ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಕಿಡಿ

ಬೆಂಗಳೂರು: ಇಬ್ಬರು ಸಿನಿಮಾ ಸ್ಟಾರ್ಗಳ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 'ಪ್ರಸ್ತುತ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ' ಎಂದು ಕಿಚ್ಚ ಸುದೀಪ್ ಹೇಳಿದ್ದ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಕಿಡಿ ಕಾರಿದ್ದಾರೆ.
ಈ ಇಬ್ಬರು ನಟರ ಟ್ವೀಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾ ಭಾಷೆ ಮತ್ತು ರಾಷ್ಟ್ರ ಭಾಷೆಯ ಚರ್ಚೆಗೆ ಕಿಚ್ಚು ಹಚ್ಚಿದೆ. ಅದಾಗಲೇ ಸಿನಿಮಾ ಪ್ರಿಯರು, ಹಿಂದಿ ಪರ–ವಿರೋಧಿಗಳು ಚರ್ಚೆಗೆ ಇಳಿದಿದ್ದಾರೆ.
ಸುದೀಪ್ ಅವರ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಅಜಯ್ ದೇವಗನ್, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರೀಯ ಭಾಷೆಯಾಗಿದೆ. ಜನ ಗಣ ಮನ' ಎಂದು ಸುದೀಪ್ ಅವರನ್ನು ಟ್ಯಾಗ್ ಮಾಡಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।— Ajay Devgn (@ajaydevgn) April 27, 2022
ಇದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್, ' ಆ ನನ್ನ ಹೇಳಿಕೆಯ ಹಿನ್ನೆಲೆಗೂ ಅದು ನಿಮಗೆ ತಲುಪಿರುವುದಕ್ಕೂ ಸಂಪೂರ್ಣ ವ್ಯತ್ಯಾಸವಾಗಿದೆ. ನಾನು ನಿಮ್ಮನ್ನು ನೇರವಾಗಿ ಭೇಟಿಯಾದಾಗ ಆ ಹೇಳಿಕೆಯ ಬಗ್ಗೆ ವಿವರಿಸುತ್ತೇನೆ. ಇದು ಯಾರಿಗೂ ನೋವುಂಟು ಮಾಡಲು, ಪ್ರಚೋದಿಸಲು ಅಥವಾ ಚರ್ಚೆಯನ್ನು ಹುಟ್ಟುಹಾಕಲು ನೀಡಿದ ಹೇಳಿಕೆಯಲ್ಲ. ಹಾಗೇಕೆ ನಾನು ಮಾಡಲಿ ಸರ್,' ಎಂದು ಅಜಯ್ ದೇವಗನ್ ಅವರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ–ಪ್ರತಿಮೆ ಅನಾವರಣ ಮಾಡಿಕೊಳ್ಳುವಷ್ಟು ದೊಡ್ಡವನಲ್ಲ: ನಟ ಸುದೀಪ್
Hello @ajaydevgn sir.. the context to why i said tat line is entirely different to the way I guess it has reached you. Probably wil emphasis on why the statement was made when I see you in person. It wasn't to hurt,Provoke or to start any debate. Why would I sir 😁 https://t.co/w1jIugFid6
— Kichcha Sudeepa (@KicchaSudeep) April 27, 2022
ನಮ್ಮ ರಾಷ್ಟ್ರದ ಎಲ್ಲ ಭಾಷೆಗಳನ್ನೂ ನಾನು ಪ್ರೀತಿಸುವೆ ಹಾಗೂ ಗೌರವಿಸುವೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದು, 'ಈ ವಿಷಯವು ಇಲ್ಲಿಗೇ ನಿಲ್ಲಲು ಬಯಸುತ್ತೇನೆ....ಮೇಲೆ ತಿಳಿಸಿರುವಂತೆ ನನ್ನ ಹೇಳಿಕೆಯು ಸಂಪೂರ್ಣ ಭಿನ್ನವಾದ ಸನ್ನಿವೇಶದಲ್ಲಿ ಹೇಳಿರುವುದಾಗಿದೆ. ನಿಮ್ಮ ಮೇಲೆ ಅಪಾರ ಪ್ರೀತಿಯಿದೆ ಮತ್ತು ಸದಾ ಶುಭವನ್ನು ಹಾರೈಸುತ್ತೇನೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ' ಎಂದು ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ.
I love and respect every language of our country sir. I would want this topic to rest,,, as I said the line in a totally different context.
Mch luv and wshs to you always.
Hoping to seeing you soon.
