ಪಶ್ಚಿಮ ಬಂಗಾಳದ ದಕ್ಷಿಣ ದಿನಜ್ಪುರ ಜಿಲ್ಲೆಯ ಬಾಲೂರ್ಘಾಟ್ ಲೋಕಸಭಾ ಕ್ಷೇತ್ರವು ಬಿಜೆಪಿ ಮತ್ತು ಟಿಎಂಸಿಯ ಘಟಾನುಘಟಿ ನಾಯಕರ ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ. ಬಿಜೆಪಿಯು ಈ ಬಾರಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುಕಾಂತಾ ಮಜುಂದಾರ್ ಅವರನ್ನು ಕಣಕ್ಕಿಳಿಸಿದೆ. ಸುಕಾಂತಾ ಅವರು ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ, 5,39,317 ಮತಗಳನ್ನು ಪಡೆದು ತೃಣಮೂಲ (ಟಿಎಂಸಿ) ಕಾಂಗ್ರೆಸ್ನ ಅರ್ಪಿತಾ ಘೋಷ್ ಅವರನ್ನು ಪರಾಭವಗೊಳಿಸಿದ್ದರು. ಸಂದೇಶ್ಖಾಲಿಯಲ್ಲಿ ಟಿಎಂಸಿ ಮುಖಂಡನ ಮೇಲೆ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಜನರು ಟಿಎಂಸಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಬಿಜೆಪಿ ನಂಬಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ತಮಗೂ ವರದಾನವಾಗಲಿದೆ ಎಂಬುದು ಸುಕಾಂತಾ ಅವರ ವಿಶ್ವಾಸ. 2009ಕ್ಕೂ ಮೊದಲು ಈ ಕ್ಷೇತ್ರವು ಎಡರಂಗದ ಜೊತೆ ಗುರುತಿಸಿಕೊಂಡಿದ್ದ ಆರ್ಎಸ್ಪಿಯ ಭದ್ರಕೋಟೆಯಾಗಿತ್ತು.