‘ಈ ಕಥೆಯನ್ನು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಆದ ನಂತರ ಬರೆದಿದ್ದೆ. ನಾನು ಸೋಷಿಯಲ್ ವರ್ಕ್ ವಿದ್ಯಾರ್ಥಿ. ಕಾಲೇಜು ದಿನಗಳಲ್ಲಿ ನಮನ್ನು ಮಾದಕ ವ್ಯಸನ ವರ್ಜನ ಶಿಬಿರಗಳಿಗೆ ಹಾಗೂ ‘ಹಾಸ್ಪೈಸ್’, ಎಂದರೆ ಗುಣ ಆಗದಂಥ ಕಾಯಿಲೆ ಇರುವವರು ತಂಗಿರುವ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ನಾವೆಲ್ಲರೂ ಶಾಶ್ವತ ಎಂದುಕೊಂಡೇ ಬದುಕುತ್ತಿರುತ್ತೇವೆ. ಆದರೆ ಶುಶ್ರೂಷೆ ನೀಡಿದರೂ, ಇಂದಲ್ಲ ನಾಳೆ ನಾವಿಲ್ಲ ಎನ್ನುವುದು ತಿಳಿದಿರುತ್ತದೆ. ಇದುವೇ ನನ್ನ ಕಥೆಗೆ ಆಧಾರ. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು ಆಯುರ್ವೇದ ಹೇಳುತ್ತದೆ. ಈ ಮಳೆಯ ನೀರು ಸರಿಯಾದ ಚಿಪ್ಪಿನೊಳಗೆ ಸೇರಿದರೆ ಮುತ್ತಾಗುತ್ತದೆ. ಎಲ್ಲ ಹನಿಗಳೂ ಮುತ್ತಾಗಬೇಕೆಂದಿಲ್ಲ. ಹಾಗೆಯೇ ಆ ಕೇಂದ್ರದೊಳಗೆ ಇರುವ ‘ಪ್ರೇರಣಾ’ ಎಂಬಾಕೆ ಮುತ್ತಾಗುತ್ತಾಳೆಯೇ ಎನ್ನುವುದು ಕಥೆ. ನಮ್ಮ ಚಿತ್ರದ ಕಥೆಗೆ ಈ ಶೀರ್ಷಿಕೆ ಸರಿ ಹೊಂದುವುದರಿಂದ ಇಟ್ಟಿದ್ದೇವೆ. ಇದರಲ್ಲಿ ನಾನು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ‘ಅನಿಕೇತ್’ ಎಂಬ ಪಾತ್ರ ಮಾಡಿದ್ದೇನೆ’ ಎನ್ನುತ್ತಾರೆ ರಾಜ್.