ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day 2022 | ಕರೆಂಟು ಹುಡುಗನ ಕಾಡು ಬೆಳಕು

Last Updated 5 ಜೂನ್ 2022, 4:28 IST
ಅಕ್ಷರ ಗಾತ್ರ

ಪರಿಸರ ಪ್ರೀತಿಗೆ ಪದವಿ ಪುರಸ್ಕಾರಗಳ ಹಂಗಿಲ್ಲ. ಕೃಷಿ ಬದುಕಿನ ಮಧ್ಯೆ ಹೊಟ್ಟೆಪಾಡಿನ ವೈರಿಂಗ್ ಕಾಯಕ ಮಾಡುತ್ತಾ ದಶಕಗಳಿಂದ ಕಾಡು ಸಸ್ಯಗಳ ಹುಚ್ಚು ಹತ್ತಿಸಿಕೊಂಡು ಪರಿಸರದ ಖುಷಿಯ ಸೆಲೆ ಹುಡುಕುತ್ತಾ ಹೊರಟ ಹಳ್ಳಿ ಹುಡುಗನ ನೆಲ ಮೂಲದ ಪಯಣ ಇಲ್ಲಿದೆ.

ಮೊದಲಿಗೇ ಹೇಳಿ ಬಿಡುತ್ತೇನೆ. ಕಾಡು ಕಾಳಜಿಯ ಈ ಮನುಷ್ಯ ಪರಿಸರ ವಿಜ್ಞಾನಿಯಲ್ಲ. ಹತ್ತಾರು ದೇಶಸುತ್ತಿ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ ತಜ್ಞನೂ ಅಲ್ಲ. ಪರಿಸರ ಹೋರಾಟಕ್ಕೆ ನಿಂತು ಭಾಷಣ ಮಾಡಿದಾತನಲ್ಲ.34 ವರ್ಷಗಳ ಹಿಂದೆ8ನೇ ತರಗತಿಯಲ್ಲಿ ಸತತ ಮೂರು ವರ್ಷ ಡುಮ್ಕಿ ಹೊಡೆದು ಶಾಲೆಯಿಂದ ಹೊರಬಿದ್ದವರು, ಧೈರ್ಯದಿಂದ ಗುಡ್ಡಬೆಟ್ಟ ಸುತ್ತಿದವರು. ಉತ್ತರ ಕನ್ನಡದ ಸಿದ್ದಾಪುರ ಬಾಲಿಕೊಪ್ಪ ಗ್ರಾಮದ ವಡ್ಡಿನಗದ್ದೆಯ ಗಣಪತಿ ಹೆಗಡೆ ವಿದ್ಯುತ್ ಪಂಪ್ ದುರಸ್ತಿ, ವೈರಿಂಗ್, ನೀರಾವರಿ ಪೈಪ್ ಅಳವಡಿಸುವ ಕಾಯಕ ಮಾಡುವವರು, ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಲವು ಉಳ್ಳವರು. ಹೊಟ್ಟೆಗೆ ಅನ್ನ ಕೊಡುವ ಕಾರ್ಯಗಳ ಮಧ್ಯೆ ಕಾಡು ಕಾಳಜಿ. ಕಿಸೆಯ ಪುಟ್ಟ ಕಾಗದದಲ್ಲಿ ಅವರಿವರಿಂದ ಮಾಹಿತಿ ಸಂಗ್ರಹಿಸಿ ಅಪರೂಪದ ಸಸ್ಯ ಎಲ್ಲಿದೆ? ಯಾವಾಗ ಬೀಜ ಸಿಗುತ್ತದೆಂದು ವಿವರ ಇಟ್ಟುಕೊಂಡು ಸಂಗ್ರಹಕ್ಕೆ ಸೂಕ್ತ ಕಾಲಕ್ಕೆ ಕಾಯುವ ಆಸಾಮಿ. ದೂರ ದೂರದ ಕಾಡುಗಳಿಗೆ ಹೋಗಿ ಬೀಜ ಸಂಗ್ರಹಿಸಿ ಹತ್ತೋ, ಇಪ್ಪತ್ತೋ, ನೂರೋ ಹೀಗೆ ಕೈಲಾದಷ್ಟು ಸಸಿ ಬೆಳೆಸಿ ಮನೆ ಸನಿಹದ ಬೆಟ್ಟ ಗುಡ್ಡಗಳಲ್ಲಿ ನೆಡುವ ಕಾಯಕ ಜೀವಿ.

