ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸಂಭ್ರಮದಲ್ಲಿ ಎಕ್ಕಸಕ್ಕ! ವಿಕ್ರಾಂತ ರೋಣ ಹಾಡಿನ ಹಿಂದಿನ ರಹಸ್ಯ ಏನು?

Last Updated 2 ಜುಲೈ 2022, 19:45 IST
ಅಕ್ಷರ ಗಾತ್ರ

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿದ ಎಕ್ಕಸಕ್ಕ ಹಾಡು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಸರಿಯಾಗಿ ಐವತ್ತು ವರ್ಷಗಳ ಹಿಂದೆ ಇದೇ ಪದವನ್ನು ಬಳಸಿದ್ದ ಹಾಡಿಗೆ ನಟಿ ಕಲ್ಪನಾ ಅವರು ಹೆಜ್ಜೆ ಹಾಕಿದ್ದರು ಗೊತ್ತೇ?

ಎಕ್ಕಸಕ್ಕ ಎಕ್ಕಸಕ್ಕ ಎಕ್ಕಾ ಸಕ್ಕಾ... (ರಾ ರಾ ರಕ್ಕಮ್ಮ)

–ಸುದೀಪ್ ನಟನೆಯ ‘ವಿಕ್ರಾಂತ್‌ ರೋಣ’ ಸಿನಿಮಾಕ್ಕೆ ನಿರ್ದೇಶಕ ಅನೂಪ್‌ ಭಂಡಾರಿ ಬರೆದ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಹಾಡು ಎಲ್ಲೆಡೆ ಅನುರಣಿಸುತ್ತಿದ್ದರೆ, ಈ ಹಾಡಿನಲ್ಲಿ ಜನಪ್ರಿಯಗೊಂಡ ‘ಎಕ್ಕಸಕ್ಕ’ ಎಂಬ ದ್ರಾವಿಡ ಪದ ಸಿನಿಮಾದಲ್ಲಿ ಮೊದಲ ಬಾರಿ ಕೇಳಿಸಿದ ಕ್ಷಣಕ್ಕೆ ಈಗ ಸುವರ್ಣ ಸಂಭ್ರಮ.

1973ರಲ್ಲಿ ಬಿಡುಗಡೆ ಕಂಡ ವಿಶುಕುಮಾರ್‌ ನಿರ್ದೇಶನದ ತುಳು ಸಿನಿಮಾ ‘ಕೋಟಿ ಚೆನ್ನಯ’ದ ‘ಎಕ್ಕಸಕ್ಕ’ ಹಾಡು ಬಹಳ ಜನಪ್ರಿಯತೆ ಪಡೆದಿತ್ತು. ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಎಸ್. ಜಾನಕಿ ಅವರು ತುಳುವಿನ ‘ಎಕ್ಕಸಕ್ಕ...’ ಹಾಡು ಹಾಡಿದ್ದರು. ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹಾಡನ್ನು ಬರೆದಿದ್ದರು. ಕಲ್ಪನಾ ಹೆಜ್ಜೆ ಹಾಕಿದ್ದರು.

‘ಅವಳಿ ವೀರರಾದ ಕೋಟಿ–ಚೆನ್ನಯ ಸಹೋದರರು ತನ್ನ ಬಳಿಗೆ ಬರುವಾಗ ಅಕ್ಕ ಕಿನ್ನಿದಾರು (ಕಲ್ಪನಾ) ಅನುಭವಿಸುವ ಸಂಭ್ರಮವನ್ನು ಸಂಕೇತಿಸುವ ಹಾಡು ಬರೆಯಲು ನಿರ್ದೇಶಕರು ತಿಳಿಸಿದ್ದರು. ನಮ್ಮ ಪುತ್ತೂರಿನ ಪರಿಸರದಲ್ಲಿ ‘ಎಕ್ಕಸಕ್ಕ’ ಪದವನ್ನು ‘ಅತೀವ’, ‘ತುಂಬಾ’, ‘ಉತ್ಸಾಹ’, ‘ಭಯಂಕರ’, ‘ಸಿಕ್ಕಾಪಟ್ಟೆ’ ಎಂಬ ವಿಶೇಷಣಾರ್ಥವಾಗಿ ಬಳಸುತ್ತಾರೆ. ಈ ಪದ ಛಂದಸ್ಸಿನ ಲಯವನ್ನೂ ಹೊಂದಿದ್ದರಿಂದ, ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಹಾಗೂ ಆಕೆಯ ಮಗ ಮಾತನಾಡುವುದನ್ನು ಕೇಳಿ, ನಾನು ಹಾಡಿಗೆ ಬಳಸಿಕೊಂಡೆ. ಇದು ನನ್ನ ನಿರೀಕ್ಷೆಗೂ ಮೀರಿ ಜನಪ್ರಿಯವಾಯಿತು’ ಎಂದು ವಿವೇಕ ರೈ ಮೆಲುಕು ಹಾಕುತ್ತಾರೆ.

