ಶಿರಸಿ: ಕಾಂಗ್ರೆಸ್ ಸೇರ್ಪಡೆ ಸಂಬಂಧ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬೆಂಬಲಿಗರ ಜತೆ ಮಂಗಳವಾರ ನಗರದ ಕೆಡಿಸಿಸಿ ಬ್ಯಾಂಕ್ ವಿಶ್ರಾಂತಿ ಗೃಹದಲ್ಲಿ ಆಂತರಿಕ ಸಭೆ ನಡೆಸಿದರು. ಮೊದಲ ಹಂತವಾಗಿ ತಮ್ಮ ಪುತ್ರನ ಜತೆ ಪ್ರಮುಖ ಬೆಂಬಲಿಗರನ್ನು ಕಾಂಗ್ರೆಸ್ ಸೇರ್ಪಡೆ ಮಾಡಲು ಇಲ್ಲಿ ನಿರ್ಧರಿಸಿದರು.
ಬನವಾಸಿ ಹೋಬಳಿಯ ಒಂಭತ್ತು ಪಂಚಾಯಿತಿ ಪ್ರಮುಖರು, ತಮ್ಮ ಬೆಂಬಲಿಗರ ಜತೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿಗೆ ಬಂದ ನಂತರ ತಮ್ಮ ಗೌರವಕ್ಕೆ ಧಕ್ಕೆ ಮಾಡಲಾಗುತ್ತಿದೆ. ರಾಜಕೀಯ ಪ್ರಭಾವ ಬಳಸಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಕೆಲ ನಾಯಕರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾಗಿ ಸಭೆಯಲ್ಲಿ ಭಾಗವಹಿಸಿದ ಕೆಲ ಬೆಂಬಲಿಗರು ಮಾಹಿತಿ ನೀಡಿದರು.
'ಮೊದಲ ಹಂತದಲ್ಲಿ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಹಾಗೂ ಪ್ರಮುಖ ಬೆಂಬಲಿಗರು ಕಾಂಗ್ರೆಸ್ ಸೇರಲಿದ್ದಾರೆ. ವಾರದೊಳಗೆ ಸೇರ್ಪಡೆ ಕಾರ್ಯ ಆಗಲಿದ್ದು, ನಾಳೆಯೊಳಗೆ ಸೇರ್ಪಡೆ ದಿನಾಂಕ ನಿರ್ಧಾರವಾಗಲಿದೆ. ಆದರೆ ಹೆಬ್ಬಾರ್ ಅವರು ಬಿಜೆಪಿ ಪಕ್ಷವನ್ನು ಅವರಾಗಿ ಬಿಡುವುದಿಲ್ಲ. ಉಚಪಚುನಾವಣೆ ಎದುರಿಸಲು ಕಷ್ಟಸಾಧ್ಯದ ಕಾರಣ ಶಾಸಕರಿದ್ದುಕೊಂಡೇ ಕಾಂಗ್ರೆಸ್ ಗೆ ಪರೋಕ್ಷ ಬೆಂಬಲ ನೀಡಲು ನಿರ್ಧರಿಸಿದ್ದಾರೆ' ಎಂದು ಸಭೆಯಲ್ಲಿ ಪಾಲ್ಗೊಂಡ ಹೆಬ್ಬಾರ್ ನಿಕಟವರ್ತಿ ಒಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
'ಸಧ್ಯ ಹೆಬ್ಬಾರ್ ಅವರು ಬಿಜೆಪಿಯ ಯಾವುದೇ ಕಾರ್ಯಕ್ರಮ, ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ. ಹೀಗಾಗಿ ಪಕ್ಷದಿಂದ ಉಚ್ಛಾಟನೆ ಮಾಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಹೆಬ್ಬಾರ್ ಅವರನ್ನು ಉಚ್ಛಾಟನೆ ಮಾಡಿದರೆ ಹೆಬ್ಬಾರ್ ಅವರಿಗೆ ಹೆಚ್ಚಿನ ಅನುಕೂಲ ಆಗಲಿದೆ' ಎಂದರು.