ಶಹಾಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಹದಭರಿತ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬರ ಹಾಗೂ ಕಡು ಬಿಸಿಲಿನಿಂದ ಕಂಗೆಟ್ಟ ಜನತೆಗೆ ಹಾಗೂ ರೈತಾಪಿ ವರ್ಗದಲ್ಲಿ ವರ್ಷಧಾರೆಯಿಂದ ಮತ್ತೆ ಭರವಸೆಯ ಬೆಳಕು ಮೂಡಿದೆ.
‘ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ರೈತರು ಜಮೀನು ಸ್ವಚ್ಛ ಮಾಡಿಕೊಂಡಿದ್ದರು. ಉತ್ತಮವಾಗಿ ಸುರಿದ ಮಳೆಯಿಂದ ಜಮೀನಿನಲ್ಲಿ ನೀರು ಹಿಂಗಿಕೊಂಡಿದೆ. ಇನ್ನೆರಡು ದಿನ ಬಿಟ್ಟು ಮತ್ತೆ ರಂಟೆ ಹಾಗೂ ನೇಗಿಲು ಹೊಡೆಯುತ್ತೇವೆ. ಸಕಾಲಕ್ಕೆ ಮಳೆ ಬಂದಿದೆ. ಇನ್ನೊಂದು ಉತ್ತಮ ಮಳೆಯಾದರೆ ಸಾಕು ಹೆಸರು ಬಿತ್ತನೆಗೆ ಸಜ್ಜಾಗುತ್ತೇವೆ’ ಎನ್ನುತ್ತಾರೆ ರೈತ ಅಂಬ್ಲಪ್ಪ.
‘ಮಳೆ ಮಾಪನ ವರದಿಯಂತೆ ಶಹಾಪುರ 48.4 ಮಿ.ಮೀ, ಭೀಮರಾಯನಗುಡಿ 45 ಮಿ.ಮೀ, ಹತ್ತಿಗುಡೂರ 25 ಮಿ.ಮೀ, ದೋರನಹಳ್ಳಿ 45 ಮಿ.ಮೀ, ಗೋಗಿ 38.6 ಮಿ.ಮೀ ಮಳೆಯಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಸುನಿಲಕುಮಾರ ಯರಗೋಳ ತಿಳಿಸಿದ್ದಾರೆ.