ಬೆಂಗಳೂರು: ‘ತೇಜಸ್ವಿ ಸೂರ್ಯ ಕಣದಲ್ಲಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯವರು ಅಕ್ರಮವಾಗಿ ಹಣ ಸಾಗಣೆ ಮಾಡಿದ್ದಾರೆ ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಲ್ಲ ಕಡೆ ಹಂಚಲು ಬಿಜೆಪಿಯವರು ತೆಗೆದುಕೊಂಡು ಹೋಗುತ್ತಿದ್ದ ₹2 ಕೋಟಿಯನ್ನು ಚುನಾವಣಾ ಅಧಿಕಾರಿಗಳು ಕಾಟನ್ ಪೇಟೆಯಲ್ಲಿ ಜಪ್ತಿ ಮಾಡಿದ್ದರು. ಹೀಗೆ ಹಲವು ಕಡೆಗಳಲ್ಲಿ ಬಿಜೆಪಿಯವರು ಸುಮಾರು ಹಣ ಸಾಗಿಸಿದ್ದಾರೆ’ ಎಂದು ದೂರಿದರು.
‘ಜಪ್ತಿ ಮಾಡಿರುವ ಹಣ ವಶಪಡಿಸಿಕೊಂಡಿರುವ ಪ್ರಕರಣವನ್ನು ಅಧಿಕಾರಿಗಳ ಮೂಲಕ ಮುಚ್ಚಿ ಹಾಕಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಂದು ಕ್ಷೇತ್ರದ ಮೇಲೆ ನಾವು ಗಮನಕೊಟ್ಟಿದ್ದೇವೆ. ತನಿಖೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಚುನಾವಣಾ ಆಯೋಗ ಈ ವಿಷಯವನ್ನು ನೋಡಿಕೊಳ್ಳಲಿದೆ’ ಎಂದರು.