ತೆಲುಗು ಚಿತ್ರರಂಗದ ಮೆಘಾಸ್ಟಾರ್ ಚಿರಂಜೀವಿ ಅವರಿಗೆ ನಾಯಕಿಯಾಗಿ 'ಆಚಾರ್ಯ' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿದ್ದನಟಿ ಕಾಜಲ್ ಅಗರವಾಲ್ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಈ ವಿಚಾರವನ್ನು ನಿರ್ದೇಶಕ ಕೊರಟಾಲ ಶಿವ ಬಹಿರಂಗಪಡಿಸಿದ್ದಾರೆ.
ಕಾಜಲ್ ಅವರು ಗರ್ಭಿಣಿಯಾಗುವುದಕ್ಕೂ ಮುನ್ನ ಚಿತ್ರೀಕರಿಸಲಾಗಿದ್ದ ಎಲ್ಲ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಕಾಜಲ್ ಅವರು ಚಿತ್ರದ ಭಾಗವಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ನಿರ್ದೇಶಕ, 'ಮೊದಲ ಹಂತದ ಚಿತ್ರೀಕರಣದ ಬಳಿಕ, ದೃಶ್ಯಗಳನ್ನು ವೀಕ್ಷಿಸಿದೆ. ತೃಪ್ತಿಕರ ಎನಿಸಲಿಲ್ಲ. ಈ ಬಗ್ಗೆ ಮೆಗಾಸ್ಟಾರ್ ಅವರೊಂದಿಗೆ ಚರ್ಚಿಸಿದೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದರು. ಇದೇ ವಿಚಾರವನ್ನು ಕಾಜಲ್ ಅವರಿಗೂ ವಿವರಿಸಿದೆ. ಅವರು ನಗುತ್ತಲೇ ಪ್ರತಿಕ್ರಿಯಿಸಿದರು. ಕಾಜಲ್ ಪಾತ್ರವನ್ನು ಆಚಾರ್ಯ ಚಿತ್ರದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ. ರಾಮ್ಚರಣ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅವರು ನೀಲಾಂಬರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಚಾರ್ಯದಲ್ಲಿ ಚಿರಂಜೀವಿ ಅವರಿಗೆ ನಾಯಕಿ ಯಾರು ಇಲ್ಲ' ಎಂದು ಹೇಳಿದ್ದಾರೆ.
ಇತ್ತೀಚೆಗೆ (ಏಪ್ರಿಲ್ 12ರಂದು) ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ನಲ್ಲಿಯೂ ಕಾಜಲ್ ಅವರು ಇರುವ ಯಾವುದೇ ದೃಶ್ಯಗಳಿಲ್ಲ. ಟ್ರೆಲರ್ ಬಿಡುಗಡೆ ಸಮಾರಂಭದಲ್ಲಿಯೂ ಯಾರೊಬ್ಬರೂ ಕಾಜಲ್ ಬಗ್ಗೆ ಮಾತನಾಡಿರಲಿಲ್ಲ. ಇದರೊಂದಿಗೆ ಇತ್ತಿಚೆಗಷ್ಟೇ ತಾಯಿಯಾಗಿರುವ ಕಾಜಲ್ ಅವರನ್ನು ತೆರೆ ಮೇಲೆ ನೋಡುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಆಚಾರ್ಯ ಸಿನಿಮಾ ಈಗಾಗಲೇ ಯು/ಎ ಪ್ರಮಾಣಪತ್ರ ಪಡೆದುಕೊಂಡಿದ್ದು, ಏಪ್ರಿಲ್ 29ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
ಕಾಜಲ್ ಅವರು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯ್ತನದ ಸಂಭ್ರಮ ಅನುಭವಿಸುತ್ತಿದ್ದಾರೆ. ಸದ್ಯ ಅವರು ಪತಿ ಗೌತಮ್ ಕಿಚ್ಲು ಅವರೊಂದಿಗೆ ಇದ್ದು, ಮಗುವಿಗೆ ನೀಲ್ ಕಿಚ್ಲು ಎಂದು ಹೆಸರಿಟ್ಟಿದ್ದಾರೆ.
#KajalAggarwal's role has been edited out in #Acharya as the character has not much scope in the film.. says #KoratalaSiva pic.twitter.com/1CAMS3uAnN
— OverSeasRights.Com (@Overseasrights) April 25, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.