🥳🥂🤜🏻🤛🏻— Kichcha Sudeepa (@KicchaSudeep) April 27, 2022
ಕೆಜಿಎಫ್ ಚಾಪ್ಟರ್–2 ಸಿನಿಮಾ ದೇಶದಾದ್ಯಂತ ಹಾಗೂ ವಿದೇಶದಲ್ಲಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಸಂಗ್ರಹಿಸಿರುವ ಬೆನ್ನಲ್ಲೇ ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಕೆಜಿಎಫ್–2 ಯಶಸ್ಸು | ಬಾಲಿವುಡ್ಗೆ ಕಥೆ ಕೊರತೆಯೇ? ಅಭಿಷೇಕ್ ಬಚ್ಚನ್ ಹೇಳಿದ್ದೇನು?
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ 'ಐ ಆ್ಯಮ್ ಆರ್' ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ 'ಹಿಂದಿ' ವಿಚಾರ ಪ್ರಸ್ತಾಪಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲ, ಅವು ಎಲ್ಲ ಕಡೆಗೂ ತಲುಪುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾ ಮೂಡುತ್ತಿರುವುದು ಹಿಂದಿಯಿಂದ ಎಂದು ಸುದೀಪ್ ಹೇಳಿದ್ದರು.
ಹಿಂದಿ ಕುರಿತು ಕಿಚ್ಚ ಹೇಳಿದ್ದೇನು?
ಪ್ಯಾನ್ ಇಂಡಿಯಾ ಎಂಬುದರ ಬಗ್ಗೆ ಕಾರ್ಯಕ್ರಮದಲ್ಲಿ ಸುದೀಪ್ ವಿವರಿಸಲು ಮುಂದಾದರು. 'ಹಿಂದಿ ಇನ್ನು ರಾಷ್ಟ್ರೀಯ ಭಾಷೆ ಅಲ್ಲ. ಬಾಲಿವುಡ್ನವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಮಾಡಿ, ಒದ್ದಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ಮುಂಬೈನಿಂದ ಬರುತ್ತಿವೆ, ಇಲ್ಲಿಂದ ಅಲ್ಲ. ಇಲ್ಲಿಂದ ಕೇವಲ 'ಸಿನಿಮಾ' ಮಾತ್ರ ಬರುತ್ತಿದ್ದು, ಅದು ಎಲ್ಲ ಕಡೆ ತಲುಪುತ್ತಿದೆ. ಭಾಷೆ ಕೇವಲ ತಡೆಯಷ್ಟೇ, ಈಗ ನಮ್ಮ ಸಿನಿಮಾ ಎಲ್ಲವನ್ನೂ ದಾಟಿದೆ...' ಎಂದು ಹೇಳಿದ್ದರು.
Hi @KicchaSudeep, You are a friend. thanks for clearing up the misunderstanding. I’ve always thought of the film industry as one. We respect all languages and we expect everyone to respect our language as well. Perhaps, something was lost in translation 🙏
— Ajay Devgn (@ajaydevgn) April 27, 2022
ಧನ್ಯವಾದ ಹೇಳಿದ ದೇವಗನ್
ಸುದೀಪ್ ವಿವರಣೆಗೆ ಮತ್ತೆ ಪ್ರತಿಕ್ರಿಯಿಸಿರುವ ಅಜಯ್ ದೇವಗನ್, 'ಗೆಳೆಯ, ತಪ್ಪಾಗಿ ಅರ್ಥೈಸಿಕೊಂಡಿದ್ದನ್ನು ಸರಿ ಪಡಿಸಿದ್ದಕ್ಕೆ ಧನ್ಯವಾದಗಳು. ಚಿತ್ರರಂಗವು ಯಾವಾಗಲೂ ಒಂದೂ ಎಂದು ಕಾಣುವವನು ನಾನು. ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ ಹಾಗೂ ಎಲ್ಲರೂ ನಮ್ಮ ಭಾಷೆಯನ್ನು ಗೌರವಿಸುವುದನ್ನು ನಿರೀಕ್ಷಿಸುತ್ತೇವೆ....' ಎಂದಿದ್ದಾರೆ.
ಇದನ್ನೂ ಓದಿ: ಕೆಜಿಎಫ್–2 ಯಶಸ್ಸಿನ ಬಳಿಕ ಪುಷ್ಪಾ–2 ಚಿತ್ರಕಥೆ ಪರಿಷ್ಕರಣೆಗೆ ಮುಂದಾದ ಸುಕುಮಾರ್!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.