ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲತವಾಡ | ಸಾರಾಯಿ ಮಾರಾಟ; ಗ್ರಾಮಸ್ಥರ ಪ್ರತಿಭಟನೆ

Published 11 ಜೂನ್ 2024, 15:19 IST
Last Updated 11 ಜೂನ್ 2024, 15:19 IST
ಅಕ್ಷರ ಗಾತ್ರ

ನಾಲತವಾಡ: ಸಮೀಪದ ಆಲೂರ, ಕೇಸಾಪೂರ ಗ್ರಾಮಗಳ ಅಂಗಡಿಗಳಲ್ಲಿ ರಾಜಾರೋಷವಾಗಿ ಸಾರಾಯಿ ಮಾಡಲಾಗುತ್ತಿದೆ. ಗ್ರಾಮದಲ್ಲಿ ಸಾರಾಯಿ ಮಾರಾಟ ಬಂದ್ ಮಾಡಬೇಕು’ ಎಂದು ಗ್ರಾಮಸ್ಥರು, ಮಹಿಳೆಯರು ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಾರಾಯಿ ಮಾರಾಟಗಾರರ ವಿರುದ್ಧ ಧಿಕ್ಕಾರ ಕೂಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಮೌನವಹಿಸಿದ್ದು, ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಇವರು ಬರೀ ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡಿದರೆ ಗ್ರಾಮವು ಸಾರಾಯಿ ಮುಕ್ತ ಆಗುವುದು ಯಾವಾಗ’ ಎಂದು ಮಹಿಳೆ ಸಂಗಮ್ಮ ಭೋವೇರ ಬೇಸರ ವ್ಯಕ್ತಪಡಿಸಿದರು.

‘ದುಡಿಯುವ ವರ್ಗದವರು ಸಾರಾಯಿ ಚಟಕ್ಕೆ ಒಳಗಾಗಿ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ. ಸಾರಾಯಿ ಚಟಕ್ಕಾಗಿ ಸಾಲ, ಮಹಿಳೆಯರ ಮೇಲೆ ದೌರ್ಜನ್ಯ ಘಟನೆಗಳು ಹೆಚ್ಚುತ್ತಿವೆ. ಆಲೂರ ಮತ್ತು ಕೇಸಾಪೂರ ಗ್ರಾಮವನ್ನು ಸಾರಾಯಿ ಮುಕ್ತವಾಗಿಸಲು ಸಂಕಲ್ಪ ಮಾಡಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಿಕ್ಷಕ ವೈ.ಬಿ. ತಳವಾರ ಮಾತನಾಡಿ, ‘ಸಾರಾಯಿ ದುಶ್ಚಟಕ್ಕೆ ಇಂದಿನ ಯುವ ಪೀಳಿಗೆ ಹಾಳಾಗುತ್ತಿದೆ. ಗ್ರಾಮವನ್ನು ಸಾರಾಯಿ ಮುಕ್ತವಾಗಿಸಲು ಸಂಕಲ್ಪ ಕೈಗೊಂಡಿದ್ದೇವೆ. ಸಾರಾಯಿ ಮಾರಾಟ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಗದ್ದೆಪ್ಪ ಭೋವೇರ, ಸಂಗನಗೌಡ ಪಾಟೀಲ, ಜಿ.ಜಿ.ಗೌಡರ, ಬಾಲಪ್ಪ ತಳವಾರ, ಸುರೇಶ ಬೈರವಾಡಗಿ, ದ್ಯಾಮಣ್ಣ ಇಂಗಳಗಿ, ಶ್ರೀನಿವಾಸ ಗೌಂಡಿ, ಅಂಬ್ರೇಶ ಸಂಗಮ, ನಾಗೇಶ
ಹಡಪದ, ಸಂಗಮ್ಮ ಭೋವೇರ, ಈರಮ್ಮ ಉಪ್ಪಿನಕಾಯಿ, ಗಿರಜಮ್ಮ ಪೂಜಾರಿ, ಅಯ್ಯಮ್ಮ ಹಿರೇಕುರಬರ, ಗದ್ದೆವ್ವ ಮಾದರ, ತಿಪ್ಪವ್ವ ಮಾದರ, ಹುಲಗಮ್ಮ ಮಾದರ ಇದ್ದರು.

ಆಲೂರ ಹಾಗೂ ಕೇಸಾಪೂರ ಗ್ರಾಮಗಳಲ್ಲಿ ಸಾರಾಯಿ ಮಾರಾಟಕ್ಕೆ ತಡೆಯೊಡ್ಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಆಲೂರ ಹಾಗೂ ಕೇಸಾಪೂರ ಗ್ರಾಮಗಳಲ್ಲಿ ಸಾರಾಯಿ ಮಾರಾಟಕ್ಕೆ ತಡೆಯೊಡ್ಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT