ದಿಲೀಪ್ ಟಿರ್ಕೆ (ಬಿಜೆಡಿ)
ಒಡಿಶಾದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಸುಂದರಗಢದಿಂದ ಆಡಳಿತಾರೂಡ ಬಿಜು ಜನತಾ ದಳವು (ಬಿಜೆಡಿ) ರಾಜಕಾರಣಿ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ದಿಲೀಪ್ ಕುಮಾರ್ ಟಿರ್ಕೆ ಅವರನ್ನು ಸ್ಪರ್ಧೆಗಿಳಿಸಿದೆ. ರಾಜ್ಯಸಭೆಯ ಮಾಜಿ ಸದಸ್ಯರೂ ಆಗಿರುವ ದಿಲೀಪ್, 2010ರಲ್ಲಿ ಹಾಕಿ ಆಟಕ್ಕೆ ನಿವೃತ್ತಿ ಘೋಷಿಸಿದ್ದರು. 400 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಖ್ಯಾತಿ ಇವರಿಗಿದೆ. ನವೀನ್ ಪಟ್ನಾಯಕ್ ನೇತೃತ್ವದ ಆಡಳಿತಾರೂಢ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಬಹುದು ಎಂಬುದು ದಿಲೀಪ್ ಅವರ ವಿಶ್ವಾಸ. ಕಾಂಗ್ರೆಸ್, ಈ ಕ್ಷೇತ್ರದಿಂದ ಜನಾರ್ದನ ದೇವೂರಿ ಅವರನ್ನು ಕಣಕ್ಕಿಳಿಸಿದೆ. ದಿಲೀಪ್ ಅವರು ಸದ್ಯ ಹಾಕಿ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಕ್ಷೇತ್ರದ ಜನರು ಕ್ರೀಡಾ ಸಾಧಕನ ಕೈಬಿಡಲಾರರು ಎಂಬ ವಿಶ್ವಾಸ ಬಿಜೆಡಿ ಮುಖಂಡರದ್ದಾಗಿದೆ.
****
ಜುಯೆಲ್ ಓರಮ್ (ಬಿಜೆಪಿ)
ಸುಂದರಗಢ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜುಯೆಲ್ ಓರಮ್ ಅವರನ್ನೇ ಬಿಜೆಪಿಯು ಈ ಬಾರಿಯೂ ಸ್ಪರ್ಧಾ ಕಣಕ್ಕಿಳಿಸಿದೆ. ಕೇಂದ್ರದ ಮಾಜಿ ಸಚಿವರಾಗಿರುವ ಜುಯೆಲ್ ಅವರಿಗೆ ಐದು ಬಾರಿ ಸಂಸದರಾಗಿರುವ ಹಿರಿಮೆ ಇದೆ. 2019ರ ಚುನಾವಣೆಯಲ್ಲಿ ಅವರು 2,23,065 ಮತಗಳ ಅಂತರದಿಂದ ಬಿಜೆಡಿಯ ಸುನಿತಾ ಬಿಸ್ವಾಸ್ ಅವರನ್ನು ಪರಾಭವಗೊಳಿಸಿದ್ದರು. ಸದ್ಯ ಬಿಜೆಪಿ ಒಡಿಶಾ ರಾಜ್ಯ ಘಟಕದ ಉಪಾಧ್ಯಕ್ಷರಾಗಿರುವ ಜುಯೆಲ್, ಈ ಹಿಂದೆ ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿರುವ ಹಾಗೂ ಸ್ಥಳೀಯವಾಗಿ ಪ್ರಭಾವಿ ಮುಖಂಡರಾಗಿರುವ ಇವರು ಈ ಬಾರಿಯೂ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಕಮಲ ಪಕ್ಷದ ನಾಯಕರದ್ದಾಗಿದೆ. ಜುಯೆಲ್ ಅವರು ಒಡಿಶಾ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.