ಒಟ್ಟು 3 ಎಕರೆ ಜಮೀನಿನಲ್ಲಿ ಖರಬೂಜ ಬೆಳೆಯಲು ಸುಮಾರು ₹2 ರಿಂದ 3 ಲಕ್ಷ ಖರ್ಚು ಮಾಡಿದ್ದಾರೆ. ಇದರಲ್ಲಿ ಈಗಾಗಲೇ17 ಟನ್ ಕರಬೂಜ ಹಣ್ಣುಗಳನ್ನು ಕೆ.ಜಿ.ಗೆ ₹20ರಂತೆ ಮಾರಾಟ ಮಾಡಿದ್ದಾರೆ. ಆ ಮೂಲಕ ₹3.40 ಲಕ್ಷ ಗಳಿಸಿದ್ದಾರೆ. ಇನ್ನೊಂದು ವಾರದಲ್ಲಿ 10 ಟನ್ ಹಣ್ಣು ಮಾರಾಟ ಮಾಡಲಾಗುತ್ತದೆ. ಕನಿಷ್ಠ 1 ಲಕ್ಷ ಆದಾಯದ ನಿರೀಕ್ಷೆ ಹೊಂದಿದ್ದಾರೆ. ಲಾಕ್ಡೌನ್ ಮಧ್ಯೆಯೂ ಸರ್ಕಾರ ಹಣ್ಣು– ತರಕಾರಿಗಳ ಮಾರಾಟಕ್ಕೆ ರಿಯಾಯಿತಿ ನೀಡಿರುವುದರಿಂದ ಹಣ್ಣುಗಳನ್ನು ಪ್ರತಿ ನಿತ್ಯ ಕಟಾವು ಮಾಡಿ ಸಮೀಪದ ಯಾದಗಿರಿ, ಶಹಾಪುರ, ರಾಯಚೂರು, ನಾರಾಯಣಪೇಠ ಮಾರುಕಟ್ಟೆಗಳಿಗೆ ಬಾಡಿಗೆ ವಾಹನದ ಮೂಲಕ ತಲುಪಿಸುತ್ತಾರೆ. ಆ ಮೂಲಕವೇ ಉತ್ತಮ ಆದಾಯ ಗಳಿಸುತ್ತಿದ್ದಾರೆ. ‘ಸಮಸ್ಯೆಗಳನ್ನು ಪರಿಹರಿಸಲು ಇರುವ ಮಾರ್ಗವನ್ನು ಕಂಡುಕೊಳ್ಳುವ ಛಲ ನಮ್ಮಲ್ಲಿ ಇರಬೇಕು’ ಎಂದು ಸಾಂಬಶಿವ ರೆಡ್ಡಿ ವೆಂಕಟಕೃಷ್ಣಯ್ಯ ಹೇಳುತ್ತಾರೆ.