ಕಕ್ಕೇರಾ: ಪಟ್ಟಣದ ಯುಕೆಪಿ ಕ್ಯಾಂಪಿನ ಸೋಮನಾಥ ಗದ್ದಿಗಿಯಲ್ಲಿ ಶುಕ್ರವಾರ 35 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಗ್ರಾಮದ ಮುಖಂಡ ಬಸವರಾಜಪ್ಪ ಮುತ್ಯಾ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 19ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧು–ವರರು ಸತಿಪತಿಗಳಾದರು.
ಕರಿಮಡ್ಡೆಪ್ಪ ಪೂಜಾರಿ, ವೀರಭದ್ರಯ್ಯ ಸ್ವಾಮಿ ಅವರು ಮಾಂಗಲ್ಯಧಾರಣೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವೀರಸಂಗಪ್ಪ ಸಾಹುಕಾರ ಕೊಡೇಕಲ್ ಮಾತನಾಡಿ, ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ದಾಂಪತ್ಯಕ್ಕೆ ಕಾಲಿಡುವ ವಧುವರರಿಗೆ ಸಾವಿರಾರು ಜನರ ಆಶೀರ್ವಾದ ಸಿಗುತ್ತದೆ. ಶರಣಜೀವಿ ಬಸವರಾಜಪ್ಪ ಮುತ್ಯಾ ಅವರು ಕಳೆದ 19 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ಮದುವೆ ಮಾಡುವುದು ಸಾಮಾನ್ಯ ವಿಚಾರವಲ್ಲ.ಅವರ ಸೇವೆ ಅಮೋಘವಾದುದ್ದು. ಅವರ ಸೇವೆ ನಿರಂತರ ಸಾಗಲಿ ಎಂದು ಹೇಳಿದರು.
ಬಸವರಾಜಪ್ಪ ಮುತ್ಯಾ ಮಾತನಾಡಿ, ಸಾರ್ವಜನಿಕರು, ಹಿರಿಯರ ಸಹಕಾರದಿಂದ ಈ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ದಾಂಪತ್ಯಕ್ಕೆ ಕಾಲಿಟ್ಟ ಹೆಣ್ಣುಮಕ್ಕಳು ಅತ್ತೆ ಮಾವಂದಿರನ್ನು ತಂದೆ ತಾಯಿಯಂತೆ ನೋಡಿಕೊಳ್ಳಬೇಕು. ಆರೋಗ್ಯಕರ ಜೀವನ ನಡೆಸಿ, ಜೀವನದಲ್ಲಿ ಬರುವ ಸುಖ–ದು:ಖಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ಸಲಹೆ ನೀಡಿದರು.
ಸಾಮೂಹಿಕ ಮದುವೆಯಲ್ಲಿ ಭರ್ಜರಿ ವ್ಯಾಪಾರ ಕಂಡು ಬಂದಿತು. ಕಾರ್ಯಕ್ರಮದಲ್ಲಿ ಶಾಂತಪ್ಪ ಡೊಳ್ಳಿನ್, ಸೋಮಣ್ಣ ದೊರೆ, ಸಾಮಣ್ಣ ಡೊಳ್ಳಿನ್, ಶರಣಪ್ಪ ಸುರಪುರ, ಈರಯ್ಯಸ್ವಾಮಿ, ಕಾಸಿಂಸಾಬ ನಾಶಿ, ಮಹಾದೇವ, ನಿಂಗಪ್ಪ, ಪರಮಣ್ಣ ಸೇರಿ ಸಾವಿರಾರು ಜನರು ಪಾಲ್ಗೊಂಡಿದ್ದರು.