ನಟ ರಾಣಾ ದಗ್ಗುಬಾಟಿ ‘ವೈ ಆರ್ ಯು?’ ಎಂಬ ಹಾಸ್ಯಮಯ ಅನಿಮೇಟೆಡ್ ವೆಬ್ಸರಣಿಯನ್ನು ಹೋಸ್ಟ್ ಮಾಡಲಿದ್ದಾರಂತೆ. ಈ ವೆಬ್ಸರಣಿಗೆ ರಾಣಾ ಕ್ರಿಯೇಟಿವ್ ಪ್ರೊಡ್ಯುಸರ್ ಕೂಡ ಆಗಿದ್ದಾರೆ.
‘ನಾನು ಸಿನಿಮಾ, ಟಿವಿಯನ್ನು ನೋಡಲು ಆರಂಭಿಸಿದ ದಿನಗಳಿಂದ ಅನಿಮೇಟೆಡ್ ಸ್ಟೋರಿಗಳನ್ನು ಹಾಗೂ ಹಾಗೂ ಅದರಲ್ಲಿ ಸ್ಟೋರಿ ಹೇಳುವ ಬಗೆಯನ್ನು ನೋಡುತ್ತಾ ಬೆಳೆದಿದ್ದೇನೆ. ನಿಜಕ್ಕೂ ಅದು ಆಸಕ್ತಿಕರ. ಆದರೆ ನಾವು ಬೆಳೆದು ದೊಡ್ಡವರಾದಂತೆ ಅನಿಮೇಶನ್ ಚಿತ್ರಗಳನ್ನು ನೋಡಲು ಬಯಸುವುದಿಲ್ಲ. ಅಲ್ಲದೇ ಅನಿಮೇಶನ್ ಚಿತ್ರಗಳು ವಯಸ್ಕರಿಗಲ್ಲ ಎಂಬ ಭಾವನೆ ನಮ್ಮಲ್ಲಿ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅನಿಮೇಟೆಡ್ ಸಿನಿಮಾಗಳಿಗೆ ಅವಕಾಶ ಕಡಿಮೆ. ಆ ಕಾರಣಕ್ಕೆ ನಾವು ಕಾಲ್ಪನಿಕ ಹಾಸ್ಯ ಪ್ರಧಾನ ಚಿತ್ರವನ್ನು ತೆರೆ ಮೇಲೆ ತರಲು ಯೋಚಿಸಿದ್ದೇವೆ’ ಎಂದಿದ್ದಾರೆ ರಾಣಾ.
ರಾಣಾ ‘ಹಾತಿ ಮೇರೆ ಸಾತಿ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಹಿಂದಿ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಎರಡು ದೇಶಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕೇರಳದ ಕಾಡು, ಮುಂಬೈ ಹಾಗೂ ಥೈಲೆಂಡ್ನಲ್ಲಿ ಶೂಟಿಂಗ್ ಮಾಡಲಾಗಿದೆ.
ಈ ಮೂರು ಭಾಷೆಯ ಸಿನಿಮಾಗಳಲ್ಲಿ ರಾಣಾ ನಾಯಕನಾಗಿ ನಟಿಸುತ್ತಿದ್ದಾರೆ. ಹಿಂದಿ ಆವೃತ್ತಿಯಲ್ಲಿ ಪುಲ್ಕಿತ್ ಸಾಮ್ರಾಟ್ ರಾಣಾ ಜೊತೆ ನಾಯಕನಾಗಿ ನಟಿಸುತ್ತಿದ್ದರೆ ತಮಿಳು ಹಾಗೂ ತೆಲುಗಿನ ‘ಕಾಡನ್’ ಹಾಗೂ ‘ಅರಣ್ಯ’ ಸಿನಿಮಾಗಳಲ್ಲಿ ವಿಶಾಲ್ ವಿಷ್ಣು ರಾಣಾಗೆ ಜೊತೆಯಾಗಲಿದ್ದಾರೆ. ಶ್ರೀಯಾ ಪಿಲ್ಗೋಂಕರ್ ಹಾಗೂ ಜೋಯಾ ಹುಸೈನ್ 3 ಭಾಷೆಯಲ್ಲೂ ನಾಯಕಿಯರಾಗಿ ತೆರೆ ಹಂಚಿಕೊಳ್ಳಲಿದ್ದಾರೆ.
ಅಸ್ಸಾಂನ ಕಾಝಿರಂಗ ಆನೆ ಕಾರಿಡಾರ್ ಪ್ರದೇಶವನ್ನು ಮನುಷ್ಯರು ಅತಿಕ್ರಮಣ ಮಾಡಿದ ಕತೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಕಾಡು ಪ್ರಾಣಿಗಳ ರಕ್ಷಣೆಗಾಗಿ ತನ್ನ ಜೀವನವನ್ನು ಮುಡಿಪಾಗಿಡುವ ವ್ಯಕ್ತಿಯ ಪಾತ್ರದಲ್ಲಿ ರಾಣಾ ಕಾಣಿಸಿಕೊಳ್ಳಲಿದ್ದಾರೆ.
‘ಲೀಡರ್’ ಸಿನಿಮಾದಿಂದ ರಾಣಾ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದರು. ‘ದಮ್ ಮಾರೋ ದಮ್’ ಸಿನಿಮಾದ ಮೂಲಕ ಬಾಲಿವುಡ್ಗೂ ಪ್ರವೇಶಿಸಿದ್ದರು.
‘ಕೃಷ್ಣಂ ವಂದೇ ಜಗದ್ಗುರು’, ‘ಬೇಬಿ’, ‘ಬಾಹುಬಲಿ’, ‘ರುದ್ರಮದೇವಿ’, ‘ದಿ ಘಾಜಿ ಅಟ್ಯಾಕ್’ ಹಾಗೂ ‘ನೇನೆ ರಾಜು ನೇನೆ ಮಂತ್ರಿ’ ಸಿನಿಮಾಗಳ ಮೂಲಕ ರಾಣಾ ಹೆಸರು ಗಳಿಸಿದ್ದಾರೆ.