ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹತ್ತು ವರ್ಷದಲ್ಲಿ ದೇಶ ಲೂಟಿ ಮಾಡಿದ್ದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ ವಾಗ್ದಾಳಿ

Published 3 ಮೇ 2024, 11:53 IST
Last Updated 3 ಮೇ 2024, 11:53 IST
ಅಕ್ಷರ ಗಾತ್ರ

ಕಾರವಾರ/ಕುಮಟಾ: ಹತ್ತು ವರ್ಷದಲ್ಲಿ ದೇಶ ಲೂಟಿ ಮಾಡಿದ್ದೇ ಬಿಜೆಪಿ ಸಾಧನೆ. ಬಿಜೆಪಿಯವರಿಗೆ ರೈತರು, ಕಾರ್ಮಿಕರು, ಶ್ರಮಿಕರ ಕಷ್ಟ ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕುಮಟಾದ ಮಣಕಿ ಮೈದಾನದಲ್ಲಿ ಶುಕ್ರವಾರ ಪ್ರಜಾಧ್ವನಿ-2ರ ಸಮಾವೇಶದಲ್ಲಿ  ಅವರು ಮಾತನಾಡಿದರು.

ಪ್ರಧಾನಿ ಮೋದಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರದ ಶೇ.40 ಕಮೀಷನ್ ಹೊಡೆಯುತ್ತಿದೆ ಎಂದು ಪ್ರಧಾನಿಗೆ ದೂರು ನೀಡಿದ್ದರು. ಆಗ ಏಕೆ ಕ್ರಮ ಕೈಗೊಂಡಿರಲಿಲ್ಲ ಎಂಬುದನ್ನು ಪ್ರಧಾನಿ ಹೇಳಬೇಕು ಎಂದರು.

ಪ್ರಜ್ವಲ್ ರೇವಣ್ಣ ಪಾಪಕೃತ್ಯ ಎಸಗಿದ್ದು ಅರಿತಿದ್ದರೂ ಅವರದೇ ಪಕ್ಷದ ಜತೆ ಮೈತ್ರಿ ಮಾಡಿಕೊಂಡು, ಅವರಿಗೆ ಟಿಕೆಟ್ ನೀಡಿದ್ದಾರೆ. ಮೋದಿ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುತ್ತದೆ ಎಂಬ ಯಾವುದೇ ಭರವಸೆ ಜನರಲ್ಲಿ ಉಳಿದಿಲ್ಲ ಎಂದರು.

ಮೋದಿ ಒಳ್ಳೆಯ ನಾಟಕಕಾರ. ಯಾವ ಇವೆಂಟ್ ಹೇಗೆ ನಿರ್ವಹಿಸಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ ಎಂದು ಲೇವಡಿ ಮಾಡಿದರು.

'ಒಳ್ಳೆ ದಿನ ತರುತ್ತೀನಿ ಎಂದು ಜನರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡಿದ ಮೋದಿ ಬಡವರ ಯಾವ ಸಮಸ್ಯೆಯನ್ನೂ ಪರಿಹರಿಸಲಿಲ್ಲ' ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,‌ ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಗೌರವಿಸುತ್ತದೆ. ಅದಕ್ಕಾಗಿಯೇ ಈ ಬಾರಿ ರಾಜ್ಯದಲ್ಲಿ ಆರು ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ನಾವು ಜಾತಿ, ಧರ್ಮದ ಆಧಾರವಿಲ್ಲದೆ ಎಲ್ಲರಿಗೂ ಸಮನಾಗಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ, ಬಿಜೆಪಿ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ ಎಂದರು.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಈಗಾಗಲೆ ಯೋಜನೆ ರೂಪಿಸಲಾಗುತ್ತಿದೆ. ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕುಮಟಾದಲ್ಲಿಯೇ ಸ್ಥಾಪಿಸಲಾಗುವುದು ಎಂದರು.

ಸಚಿವ ಮಂಕಾಳ ವೈದ್ಯ, ಪ್ರಮುಖರಾದ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ಭೀಮಣ್ಣ ನಾಯ್ಕ, ವಿನಯಕುಮಾರ ಸೊರಕೆ, ರಮಾನಾಥ ರೈ, ಇತರರು ಇದ್ದರು.

ಕಾಂಗ್ರೆಸ್ ಸೇರಿದ ತಂಝೀಮ್ ಅಧ್ಯಕ್ಷ

ಜೆಡಿಎಸ್‌ನಲ್ಲಿದ್ದ ಭಟ್ಕಳದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT