ಗುರುಮಠಕಲ್: ಪಟ್ಟಣದ ಅಂಚೆ ಕಚೇರಿ ಎದುರು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಮತ್ತು ನ್ಯಾಷನಲ್ ಯೂನಿಯನ್ ಆಫ್ ಗ್ರಾಮೀಣ ಡಾಕ್ ಸೇವಕ್ ಸಂಘಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕಮಲೇಶ್ಚಂದ್ರ ಸಮಿತಿ ವರದಿ ಅನುಷ್ಠಾನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
2016 ರಿಂದ ವರದಿ ಅನುಷ್ಠಾನಗೊಳಿಸುತ್ತಿಲ್ಲ. ಕಮಲೇಶ್ಚಂದ್ರ ಸಮಿತಿ ವರದಿ ಜಾರಿ ಮಾಡುವಂತೆ ನ್ಯಾಯಾಲಯವೂ ತಿಳಿಸಿದೆ. ಆದರೂ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಂಟು ಗಂಟೆ ಕೆಲಸ ನೀಡುವುದು. ಪಿಂಚಣಿ ಸೌಲಭ್ಯ ನೀಡುವುದು. ಸೇವಾ ಹಿರಿತನದ ಆಧಾರದ ಮೇಲೆ (12, 24, 36) ಜಿ.ಡಿ.ಎಸ್. ನೌಕರರಿಗೆ ವಿಶೇಷ ಭತ್ಯೆ ನೀಡಬೇಕು. ನೌಕರರಿಗೆ ಅವೈಜ್ಞಾನಿಕ ಗುರಿ ನಿಗದಿಪಡಿಸಿ ಮೇಳಗಳನ್ನು ಆಯೋಜಿಸುವುದನ್ನು ನಿಲ್ಲಿಸಬೇಕು. ವಿಮಾ ಮೊತ್ತವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಗ್ರ್ಯಾಚುಟಿ ಮೊತ್ತವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳುವ ಅವಕಾಶ ನೀಡಬೇಕು. ಜಿಡಿಎಸ್ ನೌಕರರ ಕುಟುಂಕ್ಕೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಮತ್ತು ಜಿಡಿಎಸ್ ನೌಕರರ ಮೇಲಾಗುತ್ತಿರುವ ಕಿರುಕುಳ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈಗ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಸಂಘದ ಜಂಟಿ ಕ್ರಿಯಾ ಸಮಿತಿಯು ಡಿಸೆಂಬರ್ 5 ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ಚಿಂತನೆ ನಡೆಸುತ್ತಿದ್ದು, ಅಷ್ಟರೊಳಗೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಹೇಳಿದರು.
ಸುಭಾಶಗೌಡ, ಸಾಯಿಬಣ್ಣ, ಪದ್ಮಾಕರ, ಚಂದ್ರಶೇಖರ ಆವಂಟಿ, ನವಾಬ್ ಖಾನ್, ಮಹ್ಮದ್ ಮೌಲಾನಾ, ಶ್ರೀನಿವಾಸ, ಮಹೇಂದ್ರರೆಡ್ಡಿ ಜಿ.ಚಪೆಟ್ಲಾ, ಈಶ್ವರಲಾಲ್, ಭೀಮರೆಡ್ಡಿ, ಚೈನೇಶ ನಾಯ್ಕೋಡಿ, ಮೌನೇಶ, ಕವಿತಾ, ಶಿವಕುಮಾರ ಹಾಗೂ ಮಾಣಿಕಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.