ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಳ–ಅಗಲ| ವಕ್ಫ್‌ (ತಿದ್ದುಪಡಿ) ಮಸೂದೆ–2024: ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಅವಕಾಶ

Published : 8 ಆಗಸ್ಟ್ 2024, 23:30 IST
Last Updated : 8 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ವಕ್ಫ್‌ (ತಿದ್ದುಪಡಿ) ಮಸೂದೆ–2024ಕ್ಕೆ ಸಂಸತ್ತಿನ ಒಳಗೂ ಹೊರಗೂ ಪರ–ವಿರೋಧ ವ್ಯಕ್ತವಾಗಿದೆ. ಮಸೂದೆಯಲ್ಲಿರುವ ಅಂಶಗಳ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಮಸೂದೆಯನ್ನು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿದೆ. ಮಸೂದೆಯಲ್ಲಿ ಮಾಡಿರುವ ತಿದ್ದುಪಡಿಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ
ಆಸ್ತಿ ಮಾಲೀಕತ್ವ: ಡಿ.ಸಿ ತನಿಖೆ
1995ರ ಕಾಯ್ದೆಯ 3ನೇ ಸೆಕ್ಷನ್‌ಗೆ ಮೂರು ಹೊಸ ಉಪ ಸೆಕ್ಷನ್‌ಗಳನ್ನು (3ಎ, 3ಬಿ, 3ಸಿ) ಮಸೂದೆಯಲ್ಲಿ ಸೇರಿಸಲಾಗಿದೆ. 3ಬಿ ಪ್ರಕಾರ, ಎಲ್ಲ ವಕ್ಫ್‌ ಆಸ್ತಿಯನ್ನು ಈ ಕಾಯ್ದೆಯ ಅಡಿಯಲ್ಲಿ ನೋಂದಣಿ ಮಾಡಬೇಕು. 2024ರ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಕ್ಕೂ ಮೊದಲು ನೋಂದಣಿ ಮಾಡಿಕೊಂಡಿರುವ ಆಸ್ತಿಯ ವಿವರಗಳನ್ನು ಆರು ತಿಂಗಳ ಒಳಗಾಗಿ ಪೋರ್ಟಲ್‌, ಡಾಟಾಬೇಸ್‌ಗೆ ಅಪ್‌ಲೋಡ್‌ ಮಾಡಬೇಕು. 3ಸಿ ಪ್ರಕಾರ, ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುನ್ನ ಅಥವಾ ನಂತರ ವಕ್ಫ್‌ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಒಂದು ವೇಳೆ, ನಿರ್ದಿಷ್ಟ ಆಸ್ತಿ ಸರ್ಕಾರಕ್ಕೆ ಸೇರಿದೆಯೇ ಎಂಬ ಪ್ರಶ್ನೆ ಬಂದರೆ ಈ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು. ಅವರು ಈ ಬಗ್ಗೆ ತನಿಖೆ ನಡೆಸಿ ಅದು ಸರ್ಕಾರಿ ಆಸ್ತಿಯೇ ಅಲ್ಲವೇ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅವರು ವರದಿ ಸಲ್ಲಿಸುವವರೆಗೂ ಆ ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಗುರುತಿಸುವಂತಿಲ್ಲ.
ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿ
ಮೂಲ ಕಾಯ್ದೆಯ ಸೆಕ್ಷನ್‌ 4ರ ಪ್ರಕಾರ ರಾಜ್ಯದಲ್ಲಿರುವ ವಕ್ಫ್‌ ಆಸ್ತಿಗಳ ಸರ್ವೆ ನಡೆಸಲು ರಾಜ್ಯ ಸರ್ಕಾರ ಸರ್ವೆ ಆಯುಕ್ತರನ್ನು ನೇಮಕ ಮಾಡಬೇಕು. ಆದರೆ, ಈಗಿನ ತಿದ್ದುಪಡಿ ಮಸೂದೆಯಲ್ಲಿ ಈ ಜವಾಬ್ದಾರಿಯನ್ನು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಯವರ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳ ಅನುಸಾರ ಆಸ್ತಿಗಳ ಸರ್ವೆ ಕಾರ್ಯ ನಡೆಯಬೇಕು. ನಂತರ ಅವರು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸೆಕ್ಷನ್‌ 5ರ 2ಎ ಮತ್ತು 3ಬಿ ಉಪ ಸೆಕ್ಷನ್‌ಗಳನ್ನು ಸೇರಿಸಲಾಗಿದ್ದು, ಆಸ್ತಿಯ ಬಗ್ಗೆ ಗೆಜೆಟ್‌ ಅಧಿಸೂಚನೆ ಹೊರಡಿಸಿದ 15 ದಿನಗಳ ಒಳಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸ್ತಿಯ ವಿವರಗಳನ್ನು ಪೋರ್ಟಲ್‌ ಮತ್ತು ಡಾಟಾಬೇಸ್‌ಗೆ ಅಪ್‌ಲೋಡ್‌ ಮಾಡಬೇಕು. ಜಮೀನಿನ ದಾಖಲೆಗಳ ಹಕ್ಕು ಬದಲಾವಣೆಗಳ ಬಗ್ಗೆ ನಿರ್ಧರಿಸುವುದಕ್ಕೂ 90 ದಿನಗಳ ಮೊದಲು ಈ ಬಗ್ಗೆ ಸಾರ್ವಜನಿಕ ನೋಟಿಸ್‌ ನೀಡಬೇಕು.
