ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿರುವ ವಿಡಿಯೊ ಪ್ರಕರಣದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಂಡದ ರಾಷ್ಟ್ರೀಯ ಸಂಚಾಲಕ ಅರುಣ್ ಬೀರೆಡ್ಡಿ ಅವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಈಗ ಅದರಲ್ಲಿ ಕ್ರಿಮಿನಲ್ ಸಂಚು ಆರೋಪವನ್ನು ಸೇರಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದರು.
ತೆಲಂಗಾಣ ಮೂಲದವರಾದ ಅರುಣ್ ಅವರನ್ನು ಪೊಲೀಸರು ಶುಕ್ರವಾರವೇ ಬಂಧಿಸಿದ್ದರು. ಅಮಿತ್ ಶಾ ಭಾಷಣ ತಿರುಚಿದ ಪ್ರಕರಣದಲ್ಲಿ ಬಂಧಿತರಾದ ಮೊದಲಿಗರು ಇವರು.
‘ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120ಬಿಅನ್ನು (ಕ್ರಿಮಿನಲ್ ಸಂಚಿಗೆ ಶಿಕ್ಷೆ) ಎಫ್ಐಆರ್ಗೆ ಸೇರಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು. ಬಂಧನದ ನಂತರ ಅರುಣ್ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ವಿಶೇಷ ಪೊಲೀಸ್ ಘಟಕದಿಂದ ವಿಚಾರಣೆ ನಡೆಸುವ ಸಲುವಾಗಿ ಅವರನ್ನು ಮೂರು ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ನ್ಯಾಯಾಲಯ ನೀಡಿದ್ದು, ವಿಚಾರಣೆ ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ನಿರ್ವಹಿಸುವವ ಪ್ರಮುಖರಲ್ಲಿ ಅರುಣ್ ಅವರೂ ಒಬ್ಬರು. ಅಮಿತ್ ಶಾ ಅವರ ಭಾಷಣ ತಿರುಚಲಾಗಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪಿಗಳಲ್ಲಿ ಪ್ರಮುಖರು.