ಕಾಡು ಬೀಜ ಮೊಳಕೆ ಭರಿಸುವ ನಾಟಿ ತಂತ್ರ ಯಾವುದು? ಇರುವೆ, ಫಂಗಸ್‌ಗಳಿಂದ ರಕ್ಷಿಸುವ ನಾಟಿ ಉಪಾಯ ಏನು ಎಂಬ ವಿಚಾರಗಳಲ್ಲಿ ಪ್ರಯೋಗಶೀಲರು. ಬೂದಿ, ಸಗಣಿ, ಗೋಮೂತ್ರ, ಮರಳು, ತೆರಕು, ಕಟ್ಟಿಗೆ ಹುಡಿ, ಮಣ್ಣು, ಹ್ಯೂಮಸ್ ಹೀಗೆ ಬಳಕೆಯ ತಂತ್ರಗಳು ಹತ್ತಾರು. ಸಸ್ಯ ವಿಶೇಷ ಏನು? ಬೆಳೆಸಲು ಎಂಥ ಪರಿಸರ ಸೂಕ್ತ? ಯೋಚಿಸುತ್ತ ಹುಡುಕಾಟ ನಡೆಸುವವರು. ಸಸ್ಯ ಸ್ನೇಹಿತರು, ಅರಣ್ಯ ಇಲಾಖೆಯ ನರ್ಸರಿ ಕೆಲಸಗಾರರು, ಅಧಿಕಾರಿಗಳ ಒಡನಾಟದಿಂದ ಕಲಿಕೆಯ ನಡಿಗೆ. ಕೃಷಿ ಬಡತನದಲ್ಲಿ ಹತ್ತಾರು ರಂಗಗಳಲ್ಲಿ ಕೆಲಸ ಮಾಡುತ್ತ ಗಣಪತಿಯ ಈ ಪರಿಸರ ರೂಪ ಅವಿರ್ಭವಿಸಿದ್ದೇ ಏಕತಾನತೆಯ ಧ್ಯಾನದಲ್ಲಿ! ಈಗ ಮರಕ್ಕೆ ಹಬ್ಬಿದ ಬಳ್ಳಿಯಂತೆ ಕಾಡಿಗೆ ಅಂಟಿಕೊಂಡಿದ್ದಾರೆ.