ಕೇಂದ್ರ ಸರ್ಕಾರದಿಂದ ಆಡಿಟ್‌
ವಕ್ಫ್‌ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಗೆ (ಆಡಿಟ್‌) ಸಂಬಂಧಿಸಿದ ಸೆಕ್ಷನ್‌ 47ಕ್ಕೆ ಹೊಸ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದ್ದು, ರಾಜ್ಯ ಸರ್ಕಾರ ಸಿದ್ಧಪಡಿಸುವ ಲೆಕ್ಕ ಪರಿಶೋಧಕರ ಸಮಿತಿಯು ಲೆಕ್ಕ ಪರಿಶೋಧನೆ ಮಾಡಬೇಕು. ಮೂಲ ಕಾಯ್ದೆಯಲ್ಲಿ, ವಕ್ಫ್‌ ಮಂಡಳಿ ನೇಮಿಸುವ ಲೆಕ್ಕಪರಿಶೋಧಕರು ಲೆಕ್ಕಪರಿಶೋಧನೆ ಮಾಡಲು ಅವಕಾಶ ಇತ್ತು. ಇದರೊಂದಿಗೆ ರಾಜ್ಯ ಸರ್ಕಾರವೂ ಲೆಕ್ಕ ಪರಿಶೋಧನೆ ಮಾಡಬಹುದಿತ್ತು. ಸೆಕ್ಷನ್‌ 48ಕ್ಕೆ ಮಾಡಿರುವ ತಿದ್ದುಪಡಿಯು ಲೆಕ್ಕಪರಿಶೋಧನೆ ನಡೆಸಲು ಕೇಂದ್ರ ಸರ್ಕಾರಕ್ಕೂ ಅವಕಾಶ ನೀಡುತ್ತದೆ. ಕೇಂದ್ರ ಸರ್ಕಾರವು ಯಾವುದೇ ಸಂದರ್ಭದಲ್ಲಿ ಮಹಾಲೇಖಪಾಲರು ನೇಮಿಸುವ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಲು ಆದೇಶ ನೀಡಬಹುದು. ಲೆಕ್ಕಪರಿಶೋಧನಾ ವರದಿಯನ್ನು ಯಾವುದೇ ರೂಪದಲ್ಲಿ ಪ್ರಕಟ ಮಾಡಲೂ ಕೇಂದ್ರ ಆದೇಶಿಸಬಹುದು.
ಮಹಿಳೆ, ಮುಸ್ಲಿಮೇತರರಿಗೆ ಸ್ಥಾನ
ಮಸೂದೆಯಲ್ಲಿ ಕಾಯ್ದೆಯ 9ನೇ ಸೆಕ್ಷನ್ನಿನ 2ನೇ ಉಪ ಸೆಕ್ಷನ್‌ಗೆ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ, ಕೇಂದ್ರ ವಕ್ಫ್‌ ಮಂಡಳಿಯನ್ನು ರಚಿಸುವಾಗ ಕೇಂದ್ರ ಸರ್ಕಾರ ನೇಮಕ ಮಾಡುವ ಸದಸ್ಯರಲ್ಲಿ ಇಬ್ಬರು ಮಹಿಳೆಯರು ಇರಬೇಕು. ಅದೇ ರೀತಿ, ಮುಸ್ಲಿಮೇತರ ಸಮುದಾಯದ ಇಬ್ಬರು ಸದಸ್ಯರನ್ನು ನೇಮಕ ಮಾಡಬೇಕು ಎಂದು ಹೇಳಿದೆ. ಉಳಿದಂತೆ ಮಂಡಳಿಯ ಸ್ವರೂಪ ಮೂಲ ಕಾಯ್ದೆಯಲ್ಲಿ ನಿರೂಪಿಸಿದಂತೆಯೇ ಇದೆ. ಸೆಕ್ಷನ್‌ 14, ರಾಜ್ಯ ವಕ್ಫ್‌ ಮಂಡಳಿ ರಚನೆಯ ಕುರಿತಾಗಿದ್ದು, ಹೊಸ ಮಸೂದೆಯಲ್ಲಿ ಉಪ ಸೆಕ್ಷನ್‌ಗಳಾದ 1, 1ಎ, 2, 3 ಮತ್ತು 4ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ರಾಜ್ಯ ವಕ್ಫ್‌ ಮಂಡಳಿಗಳಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಶಿಯಾ, ಸುನ್ನಿ ಮತ್ತು ಮುಸ್ಲಿಂ ಸಮುದಾಯದ ಇತರ ಹಿಂದುಳಿದ ವರ್ಗಗಳಿಂದ ತಲಾ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT