ಬೆಂಗಳೂರು: ‘ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಸ್ನೇಹಿ ವಾತಾವರಣ ಕಲ್ಪಿಸುವುದೇ ನಮ್ಮ ಸರ್ಕಾರದ ಆದ್ಯತೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದರು.
ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ಶನಿವಾರ ಏರ್ಪಡಿಸಿದ್ದ ‘ಫೋನ್–ಇನ್ ಕಾರ್ಯಕ್ರಮ’ದಲ್ಲಿ ಅವರು ಪ್ರತಿಕ್ರಿಯಿಸಿದರು.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ಬಹುತೇಕ ಎಲ್ಲ ಜಿಲ್ಲೆಗಳ ಶಿಕ್ಷಕರೂ ತಮ್ಮ ಬವಣೆಗಳನ್ನು ಸಚಿವರ ಜೊತೆ ಹಂಚಿಕೊಂಡರು. 55 ಶಿಕ್ಷಕರ ಕರೆಗಳಿಗೆ ಉತ್ತರಿಸಿದ ಸಚಿವರು ಪ್ರತಿಯೊಬ್ಬರ ಮಾತನ್ನು ತಾಳ್ಮೆಯಿಂದ ಆಲಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಕಡ್ಡಾಯ ವರ್ಗಾವಣೆ ನೀತಿ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಲೋಪ, ಶಿಕ್ಷಕರ ವೇತನ ಪಾವತಿ ವಿಳಂಬ ಸೇರಿದಂತೆ ಹತ್ತು ಹಲವು ಪ್ರಮುಖ ಸಮಸ್ಯೆಗಳ ಕುರಿತು ಶಿಕ್ಷಕ– ಶಿಕ್ಷಕಿಯರು ಸಚಿವರ ಗಮನ ಸೆಳೆದರು.
ಸಚಿವ ಜೊತೆಗಿದ್ದ ಅಧಿಕಾರಿಗಳ ತಂಡ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಚಿವರ ಜೊತೆ ಸಮಾಲೋಚನೆ ನಡಸಿತು. ಕರೆ ಮಾಡಿದ್ದ ಪ್ರತಿಯೊಬ್ಬರ ಅಹವಾಲುಗಳ ವಿವರವನ್ನು ದಾಖಲಿಸಿಕೊಂಡ ಅಧಿಕಾರಿಗಳು, ಅವುಗಳನ್ನು ಇತ್ಯರ್ಥಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸ್ಥಳದಲ್ಲೇ ಚರ್ಚಿಸಿದರು.
‘ರಾಜ್ಯದ ಯಾವುದೋ ಮೂಲೆಯಲ್ಲಿರುವ ಶಿಕ್ಷಕರೂ ನೇರವಾಗಿ ಅಹವಾಲು ಹೇಳಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದಕ್ಕಾಗಿ ಸಚಿವರು ‘ಪ್ರಜಾವಾಣಿ’ಗೆ ಧನ್ಯವಾದ ಸಲ್ಲಿಸಿದರು’ ಎಂದರು.
(ಫೋನ್–ಇನ್ ಕಾರ್ಯಕ್ರಮದ ಸಂಪೂರ್ಣ ವಿವರಕ್ಕಾಗಿ ನಾಳೆಯ (ಸೆ. 8)ಪ್ರಜಾವಾಣಿ ಸಂಚಿಕೆ ಹಾಗೂ ವೆಬ್ಸೈಟ್ನೋಡಿ)