ಯಾದಗಿರಿ: ಪತಿ ತನ್ನ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಮಲ್ದಾರ ತಾಂಡಾದಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪತಿ ಮಲ್ಲಪ್ಪ (45) ಆತನ ಪತ್ನಿ ಸೋನಿಬಾಯಿ (40) ಅವರನ್ನು ಕೊಲೆ ಮಾಡಿದ್ದಾನೆ. ಈ ವೇಳೆ ತಾಯಿಯನ್ನು ರಕ್ಷಿಸಲು ಹೋಗಿದ್ದ ಮಗ ಅರ್ಜುನನಿಗೆ (17) ಗಂಭೀರವಾಗಿ ಗಾಯಗೊಂಡಿದ್ದಾನೆ.
ಭಾನುವಾರ ನಿನ್ನೆ ರಾತ್ರಿ ಸೋನಿಬಾಯಿ ಹಾಗೂ ಅರ್ಜುನ ಮನೆಯಲ್ಲಿ ಮಲಗಿದ್ದಾಗ ನಡೆದ ಘಟನೆ ನಡೆದಿದೆ. ಕೌಟುಂಬಿಕ ಕಲಹ ಉಂಟಾಗಿ ಪತ್ನಿ ಸೋನಿಬಾಯಿಯನ್ನು ಕೊಡಲಿಯಿಂದ ಕೊಚ್ಚಿ ಪತಿ ಮಲ್ಲಪ್ಪ ಕೊಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಹೋದ ಮಗನಿಗೂ ಕೊಡಲಿಯಿಂದ ಹೊಡೆದಿದ್ದಾನೆ.
ಕೊಲೆ ಮಾಡಿದ ನಂತರ ಮಲ್ಲಪ್ಪ ಮನೆ ಮುಂದಿನ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಕೊಲೆ ಆರೋಪಿ ಮಲ್ಲಪ್ಪ, ಗಂಭೀರವಾಗಿ ಗಾಯಗೊಂಡ ಮಗ ಅರ್ಜುನ್ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.