ಮಲೆನಾಡಿನ ಹಳ್ಳಿಗರು 50 ವರ್ಷ ಹಿಂದೆ ತಿನ್ನುತ್ತಾ ಇದ್ದ ಕಾಡು ಹಣ್ಣುಗಳು ಯಾವುವು? ಈ ವ್ಯಕ್ತಿಗೆ ಸಣ್ಣ ಕುತೂಹಲ. ಅರಣ್ಯದ ಬಳಸಿ ಬಲ್ಲ ಜ್ಞಾನ ಕೆದಕುವ ಹುಚ್ಚು. 30–35 ಹಣ್ಣುಗಳ ಪಟ್ಟಿ ಸಿದ್ಧಮಾಡಿಕೊಂಡು ನಾಪತ್ತೆಯಾದವುಗಳ ಹುಡುಕಾಟ. ಒಂದು ಕಾಲದಲ್ಲಿ ತಿಂದುಂಡು ಇಂದು ಹೆಸರೇ ಮರೆತು ಹೋದ ಕಾಡಿನ ಬರ್ಕಬಾಳೆ ಮತ್ತೆ ಸಿಕ್ಕಿದ್ದು ಈಗ ಇವರಲ್ಲಿ ಸಸಿ ಬೆಳೆಯುತ್ತಿದೆ. ‘ನೀರೊಟ್ಟೆ ಹಣ್ಣು ಈಗಿನವರಿಗೆ ಗೊತ್ತೇ ಇಲ್ಲ, ನವರಾತ್ರಿ ಹಬ್ಬದ ಹೊತ್ತಿಗೆ ಹಣ್ಣು ಆಗ್ತದಂತೆ’ ಎನ್ನುತ್ತ ಒಂದಿಲ್ಲೊಂದು ಹೊಸ ಹುಡುಕಾಟ ಇದ್ದದ್ದೇ! ದೊಡ್ಡಗಾತ್ರದ ಕವಳಿ ಹಣ್ಣು ನಿತ್ಯ ಹರಿದ್ವರ್ಣ ಕಾನಿನ ಎಲೆ ಮರೆಯ ಫಲ. ನಮ್ಮ ಮಾಮೂಲಿ ಬೆಟ್ಟದ ಪುಟ್ಟ ಕವಳಿಗಿಂತ ಬಹಳ ದೊಡ್ಡದು. ಹೀಗಾಗಿ ಹೆಸರು ಹೆಗ್ಗವಳಿ, ಕಾನ್ ಕವಳಿ. ಸಸ್ಯ ತಜ್ಞ ಸಿದ್ದಾಪುರ ಕಡಕೇರಿಯ ಎಂ.ಬಿ ನಾಯ್ಕರಿಂದ ಗಿಡದ ಮೂಲ ಪತ್ತೆ ಹಚ್ಚಿ ಈಗ ಸಸಿ ಬೆಳೆಸಿದ ಉತ್ಸಾಹಿ ಇವರು. ಇವರ ಬಳಿ ಹೇತಾರಿ, ಕರಡಿಸೊಪ್ಪು, ಏಕನಾಯಕ, ಕಾಡು ನುಗ್ಗೆ, ಚೌತಿ ಮೆಣಸು, ಅರಿಶಿನಬಳ್ಳಿ, ದೇವದಾರಿ, ಬಿಳಿ ಗುಲುಗುಂಜಿ ಸಸ್ಯ ಸಂಗ್ರಹವಿದೆ.

ತಂದೆ ಮಾಬ್ಲೇಶ್ವರ ಹೆಗಡೆ ಕಾಡಿಗೆ ಕರೆದೊಯ್ದ ಇವರ ಮೊದಲ ಗುರು. ಸೊಪ್ಪು ತರಲು ಹೋದಾಗೆಲ್ಲ ಸಸಿಯ ಪಾಠ ಸಿಕ್ಕಿದ್ದು. ಸಾಲಿನಲ್ಲಿ ಸಸಿ ನೆಟ್ಟು, ಗಿಡಕ್ಕೆ ಮಣ್ಣೇರಿಸಿ ಗಿಡದ ಬುಡದಲ್ಲಿ ಮಳೆ ನೀರು ನಿಂತು ತೇವಾಂಶ ರಕ್ಷಣೆಗೆ ಅರ್ಧ ಚಂದ್ರಾಕೃತಿಯ ಬರಾವು ರೂಪಿಸುವ ಅರಣ್ಯ ಇಲಾಖೆಯ ತಂತ್ರದ ಹೊರತಾದ ದಾರಿ ಹುಡುಕಿದವರು. ಸತ್ತ ಮರಗಳ ಬುಡ ಹಾಗೂ ಮುಳ್ಳು ಕಂಟಿಗಳ ನಡುವೆ 25–30 ವರ್ಷಗಳ ಹಿಂದೆ ವಾಟೆ, ಮುರುಗಲು, ಮಾವು, ಹಲಸು ನೆಡಲು ಕಲಿಸಿದವರು. ಸಸಿ ನೆಟ್ಟು ಸೊಪ್ಪು, ತೆರಕು, ಒಣ ಕಟ್ಟಿಗೆಗಳನ್ನು ಗಿಡಗಳ ಬುಡಕ್ಕೆ ಹಾಕಿ ಬೆಳೆಸುವ ಸೂತ್ರ ಹೇಳಿದವರು. ಆಡುತ್ತ ನೋಡುತ್ತ ಕಲಿಯುತ್ತ ಬೆಳೆಯುತ್ತ ಗಣಪತಿ ಬಲಿತವರು. ಅವತ್ತು ಡುಮ್ಕಿ ಹೊಡೆದು ಶಾಲೆ ಬಿಟ್ಟವರು ಕಾಡು ಶಾಲೆಗೆ ನಿತ್ಯ ಹಾಜರಿಯ ವಿಧೇಯ ವಿದ್ಯಾರ್ಥಿ! ಸರಿಸುಮಾರು 20 ವರ್ಷಗಳಿಂದ ಮನೆಯ ಸುತ್ತಮುತ್ತ ಖಾಲಿ ಜಾಗ ಕಂಡಲ್ಲೆಲ್ಲ ತಾವೇ ನರ್ಸರಿಯಲ್ಲಿ ಬೆಳೆಸಿದ ಗಿಡ ನೆಡುತ್ತ ಸಂರಕ್ಷಣೆಗೆ ಗಮನ ನೀಡುತ್ತಾ ಜಾಗೃತಿಯ ಪಯಣ, ಪ್ರಸ್ತುತ ಆರೇಳು ಎಕರೆ ಬಯಲು ನೆಲೆಯಾಗಿದ್ದ ಪ್ರದೇಶವನ್ನು ನೈಸರ್ಗಿಕ ಕಾಡಾಗಿ ಮರುಜೀವ ನೀಡಿದ ನಾಟಿ ಚಿಕಿತ್ಸಕರು.

‘ಭಾರತಿ ಸಂಪದ’, ನೋಂದಣಿಯಲ್ಲದ ಇವರು ಕಟ್ಟಿಕೊಂಡ ಸಂಸ್ಥೆ. ಇದರ ಆಶ್ರಯದಲ್ಲಿ ಪ್ರತೀ ವರ್ಷ ವಿಶ್ವ ಪರಿಸರ ದಿನಾಚರಣೆ ಸಂದರ್ಭಗಳಲ್ಲಿ ಮಕ್ಕಳು, ಕೃಷಿಕರಿಗೆ ಉಪಯುಕ್ತ ಕಾರ್ಯಕ್ರಮ ಮನೆಯಂಗಳದಲ್ಲಿ ಏರ್ಪಾಟು. ಯಾರ ನೆರವು, ಆರ್ಥಿಕ ಸಹಾಯಕ್ಕೆ ಕೈಚಾಚದೇ ಬೆವರಿಳಿಸಿ ದುಡಿದ ಅಷ್ಟಿಷ್ಟು ಹಣವನ್ನು ಹಸಿರು ಕೆಲಸಕ್ಕೆ ವಿನಿಯೋಗಿಸಿ ಸಸಿ ಚಿಗುರಲ್ಲಿ ಖುಷಿಪಡುವ ಮನುಷ್ಯ. ಅಪರೂಪದ ಸಸಿ ಬೆಳೆಸಿ ಆಸಕ್ತರಿಗೆ ಹಂಚುತ್ತ ಗಿಡ ಗೆಳೆತನದ ಆಪ್ತತೆ ಹೆಚ್ಚಿಸಿದವರು. ಸುತ್ತಲಿನ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರ ತಜ್ಞತೆ ಗಮನಿಸಿ, ಗುರುತಿಸಿ, ಗೌರವಿಸಿ ಪ್ರೋತ್ಸಾಹಿಸುತ್ತ ಜ್ಞಾನ ಬೆಳಕು ಪಸರಿಸುವ ಪ್ರಯತ್ನ ವಿಶೇಷ. ವರ್ಷಕ್ಕೆ 25–30 ಜಾತಿಯ ಕಾಡು ವೃಕ್ಷಗಳ ಬೀಜ ಸಂಗ್ರಹಿಸಿ ಅರಣ್ಯ ನರ್ಸರಿಗಳಿಗೆ ಹಂಚುವ ಗಣಪತಿ ಹೆಗಡೆಯವರದು ನಿಸರ್ಗ ಕಾಯಕದಲ್ಲಿ ಭಿನ್ನ ದಾರಿ.

ಅನ್ನದ ದಾರಿಯ ಓಟದಲ್ಲಿ ಕಾಡು ಕೈಂಕರ್ಯ ಆಡಿದಷ್ಟು ಸುಲಭವಲ್ಲ. ದಿನವಿಡೀ ವಿದ್ಯುತ್ ಪಂಪ್ ದುರಸ್ತಿ, ವೈರಿಂಗ್ ಕೆಲಸವೆನ್ನುತ್ತ ಅಲ್ಲಿ ಇಲ್ಲಿ ಓಡುತ್ತ ನೂರಾರು ಜನಗಳ ಕೆಲಸದಲ್ಲಿ ತನ್ನನ್ನು ತಾನು ಮರೆಯುವ ಪ್ರಮೇಯ. ಸಸ್ಯ ಹುಚ್ಚಿನ ಕಾರಣಕ್ಕೆ ಎಷ್ಟೋ ಸಾರಿ ಕಾಸು ಕೊಡುವ ಕಾಯಕ ತಪ್ಪಿಸಿ ಇವರು ಕಾಡಲ್ಲಿಯೇ ಕಳೆದು ಹೋಗೋದು ಇದೆ. ನಮ್ಮೊಳಗಿನ ಶ್ರೀಮಾನ್ಯರ ಹಸಿರು ಹುಚ್ಚು ಯಾವತ್ತೂ ವೇದಿಕೆಯ ಮಾತಿನ ಅಬ್ಬರಕ್ಕೆ ನಿಲುಕುವುದಲ್ಲ. ಸಸಿ ಹುಡುಕುತ್ತ, ಗಿಡ ಬೆಳೆಸುತ್ತ ಹಂಚುವ ನಲ್ಮೆಯಲ್ಲಿ ಪರಿಸರ ಪ್ರಭೆ ಬೆಳಗು. ದಶಕಗಳ ಪರಿಶ್ರಮ ಫಲ ನೆಟ್ಟ ಗಿಡಗಳು ಮಾತಾಡಲು ಶುರು ಮಾಡಿವೆ. ನೆರಳಾಗಿ ದಟ್ಟನೆ ಹೆಚ್ಚುತ್ತ ಕಾಡು ಕತ್ತಲಿನಲ್ಲಿ ಖುಷಿಯ ಮೊಳಕೆ ಕಾಣುತ್ತಿದೆ. ಲೋಕದ ಲೆಕ್ಕಕ್ಕೆ ಕಾಣದ ಎಲೆ ಮರೆಯ ಗಣಪತಿ ತನ್ನ ಪಾಡಿಗೆ ತಾನು ಬೆಟ್ಟದ ತಪ್ಪಲಿನಲ್ಲಿ ಕಾಡು ಪ್ರೀತಿಯ ಹಸಿರು ದೀಪ ಹಚ್ಚುತ್ತ ಸಾಗಿದವರು. ಎಲ್ಲಕ್ಕಿಂತ ನೆಲದಲ್ಲಿ ನಿಂತು ಕಾಡು ಕಾಳಜಿ ಮೂಡಿಸುವ ಕಾಲುದಾರಿ ಮುಖ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT