ಯಾದಗಿರಿ: ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಸಾಲದು. ಕಡ್ಡಾಯವಾಗಿ ವಾರಕೊಮ್ಮೆ ಶಾಲೆಗೆ ಬಂದು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರಲ್ಲಿ ಚರ್ಚಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಹ್ಮದ ಖುರೇಸಿ ಹೇಳಿದರು.
ವಡಗೇರಾ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಕಾಲು ಚೀಲಗಳನ್ನು ವಿತರಿಸಿ ಮಾತನಾಡಿದರು.
ಈಗಾಗಲೇ ಶಾಸಕರನ್ನು ಭೇಟಿಯಾಗಿ ಉರ್ದು ಪ್ರೌಢಶಾಲೆ ಆರಂಭಿಸಲು ಮನವಿ ಸಲ್ಲಿಸಲಾಗಿದೆ. ಅವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದಲ್ಲಿ ಉರ್ದು ಪ್ರೌಢಶಾಲೆ ಆರಂಭವಾಗುವ ಭರವಸೆ ಇದೆ. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸಬಾರದು ದಿನಾಲೂ ಶಾಲೆಗೆ ಕಳುಹಿಸಬೇಕು ಎಂದು ತಿಳಿಸಿದರು.