ಕೋಲ್ಕತ್ತ: ಸುತ್ತುಮುತ್ತಲೂ ಏನೇ ನಡೆಯಲಿ, ನಮ್ಮಂತಹ ಜನರು ಧನಾತ್ಮಕ ಮನೋಭಾವದಿಂದ ಇರುತ್ತೇವೆ. ವಿವಿಧ ಜಾತಿ, ಬಣ್ಣ, ಧರ್ಮಗಳ ಜನರು ಪರಸ್ಪರ ಅರಿತುಕೊಳ್ಳಲು ಸಿನಿಮಾ ಉತ್ತಮ ವೇದಿಕೆಯಾಗಿದೆ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ.
ಪಠಾಣ್ ಚಿತ್ರದ 'ಬೇಷರಮ್ ರಂಗ್' ಹಾಡಿನ ವಿವಾದ ಭುಗಿಲೆದ್ದ ಬೆನ್ನಲ್ಲೇ ಶಾರುಖ್ ಈ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಕೆಐಎಫ್ಎಫ್) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿನಿಮಾವು ಏಕತೆ, ಸಹೋದರತ್ವ ಮತ್ತು ಮಾನವೀಯ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಬಹುನಿರೀಕ್ಷಿತ ಪಠಾಣ್ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕಾಣಿಸಿಕೊಂಡಿರುವುದು ಒಂದು ವರ್ಗದ ಆಕ್ರೋಶಕ್ಕೆ ಗುರಿಯಾಗಿದ್ದು, ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ.