ಮನಸೂರೆಗೊಳ್ಳುತ್ತಿದೆ ‘ಮೈಸೂರು’ ಚಿತ್ರದ ಟ್ರೇಲರ್

‘ಮೈಸೂರು– ಲೈಫ್ ಎಂಡ್ಸ್ ವಿತ್ ಲವ್’ ಶೀರ್ಷಿಕೆಯ ಚಿತ್ರವೊಂದು ಸದ್ದಿಲ್ಲದೇ ನಿರ್ಮಾಣ ಮುಗಿಸಿದೆ. ಚಿತ್ರದ ಟ್ರೇಲರ್ ಹಾಗೂ ಮೂರು ಹಾಡುಗಳ ಬಿಡುಗಡೆ ಇತ್ತಿಚೆಗೆ ನಡೆದಿದೆ.
ಕಿರುತೆರೆಯಲ್ಲಿ ಪರಿಣತರಾದ ವಾಸುದೇವ ರೆಡ್ಡಿ ಅವರು ಎಸ್.ಆರ್. ಕಂಬೈನ್ಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿದ ಮೊದಲ ಚಿತ್ರವಿದು.
ವಿವರ ನೀಡಿದ ರೆಡ್ಡಿ, ‘ನಾನು ಮೂಲತಃ ಮೈಸೂರಿನವನು. ಚಿತ್ರ ಅನಿವಾಸಿ ಕನ್ನಡಿಗನ ಕಥೆ. ಹೊರರಾಜ್ಯದಿಂದ ನಾಯಕ ಮೈಸೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ನಾಯಕಿಯ ಮೇಲೆ ಪ್ರೀತಿ ಮೂಡುತ್ತದೆ. ನಂತರ ನಾಯಕನಿಗೆ ನಕ್ಸಲ್ ನಂಟಿರುವುದು ತಿಳಿಯುತ್ತದೆ. ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸುತ್ತದೆ. ಸಾವಿನ ಮುಂಚೆ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ, ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ, ನನ್ನ ಅಂಗಗಳು ಬೇರೆಯವರ ಬಾಳಿಗೆ ಆಸರೆಯಾಗಲಿ ಎನ್ನುತ್ತಾನೆ. ಇಂತಹ ನಾಯಕ, ಹೇಗೆ ಕೆಟ್ಟವನಾಗಲು ಸಾಧ್ಯ ಎಂದು, ಈತನ ಪ್ರಕರಣವನ್ನು ಮತ್ತೆ ವಿಚಾರಿಸಲಾಗುತ್ತದೆ. ಮುಂದೇನು ಎಂಬುದನ್ನು ಚಿತ್ರದಲ್ಲೇ ನೋಡಬೇಕು’ ಎಂದರು.
‘ಈ ಚಿತ್ರವು ಕನ್ನಡ, ಒರಿಸ್ಸ ಹಾಗೂ ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಕನ್ನಡದ ಆವೃತ್ತಿಯಲ್ಲಿ ಶೇಕಡಾ ಇಪ್ಪತ್ತೈದು ಭಾಗದಷ್ಟು ಒಡಿಶಾ ಭಾಷೆ ಇರುತ್ತದೆ. ಒಡಿಶಾ ಆವೃತ್ತಿಯಲ್ಲಿ ಶೇಕಡಾ ಇಪ್ಪತ್ತೈದರಷ್ಟು ಕನ್ನಡದ ಸಂಭಾಷಣೆ ಇರುತ್ತದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ’ ಎಂದರು.
‘ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ನೃತ್ಯ ಹಾಗೂ ನಾಟಕದಲ್ಲಿ ಆಸಕ್ತಿಯಿರುವ ನಾನು ಇನ್ಫೋಸಿಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾಯಕಿಯಾಗಿ ಮೊದಲ ಚಿತ್ರ’ ಎಂದು ಹೇಳಿದರು ನಾಯಕಿ ಪೂಜಾ.
ಮೂಲತಃ ಒಡಿಶಾದವರಾದ ಸಂವಿತ್ ಈ ಚಿತ್ರದ ನಾಯಕ.
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ ಕಡೆ ಚಿತ್ರೀಕರಣ ನಡೆದಿದೆ.
ಜ್ಯೂನಿಯರ್ ನರಸಿಂಹರಾಜು, ಪೂಜಾ, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ತಾರಾಬಳಗದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.