‘ಎಕ್ಕಸಕ್ಕ’ ಕೇವಲ ತುಳುವಿನ ಪದವಲ್ಲ. ಕನ್ನಡದ ಮೊದಲ ಕಾವ್ಯ, ಪಂಪನ ವಿಕ್ರಮಾರ್ಜುನ ವಿಜಯದಲ್ಲಿ (ಪಂಪ ಭಾರತ) ದ್ರೋಣ, ದುರ್ಯೋಧನನಿಗೆ ಹೇಳುವ ಮಾತಿನ ಒಂದು ಸಾಲಿನಲ್ಲೂ ‘ಎಕ್ಕಸಕ್ಕ ತನಂಗಳ್‌ ಎತ್ತ ಹೋದವು’ ಎಂಬ ಬಳಕೆ ಇದೆ. ಹೀಗಾಗಿ ಇದು ಖಂಡಿತಾ ದ್ರಾವಿಡ ಪದ ಎಂಬುದು ನನಗೆ ದೃಢವಾಗಿತ್ತು’ ಎಂದು ಅವರು ಹೇಳುತ್ತಾರೆ.

‘ಸಿನಿಮಾ ಬಿಡುಗಡೆಯ 35 ವರ್ಷಗಳ ಬಳಿಕ, 2009ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಎಸ್. ಜಾನಕಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ಅಂದು ನಡೆದಿದ್ದ ಔತಣಕೂಟದಲ್ಲಿ ಅವರು ಸಿಕ್ಕಿದ್ದರು. ನಾನು ಅವರಲ್ಲಿ, ‘ಮೇಡಂ ಯು ಹ್ಯಾವ್ ಸಂಗ್‌ ಮೈ ಸಾಂಗ್ ಎಕ್ಕ ಸಕ್ಕ... ಎಕ್ಕ ಸಕ್ಕ’ ಎಂದೆ. ತಕ್ಷಣವೇ ಅವರು ಆ ಪದ್ಯವನ್ನು ಹಾಡಿಯೇ ಬಿಟ್ಟರು. ನಾನೇ ಎಕ್ಕಸಕ್ಕ ಖುಷಿ ಸಂಭ್ರಮಿಸಿದೆ. ಅದು ಎಂದೂ ಮರೆಯಲಾಗದ ನೆನಪು’ ಎಂದು ವಿವೇಕ ರೈ ನೆನಪಿಸಿಕೊಳ್ಳುತ್ತಾರೆ.

50 ವರ್ಷದ ಬಳಿಕ

‘ನಾನೂ ಪುತ್ತೂರಿನಲ್ಲೇ ಬಾಲ್ಯವನ್ನು ಕಳೆದವನು. ಬಾಲ್ಯದ ಪರಿಸರದಲ್ಲಿ ‘ಎಕ್ಕಸಕ್ಕ’ ಪದವನ್ನು ನಾನು ಆಗಾಗ್ಗೆ ಬಳಸಿದ್ದೇನೆ. ಆ ಪದದ ರೋಚಕತೆಯೇ ಹಾಗಿದೆ. ಅಷ್ಟು ಮಾತ್ರವಲ್ಲ, ನನ್ನ ತಾಯಿ ತುಳುವಿನ ‘ಕೋಟಿ ಚೆನ್ನಯ’ ಸಿನಿಮಾದ ‘ಎಕ್ಕಸಕ್ಕ’ ಹಾಡನ್ನು ಖುಷಿಯಿಂದ ಹಾಡುತ್ತಿದ್ದರು. ಆಗ ಕೇಳಿಕೊಂಡು ನಾನು ಪುಳಕಿತಗೊಂಡಿದ್ದೇನೆ. ಆ ಶಬ್ದದ ಸಂಭ್ರಮವೇ ಹಾಗಿದೆ’ ಎಂದು ‘ವಿಕ್ರಾಂತ್ ರೋಣ’ ಸಿನಿಮಾಕ್ಕೆ ಹಾಡು ಬರೆದ ಅನೂಪ್ ಭಂಡಾರಿ ಹೇಳುತ್ತಾರೆ.

