ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಔಷಧೀಯ ಸಸ್ಯಗಳತ್ತ ಹೊರಳುತಿದೆ ಚಿತ್ತ

Last Updated 23 ಫೆಬ್ರುವರಿ 2021, 12:43 IST
ಅಕ್ಷರ ಗಾತ್ರ

ಬಹುತೇಕ ಭಾರತೀಯರು ಮನೆಯಂಗಳದಲ್ಲಿ ತುಳಸಿ ಗಿಡ ಬೆಳೆಸಲು ಇಷ್ಟಪಡುತ್ತಾರೆ. ಧಾರ್ಮಿಕ ಹಾಗೂ ವೈದ್ಯಕೀಯವಾಗಿ ಮಹತ್ವ ಪಡೆದಿರುವ ತುಳಸಿಯಂತೆ ಹಲವು ಔಷಧೀಯ ಸಸ್ಯಗಳು ಸರಳ ಮನೆಮದ್ದಿಗೆ ಸಹಾಯ ಮಾಡುವುದರಿಂದ ಕೈತೋಟಗಳಲ್ಲಿ ಇವುಗಳನ್ನು ಬೆಳೆಸುವುದಕ್ಕೆ ಈಚೆಗೆ ಜನ ಮುಂದಾಗುತ್ತಿದ್ದಾರೆ.

ಹಳ್ಳಿಯಾಗಲಿ, ನಗರವಾಗಲಿ ಅಂಗಳಕ್ಕೆ ಜಾಗವಿರುವವರ ಮನೆಗಳಲ್ಲಿ ಪ್ರಮುಖವಾಗಿ ಕಾಣುವ ಔಷಧೀಯ ಸಸ್ಯಗಳು ತುಳಸಿ, ದೊಡ್ಡಪತ್ರೆ, ಮಜ್ಜಿಗೆ ಹುಲ್ಲು, ಅರಿಸಿಣ, ಲೋಳೆಸರ, ಅಮೃತಬಳ್ಳಿ, ಶುಂಠಿ, ಕಹಿಬೇವು, ಕರಿಬೇವು. ಟೆರೇಸ್‌ ಗಾರ್ಡನ್‌ಗಳಲ್ಲೂ ಈಗ ಜಾಗ ಪಡೆದಿವೆ. ಹೂ ಗಿಡಗಳು, ಶೋ ಗಿಡಗಳ ಬದಲು ಉಪಯುಕ್ತ ಸಸಿಗಳನ್ನು ಬೆಳೆಯಲು ಜನ ಮುಂದಾಗಿದ್ದಾರೆ. ಕೊರೊನಾದ ಬಿಸಿ ತಟ್ಟಿದ ನಂತರ ಬಹಳಷ್ಟು ಮಂದಿ ಮನೆಮದ್ದಿಗೆ ಬೇಕಾಗುವ ಸಸ್ಯಗಳನ್ನು ಬೆಳೆಯಲು ಮುಂದಾಗಿದ್ದಾರೆ. ಅಶ್ವಗಂಧ, ಜೇಷ್ಠಮದ್ದು, ಶತಾವರಿ, ಬಜೆ ಬೇರು, ಹಿಪ್ಪಲಿಗಳಂಥ ಸಸ್ಯಗಳಿಗೆ ಬೇಡಿಕೆ ಬಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ್‌ ಉತ್ಪನ್ನಗಳ ಮಾರಾಟವೂ ಹೆಚ್ಚಳವಾಗಿದೆ.

ಕೋವಿಡ್‌ ಕಾಲದಲ್ಲಿ ವಿವಿಧ ರೀತಿಯ ಕಷಾಯಗಳು ಮಹತ್ವ ಪಡೆದವು. ಇದಕ್ಕೆ ಬೇಕಾದ ಔಷಧೀಯ ಸಸ್ಯಗಳ ಬಗ್ಗೆಯೂ ಜನ ಆಸಕ್ತಿ ತೋರುತ್ತಿದ್ದಾರೆ. ಶೀತ, ಕೆಮ್ಮು, ಜ್ವರಗಳಿಗೆ ಆಯುರ್ವೇದ ಹಾಗೂ ಮನೆಮದ್ದನ್ನು ಅನುಸರಿಸುವವರ ಸಂಖ್ಯೆ ದೊಡ್ಡದಿದ್ದರೂ, ಇದಕ್ಕೆ ಬೇಕಾದ ಔಷಧೀಯ ಸಸ್ಯಗಳನ್ನು ಬೆಳೆಯುವವರ ಸಂಖ್ಯೆ ಕಡಿಮೆಯಿದೆ. ಮನೆ ಕೈತೋಟಗಳಲ್ಲಿ ಬೆಳೆಯುವವರು ಅದೇ ಹೊಲ, ಗದ್ದೆ, ತೋಟಗಳಲ್ಲಿ ಬೆಳೆಯಲು ಹಿಂದೇಟು ಹಾಕುತ್ತಾರೆ. ಕಾರಣ ಔಷಧೀಯ ಸಸ್ಯಗಳ ಮಾರುಕಟ್ಟೆ ಬಗ್ಗೆ ಸರಿಯಾದ ಮಾಹಿತಿ, ಪ್ರಚಾರ ಇಲ್ಲದಿರುವುದು ಎನ್ನಲಾಗಿದೆ.

