ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ 2004ರಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ.ಗದ್ದಿಗೌಡರ ಮತ್ತು ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ನಡುವೆ ನೇರ ಹಣಾಹಣಿಯಿದೆ. ಚುನಾವಣೆ ಎದುರಿಸುವುದನ್ನು ಗದ್ದಿಗೌಡರು 20 ವರ್ಷಗಳಿಂದ ಕರಗತ ಮಾಡಿಕೊಂಡಿದ್ದಾರೆ.
ಸರಳ, ಸೌಮ್ಯ ಸ್ವಭಾವದ ಗದ್ದಿಗೌಡರ ಸುಗಮ ಹಾದಿಗೆ ಬಿಜೆಪಿ ಸಂಘಟನೆ ನೆರವಾಗುವ ನಿರೀಕ್ಷೆಯಿದೆ. ಅವರ ವಿಷಯದಲ್ಲಿ ಭಿನ್ನಮತವೂ ಇಲ್ಲ. ಜನತಾ ಪರಿವಾರದ ಹಿನ್ನೆಲೆಯುಳ್ಳ ಅವರಿಗೆ ಜೆಡಿಎಸ್ ಜೊತೆ ಉತ್ತಮ ಸಂಬಂಧವಿದೆ
ಸಂಯುಕ್ತಾ ಪಾಟೀಲ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಬಿಟ್ಟರೆ ರಾಜಕೀಯ ಅನುಭವವಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಚುನಾವಣೆ ನಿರ್ವಹಿಸಿದ್ದು ಪುತ್ರಿ ಗೆಲುವಿಗೆ ನೆರವಾಗಬಹುದು ಎಂದು ಸಚಿವ ಶಿವಾನಂದ ಪಾಟೀಲ ನಂಬಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದ ವೀಣಾ ಕಾಶಪ್ಪನವರ ಈ ಸಲ ಟಿಕೆಟ್ ಸಿಗದಿರುವುದಕ್ಕೆ ಮುನಿಸಿಕೊಂಡಿದ್ದಾರೆ. ಸಂಯುಕ್ತಾ ಪಾಟೀಲರಿಗೆ ಟಿಕೆಟ್ ನೀಡಿದ್ದಕ್ಕೆ ಕಾಂಗ್ರೆಸ್ನಲ್ಲೇ ಅಸಮಾಧಾನವಿದೆ. ಹೊರಗಿನವರು, ಒಳಗಿನವರು ಎಂಬ ವಿಷಯ ಮುನ್ನೆಲೆಗೆ ಬಂದು, ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.