ಮಂಡ್ಯ ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿರುವ ‘ಮಂಡ್ಯ ಹೈದ’ ಚಿತ್ರ ಇಂದು (ಫೆ.16) ತೆರೆ ಕಾಣುತ್ತಿದೆ. ವಿ.ಶ್ರೀಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಯುವನಟ ಅಭಯ್ ಚಂದ್ರಶೇಖರ್ ತಮ್ಮ ಚಿತ್ರ, ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ...
ನಿಮ್ಮ ಸಿನಿಮಾ ಹಿನ್ನೆಲೆ?
ಓದುತ್ತಿರುವಾಗಲೇ ಸಿನಿಮಾದಲ್ಲಿ ಆಸಕ್ತಿ ಇತ್ತು. ಬಾಲ ನಟನಾಗಿ ‘ಬರ್ತ್’ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟೆ. 2022ರಲ್ಲಿ ‘ಮನಸಾಗಿದೆ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದೆ. ಕೋವಿಡ್ನಿಂದಾಗಿ ಸಿನಿಮಾ ಹೆಚ್ಚು ಜನರಿಗೆ ತಲುಪಲಿಲ್ಲ. ಆದರೆ ನಟನಾಗಿ ಗುರುತಿಸಿಕೊಂಡೆ. ‘ಮಂಡ್ಯ ಹೈದ’ ನನ್ನ ಎರಡನೇ ಸಿನಿಮಾ.
ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ?
ಶಿವ ಎಂಬ ಪಾತ್ರ. ಒಳ್ಳೆಯ ಮನಸ್ಸು ಹೊಂದಿರುವ ಹಳ್ಳಿ ಹುಡುಗ. ಸ್ನೇಹಿತರಿಗೆ ತುಂಬ ಮಹತ್ವ ನೀಡುತ್ತಿರುತ್ತಾನೆ. ಕುಟುಂಬ, ಸ್ನೇಹ, ಪ್ರೀತಿ ಎಲ್ಲ ಅಂಶಗಳು ಈ ಪಾತ್ರದಲ್ಲಿ ಬರುತ್ತದೆ. ಇಷ್ಟ ಆಗುವವರಿಗೆ ಇಷ್ಟವಾಗುತ್ತಾನೆ. ಊರಲ್ಲಿ ಕೆಲವರಿಗೆ ಈತನನ್ನು ಕಂಡರೆ ಆಗುವುದಿಲ್ಲ ಎಂಬ ಪಾತ್ರ.
ಚಿತ್ರ ಯಾವುದರ ಕುರಿತಾಗಿದೆ?
ಪೂರ್ತಿ ಸಿನಿಮಾ ಮಂಡ್ಯ ಸೊಗಡಿನಿಂದ ಕೂಡಿದೆ. ‘ಕಿರಾತಕ’, ‘ರಾಜಾಹುಲಿ’ ರೀತಿಯ ಹಳ್ಳಿ ಸೊಗಡಿನ ಚಿತ್ರ. ಹಳ್ಳಿಯ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಇಲ್ಲಿ ಸವಿಯಬಹುದು. ಇಡೀ ಸಿನಿಮಾದ ಕಥೆ ಹಳ್ಳಿಯಲ್ಲಿ ನಡೆಯುತ್ತದೆ. ಆದರೆ ಕಥೆ ಮಂಡ್ಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ಕಡೆಯವರು ನೋಡಬಹುದಾದ ಕಥಾವಸ್ತು.
ಚಿತ್ರೀಕರಣದ ಅನುಭವ ಹೇಗಿತ್ತು?
45 ದಿನ ಚಿತ್ರೀಕರಣ ಮಾಡಿದ್ದೇವೆ. ಶೇಕಡ 80 ರಷ್ಟು ಶ್ರೀರಂಗಪಟ್ಟಣ, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಉಳಿದ ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಅನೇಕ ನಟರಿದ್ದಾರೆ. ಬಲ ರಾಜವಾಡಿ ತಂದೆಯ ಪಾತ್ರ ಮಾಡಿದ್ದಾರೆ. ಮೊದಲಾರ್ಧ ಪೂರ್ತಿ ಕಾಮಿಡಿ ಇದೆ. ದ್ವಿತೀಯಾರ್ಧ ಒಂದು ಸಂದೇಶ ನೀಡುತ್ತದೆ.
ನಿಮ್ಮ ಮುಂದಿನ ಯೋಜನೆಗಳ ಯಾವುವು?
ಇನ್ನೊಂದು ಕಥೆ ಸಿದ್ಧವಾಗುತ್ತಿದೆ. ಬಹುಶಃ ಮಾರ್ಚ್ನಲ್ಲಿ ಮುಂದಿನ ಸಿನಿಮಾ ಪ್ರಾರಂಭವಾಗಲಿದೆ. ಇದರ ಕುರಿತು ಶೀಘ್ರದಲ್ಲಿಯೇ ಇನ್ನಷ್ಟು ಮಾಹಿತಿ ನೀಡುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.