ಛಿಂದವಾಢ (ಮಧ್ಯಪ್ರದೇಶ): ಮಧ್ಯಪ್ರದೇಶದ ಛಿಂದವಾಡ ನಗರದ ಮೇಯರ್ ವಿಕ್ರಮ್ ಅಹಾಕೆ ಅವರು ಮತದಾನದ ದಿನ ‘ಉಲ್ಟಾ’ ಹೊಡೆದಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.
ಛಿಂದವಾಡ ಲೋಕಸಭಾ ಕ್ಷೇತ್ರದ ಮತದಾನ ಶುಕ್ರವಾರ ನಡೆಯಿತು. ಇಲ್ಲಿ ಕಾಂಗ್ರೆಸ್ನ ನಕುಲ್ನಾಥ್ (ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರ ಪುತ್ರ) ಮತ್ತು ಬಿಜೆಪಿಯ ವಿವೇಕ್ ಬಂಟಿ ಸಾಹು ಮಧ್ಯೆ ಪೈಪೋಟಿಯಿದೆ.
ವಿಕ್ರಮ್ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸಮ್ಮುಖದಲ್ಲಿ ಏಪ್ರಿಲ್ 1ರಂದು ಬಿಜೆಪಿ ಸೇರಿದ್ದರು. ಆದರೆ ಶುಕ್ರವಾರ ಅವರು ‘ಕಾಂಗ್ರೆಸ್ ಅಭ್ಯರ್ಥಿ ನಕುಲ್ನಾಥ್ಗೆ ಮತ ನೀಡಿ’ ಎಂದು ಮನವಿ ಮಾಡಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
‘ಬಿಜೆಪಿ ಸೇರಿದ ಬಳಿಕ ನನಗೆ ಉಸಿರು ಕಟ್ಟಿದಂತಹ ಅನುಭವ ಉಂಟಾಗಿದೆ. ಛಿಂದವಾಢದ ಅಭಿವೃದ್ಧಿಗೆ ಶ್ರಮಿಸಿದ ಕಮಲ್ನಾಥ್ ಮತ್ತು ನಕುಲ್ನಾಥ್ ಅವರ ಪರ ನಾನು ನಿಲ್ಲುತ್ತೇನೆ. ನಕುಲ್ನಾಥ್ ಅವರ ಗೆಲುವನ್ನು ಖಾತರಿಪಡಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತೇನೆ’ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.