‘ಎಕ್ಕಸಕ್ಕ ಎಂಬ ಪದವು ತಮಿಳಿನಲ್ಲೂ ಇದೆ. ‘ಎಕ್ಕಚಕ್ಕ’ ಎಂದು ಉಚ್ಚರಿಸುತ್ತಾರೆ. ನಾವೂ ಈ ಹಾಡಿನ ಹಿನ್ನೆಲೆಯನ್ನು ಕರಾವಳಿಗೆ ಸಂಬಂಧಿಸಿದಂತೆಯೇ ರೂಪಿಸಿದ್ದೇವೆ. ಕರಾವಳಿ ಭಾಗಕ್ಕೆ ನಾಯಕ ಬಂದಾಗ, ಅಲ್ಲಿನ ಗಡಂಗ್‌ (ಶೇಂದಿ ಅಂಗಡಿ) ಬಳಿ ನಡೆಯುವ ಸನ್ನಿವೇಶ ಅದಾಗಿದೆ. ನಮ್ಮ ಸಂಗೀತ ನಿರ್ದೇಶಕರೂ ಆ ಪದವನ್ನು ತುಂಬಾ ಇಷ್ಟಪಟ್ಟರು. ಆ ಪದವೇ ಸಂಗೀತ. ಉಳಿದ ಎಲ್ಲ ಎಕ್ಕ ಸಕ್ಕವನ್ನೂ ಸಿನಿಮಾದಲ್ಲೇ ನೋಡಬೇಕು’ ಎಂದು ಅರ್ಥಗರ್ಭಿತ ನಗು ಬೀರುತ್ತಾರೆ.

‘ಹಲವು ಭಾಷೆಗಳಲ್ಲಿ ಸಾವಿರಾರು ಹಾಡು ಹಾಡಿರುವ ಎಸ್. ಜಾನಕಿ ಅವರಿಗೆ ‘ಎಕ್ಕಸಕ್ಕ’ ಪದ ಕೇಳಿದ ತಕ್ಷಣವೇ ತುಳುವಿನ ಆ ಹಾಡು ನೆನಪಾಗಬೇಕಾದರೆ, ಆ ಪದದ ಶಕ್ತಿ ಎಷ್ಟಿರಬೇಕು. ನಿಜಕ್ಕೂ ಎಕ್ಕಸಕ್ಕ ಅಲ್ವಾ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಶರಣರ ನಂಟು

‘ಹಾಡು ಎಂದರೆ ಕೇವಲ ಶಬ್ದಾಡಂಬರ ಅಲ್ಲ. ಅದಕ್ಕೊಂದು ತಾತ್ವಿಕ ಚಿಂತನೆ ಇರುತ್ತದೆ. ಅದು ನಂಟು ಬೆಸೆಯುತ್ತದೆ. ನಾನು ವಚನ ಸಾಹಿತ್ಯವನ್ನು ಬೋಧಿಸಿದ್ದ ಕಾರಣ, ಕೋಟಿ–ಚೆನ್ನಯ ಸಿನಿಮಾದ ಎಕ್ಕಸಕ್ಕ ಹಾಡಿಗೆ ಅಲ್ಲಮನ ವಚನದ ಸಾಲುಗಳ ತಾತ್ವಿಕತೆ ಆಧರಿಸಿ, ‘ಎಲ್ಲೋ ಇದ್ದ ನೆಲ್ಲಿಕಾಯಿ ಉಪ್ಪು ಸೇರಿದಂತೆ ಬದುಕು ಎಂಬ ತೂಗುಯ್ಯಾಲೆಯಲ್ಲಿ ನಾವಿದ್ದೇವೆ’ ಎಂಬ ಸಾಲುಗಳನ್ನು ಬರೆದೆ. ಎಲ್ಲಿಂದಲೋ ಅಕ್ಕನ (ಕಿನ್ನಿದಾರು) ಬಳಿಗೆ ಬರುವ ಸಹೋದರರಿಗೆ (ಕೋಟಿ–ಚೆನ್ನಯ) ಕರಾವಳಿಯ ಸಂಸ್ಕೃತಿಯಂತೆ ಕುಡಿಯಲು ಎಳನೀರು, ಸ್ನಾನಕ್ಕೆ ಎಣ್ಣೆ, ಬಿಸಿನೀರು, ದೇಸಿ ದನದ ಮಂದಹಾಲು ನೀಡುವ ಚಿತ್ರಣ ಹಾಡಿನಲ್ಲಿದೆ’ ಎಂದು ವಿವೇಕ ರೈ ವಿವರಿಸುತ್ತಾರೆ.

ಬೇರೆಯೂ ಉಂಟು

ಆದರೆ, ವಿಕ್ರಾಂತ್‌ ರೋಣದ ಎಕ್ಕಸಕ್ಕ ಹಾಡಿನಲ್ಲಿ, ಎಲ್ಲಿಂದಲೋ ಕರಾವಳಿಯ ಸಮುದ್ರ ಬಳಿಯ ಕುದ್ರು (ದ್ವೀಪ) ಮಧ್ಯದ ಗಡಂಗ್‌ (ಶೇಂದಿ ಅಂಗಡಿ) ರಕ್ಕಮ್ಮ ಬಳಿ ಬರುವ ನಾಯಕನಿಗೆ ಕರಾವಳಿಯಲ್ಲಿ ದೊರೆಯುವ ಮತ್ತೊಂದು ಆತಿಥ್ಯವನ್ನು ಪರಿಚಯಿಸಲಾಗಿದೆ. ಅದರ ಮತ್ತೇ ಬೇರೆ. ಈಗಾಗಲೇ ‘ಎಕ್ಕಸಕ್ಕ’ ಹಾಡು ಎಲ್ಲೆಡೆ ಮತ್ತು ಬರಿಸುತ್ತಿದೆ.

ಸಹೋದರರು ಬಳಿಗೆ ಬರುವ ಸಂಭ್ರಮಕ್ಕೆ 50 ವರ್ಷಗಳ ಹಿಂದಿನ ಕೋಟಿ –ಚೆನ್ನಯ ತುಳು ಸಿನಿಮಾದಲ್ಲಿ ‘ಎಕ್ಕಸಕ್ಕ’ ಬಳಸಿದ್ದರೆ, ವಿಕ್ರಾಂತ್ ರೋಣದಲ್ಲಿ ಎಲ್ಲಿಂದಲೋ ಕರಾವಳಿಗೆ ನಾಯಕ ಬರುವ ಸಂದರ್ಭದ ಉತ್ಸಾಹಕ್ಕೆ ಸಖತ್‌ ಆಗಿಯೇ ಬಳಸಲಾಗಿದೆ. ಇದೆಂತಹ ಎಕ್ಕಸಕ್ಕ!

ಭಾಷೆಯ ದೇಸೀತನ...

‘ಐವತ್ತು ವರ್ಷಗಳ ಹಿಂದೆ ನಗರೀಕರಣದ ಸೋಂಕು ತಗುಲದ ಪುತ್ತೂರು ಸೀಮೆಗೆ ಮಂಗಳೂರು ಕೂಡಾ ಅಕ್ಷರಶಃ ದುಬೈಯ ಹಾಗಿತ್ತು. ಆ ಪ್ರದೇಶವೇ ಒಂದು ರೀತಿಯಲ್ಲಿ ದ್ವೀಪದಂತೆ. ದೂರದ ಊರಿಗೆ ಇಲ್ಲಿಂದ ಹೆಣ್ಣು ಕೊಡಲೂ ಲೆಕ್ಕ (ಯೋಚಿಸು) ಹಾಕುತ್ತಿದ್ದರು. ಇದರಿಂದಾಗಿ ಇಲ್ಲಿನ ಭಾಷೆಯಲ್ಲಿ ಸಾಕಷ್ಟು ದ್ರಾವಿಡ ಪದಗಳು ಇದ್ದವು. ಇಂತಹ ತನ್ನತನ ಉಳಿಸಿಕೊಂಡ ಹಲವು ಪ್ರದೇಶಗಳು ಇರಬಹುದು. ಆದರೆ, ಈಗ ಇರಬಹುದೇ ಎಂಬುದನ್ನು ದೃಢಪಡಿಸುವುದು ಕಷ್ಟ’ ಎನ್ನುತ್ತಾರೆ ಪ್ರೊ. ಬಿ.ಎ ವಿವೇಕ ರೈ.

‘ವಿಕ್ರಾಂತ್‌ ರೋಣದಲ್ಲೂ ನಾಯಕ ಕುದ್ರು (ದ್ವೀಪ) ಪ್ರದೇಶಕ್ಕೆ ಭೇಟಿ ನೀಡಿದಾಗಲೇ ಆತನಿಗೆ ‘ಎಕ್ಕಸಕ್ಕ’ ಎದುರಾಗುತ್ತದೆ’ ಎನ್ನುತ್ತಾರೆ ಅನೂಪ್ ಭಂಡಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT