400 ಮೀಟರ್ಗಳಷ್ಟು ಇದೆ. ಈಗಾಗಲೇ ಕೇವಲು 44 ಪೈಪ್ಗಳನ್ನು ಮಾತ್ರ ತಂದು ಇಟ್ಟಿದ್ದಾರೆ. ಇನ್ನೂ ಸುಮಾರು 68 ಪೈಪ್ಗಳ ಅಗತ್ಯವಿದೆ. ಇನ್ನುಳಿದ ಪೈಪ್ಗಳನ್ನು ಶೀಘ್ರದಲ್ಲಿ ತರಿಸಿ ಕಾಮಗಾರಿ ಆರಂಭಿಸಬೇಕು. ಗುತ್ತಿಗೆದಾರರು ವಿಳಂಬ ಮಾಡಿದ ಕಾರಣ, ಕಾಲುವೆಯ ಮೂಲಕ ಕೆರೆ ಭರ್ತಿಯಿಂದ ವಂಚಿತಗೊಂಡಿದೆ. ಜಾನುವಾರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ’ ಎಂದು ದೂರಿದರು. ಕಾಮಗಾರಿ ಆರಂಭಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದರು.
ಮುಖ್ಯ ಎಂಜಿನಿಯರ್ ಎಚ್. ಸುರೇಶ ಮನವಿ ಸ್ವೀಕರಿಸಿದರು.
ಸದಾಶಿವ ಬರಟಗಿ, ಎಸ್.ಎಂ. ಅಂಗಡಗೇರಿ, ಅರುಣಕುಮಾರ ಪಾಟೀಲ, ಜಿ.ಎಂ. ಬಡಿಗೇರ, ಎಸ್.ಆರ್. ಹಿರೇಮಠ, ಆರ್.ಎ. ಹುನಗುಂದ, ಬಿ.ಎಸ್. ಸಣತಂಗಿ, ಪಾವಡೇಪ್ಪ ಹಳೆಗೌಡರ, ಸಾಯಬಣ್ಣ ಸಣತಂಗಿ, ನಾಗಪ್ಪ ಹುನಗುಂದ, ಸಿದ್ದಪ್ಪ, ಈರಣ್ಣ, ಗುರಲಿಂಗಪ್ಪಗೌಡ ಪಾಟೀಲ, ಶ್ರೀಶೈಲ ಅಂಗಡಗೇರಿ, ಗುಳಪ್ಪ ಬನಾಸಿ, ಸಂಜು ಬಣಗಾರ, ಶಿವಪ್ಪ ವಾಲೀಕಾರ, ಯಂಕಪ್ಪ ಮಳಗಿ, ಲಕ್ಷ್ಮಣ ಸಣತಂಗಿ, ಪೀರಪ್ಪ ಸಣತಂಗಿ, ನಾಗಪ್ಪ ಮುಳವಾಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.