ಗಿಡಮೂಲಿಕೆಗಳಿಂದ ತಯಾರಾಗುವ ಔಷಧಗಳಿಗೆ ಕಚ್ಚಾ ಸಾಮಗ್ರಿಗಳ ಕೊರತೆ ಇದ್ದೇ ಇದೆ. ಇದುವರೆಗೂ ಅರಣ್ಯಗಳೇ ಇಂಥ ಸಸ್ಯಗಳ ಪ್ರಮುಖ ಆಕರವಾಗಿವೆ. ಅರಣ್ಯ ನಾಶ ಹೆಚ್ಚುತ್ತಿರುವ ಕಾರಣ ಇಂಥ ಔಷಧಗಳ ತಯಾರಿಕೆಗೂ ಕಚ್ಚಾ ಸಾಮಗ್ರಿಗಳ ಕೊರತೆ ಕಾಡುತ್ತಿದೆ.

ಅಮೃತಬಳ್ಳಿ
ಅಮೃತಬಳ್ಳಿ

ಔಷಧೀಯ ಸಸ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ‘ನ್ಯಾಷನಲ್‌ ಮೆಡಿಸಿನಲ್‌ ಪ್ಲಾಂಟ್ಸ್ ಬೋರ್ಡ್‌’ (ಎನ್‌ಎಂಪಿಬಿ) 2008–09ನೇ ಸಾಲಿನಿಂದ ‘ನ್ಯಾಷನಲ್‌ ಮಿಷನ್‌ ಆನ್‌ ಮೆಡಿಸಿನಲ್‌ ಪ್ಲಾಂಟ್ಸ್‌’ (ಎನ್‌ಎಂಎಂಪಿ) ಆರಂಭಿಸಿದೆ. ಈಗ ಆಯುಷ್‌ ಇಲಾಖೆಯ ಅಡಿ ಇದನ್ನು ಮುಂದುವರಿಸಲಾಗುತ್ತಿದೆ. ತುಳಸಿ, ನೆಲ್ಲಿಕಾಯಿ, ಪುದಿನ, ಓಂಕಾಳು, ಅಮೃತಬಳ್ಳಿ, ಕರಿಬೇವು, ಮೆಂತೆ, ಇಸಬ್‌ಗೋಲ್‌, ಅತಿಸ್‌, ಗುಗ್ಗಲ, ಕರಿಮೆಣಸು, ಬ್ರಾಹ್ಮಿ, ಜಟಾಮಾನಸಿ, ಮಧುನಾಶಿನಿ, ಶತಾವರಿ, ಅಶ್ವಗಂಧ, ಅಶೋಕ. ಕೋಕಮ್‌, ಸಫೇದ್‌ ಮಸ್ಲಿ ಸೇರಿ ಹಲವು ಔಷಧೀಯ ಸಸ್ಯಗಳಿಗೆ ಬೇಡಿಕೆ ಹೆಚ್ಚಿದೆ.

ವಿನಾಶದ ಅಂಚಿನಲ್ಲಿರುವ ಔಷಧೀಯ ಸಸ್ಯಗಳೆಂದು ಗುರುತಿಸಲಾದವುಗಳನ್ನು ಬೆಳೆಯಲು ಎನ್‌ಎಂಪಿಬಿ ಶೇ 75ರಷ್ಟು ಸಬ್ಸಿಡಿಯನ್ನೂ ನೀಡುತ್ತಿದೆ. ಕಡಿಮೆಯಾಗುತ್ತಿರುವ ಔಷಧೀಯ ಸಸ್ಯಗಳ ಬಗೆಗಳನ್ನು ಬೆಳೆದರೆ ಶೇ 50, ಉಳಿದ ಔಷಧೀಯ ಸಸ್ಯಗಳನ್ನು ಬೆಳೆದರೆ ಶೇ 30ರಷ್ಟು ಸಬ್ಸಿಡಿ ಇದೆ. ಯಾವ ಸಸ್ಯಗಳು ಈ ಸಬ್ಸಿಡಿ ಅಡಿ ಬರುತ್ತವೆ ಎಂಬುದರ ಮಾಹಿತಿ ಎನ್‌ಎಂಪಿಬಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಜರ್ನಲ್‌ ಆಫ್‌ ಫಾರ್ಮಾಕೊಗ್ನಸಿ ಆ್ಯಂಡ್‌ ಫೈಟೊಕೆಮಿಸ್ಟ್ರಿಯ ಸಂಶೋಧನಾ ವರದಿಯ ಪ್ರಕಾರ ಔಷಧೀಯ ಸಸ್ಯಗಳ ಕ್ಷೇತ್ರದಲ್ಲಿ ಹೆಚ್ಚು ಪ್ರದೇಶ ಹೊಂದಿರುವ ರಾಜ್ಯಗಳು ಕ್ರಮವಾಗಿ ರಾಜಸ್ಥಾನದಲ್ಲಿ ಶೇ 56, ಉತ್ತರಪ್ರದೇಶ ಶೇ 25, ಮಧ್ಯಪ್ರದೇಶ ಶೇ 11, ತಮಿಳುನಾಡು (ಶೇ 2), ಪಂಜಾಬ್‌ (ಶೇ 2), ಛತ್ತೀಸ್‌ಗಡ ಶೇ 2, ಆಂಧ್ರಪ್ರದೇಶ (ಶೇ 2), ಬಿಹಾರ (ಶೇ 1)ರಷ್ಟು ಇವೆ. ಔಷಧೀಯ ಸಸ್ಯಗಳ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಶೇ 44, ರಾಜಸ್ಥಾನ ಶೇ 19, ತಮಿಳುನಾಡು ಶೇ 16, ಛತ್ತಿಸ್‌ಗಡ ಶೇ 8, ಅರುಣಾಚಲ್‌ ಪ್ರದೇಶ್‌ ಶೇ 7 ಪ್ರಮಾಣ ಹೊಂದಿವೆ.

ಕರ್ನಾಟಕ ಶೇ 1ರಷ್ಟು ಔಷಧೀಯ ಬೆಳೆ ಕ್ಷೇತ್ರ ಹೊಂದಿದ್ದು, ಶೇ 2ರಷ್ಟು ಉತ್ಪನ್ನ ಹೊಂದಿದೆ. ಆದರೆ ಅಶ್ವಗಂಧ (ಶೇ 61.65), ನೆಲ್ಲಿಕಾಯಿ (ಶೇ 9.46), ಶ್ರೀಗಂಧ (ಶೇ 9.41) ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದೆ. ತುಳಸಿ, ಸ್ಟೀವಿಯಾ, ಲೋಳೆಸರ, ಪಚೌಲಿ, ಗುಗ್ಗಲ, ದಾಲ್ಚಿನ್ನಿ ಸೇರಿದಂತೆ ಇನ್ನೂ ಕೆಲವು ಔಷಧೀಯ ಸಸ್ಯಗಳನ್ನು ಬೆಳೆಯಲು ಉತ್ತಮ ವಾತಾವರಣ ಹೊಂದಿದೆ ಎಂದು ಗುರುತಿಸಲಾಗಿದೆ.

ದೇಶದಲ್ಲಿ ಗುರುತಿಸಲಾಗಿರುವ 17,000–18,000ದಷ್ಟು ಹೂಬಿಡುವ ಸಸ್ಯಗಳ ಪ್ರಕಾರಗಳಲ್ಲಿ 7,000ದಷ್ಟು ಸಸ್ಯ ಪ್ರಭೇದಗಳು ಔಷಧೀಯ ಗುಣ ಹೊಂದಿವೆ ಎಂದು ಸಂಶೋಧನೆಗಳು ತಿಳಿಸಿವೆ. 2014–15ರ ವರದಿಯ ಪ್ರಕಾರ ದೇಶದ ವಾರ್ಷಿಕ ಔಷಧೀಯ ಸಸ್ಯಗಳ ಬೇಡಿಕೆ 1,95,000 ಮೆಟ್ರಿಕ್‌ ಟನ್‌ಗಳಷ್ಟು ಇತ್ತು. ಅದೇ ಸಾಲಿನಲ್ಲಿ ಹರ್ಬಲ್‌ ಔಷಧಗಳ ತಯಾರಿಕೆಗೆ ಬಳಸಲಾದ ಕಚ್ಚಾ ಸಾಮಗ್ರಿ 5,12,000 ಮೆಟ್ರಿಕ್‌ ಟನ್‌ಗಳಷ್ಟು ಇತ್ತು. ಇವುಗಳಲ್ಲಿ ಶೇ 22ರಷ್ಟು ಮಾತ್ರ ಕೃಷಿ ಮೂಲಕ ಬೆಳೆಯಲಾಗಿತ್ತು. 1,34,500 ಮೆಟ್ರಿಕ್‌ ಟನ್‌ಗಳಷ್ಟು ಔಷಧೀಯ ಸಸ್ಯಗಳ ರಫ್ತಿಗೆ ಬೇಡಿಕೆ ಇತ್ತು. ಇದರ ವಹಿವಾಟು ₹ 3,211 ಕೋಟಿ ಮೊತ್ತದ್ದು ಎಂದು ಎನ್‌ಎಂಪಿಬಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT