ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

Last Updated 12 ಮೇ 2022, 10:13 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿ ಇದ್ದ, ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಿಂದ ಬಂಡವಾಳ ಹಿಂತೆಗೆಯುವ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತಂದು ಎಂಟು ವರ್ಷಗಳು ಕಳೆದಿವೆ.2014–15ನೇ ಸಾಲಿನಿಂದ 2021–22ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದವರೆಗೆ ಸರ್ಕಾರವು ತನ್ನ ಒಡೆತನದಲ್ಲಿದ್ದ ಒಟ್ಟು ₹3.76 ಲಕ್ಷ ಕೋಟಿ ಮೊತ್ತದಷ್ಟು ಷೇರುಗಳನ್ನು ಮಾರಾಟ ಮಾಡಿದೆ. 2022–23ನೇ ಸಾಲಿನ ಮೊದಲ ತಿಂಗಳಲ್ಲಿ ಮತ್ತೆ ₹3,058 ಕೋಟಿ ಮೌಲ್ಯದಷ್ಟು ಷೇರುಗಳನ್ನು ಮಾರಾಟ ಮಾಡಿದೆ.

ಈ ಕಾರ್ಯಕ್ರಮದ ಮೂಲಕ ಕೆಲವು ಕಂಪನಿಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಿರುವ ಸರ್ಕಾರವು, ಅವುಗಳ ಆಡಳಿತ ಮಂಡಳಿ ನಿಯಂತ್ರಣ ಅಧಿಕಾರವನ್ನೂ ಬಿಟ್ಟುಕೊಟ್ಟಿದೆ. ಈ ಸ್ವರೂಪದ ಮಾರಾಟವನ್ನು ಸರ್ಕಾರವು ಖಾಸಗೀಕರಣ ಎಂದೂ ಹೆಸರಿಸಿದೆ. ಅಂದರೆ, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಬಂಡವಾಳ ಹಿಂತೆಗೆತದ ಮೂಲಕ ಖಾಸಗೀರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳನ್ನು ಹೀಗೆ ಖಾಸಗೀಕರಣ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ.

ಹಲವು ಕಂಪನಿಗಳಲ್ಲಿ ಸರ್ಕಾರವು ಹೊಂದಿದ್ದ ಷೇರುಗಳನ್ನು ಗಣನೀಯ ಪ್ರಮಾಣದಲ್ಲಿ ಮಾರಾಟ ಮಾಡಲಾಗಿದೆ. ಆದರೆ ಶೇ 51ಕ್ಕಿಂತ ಹೆಚ್ಚು ಷೇರುಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಮೂಲಕ, ಆಡಳಿತದ ನಿಯಂತ್ರಣವನ್ನು ತನ್ನ ಬಳಿಯೇ ಉಳಿಸಿಕೊಂಡಿದೆ.

ಕೆಲವು ಕಂಪನಿಗಳ ಷೇರುಗಳು, ಬೇರೆ ಕಂಪನಿಗಳ ಒಡೆತನದಲ್ಲಿದ್ದವು. ಅಂತಹ ಷೇರುಗಳನ್ನು ಸರ್ಕಾರವು ಮರಳಿ ಖರೀದಿಸಿದೆ. ಆ ಷೇರುಗಳನ್ನು ಮರುಮಾರಾಟ ಮಾಡಲಾಗಿದೆ. ಆದರೆ ಮಾರಾಟದ ಸ್ವರೂಪ ಮಾತ್ರ ಭಿನ್ನ. ಕೆಲವು ಕಂಪನಿಗಳ ಷೇರುಗಳನ್ನು ಅವುಗಳ ನೌಕರರಿಗೇ ವಿಕ್ರಯ ಮಾಡಲಾಗಿದೆ. ಕೆಲವು ಕಂಪನಿಗಳ ಷೇರುಗಳನ್ನು ಇನಿಷಿಯಲ್ ಪಬ್ಲಿಕ್ ಆಫರಿಂಗ್‌ (ಐಪಿಒ) ಮೂಲಕ ಷೇರುಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಒಂದೇ ಕಂಪನಿಯ ಷೇರುಗಳನ್ನು ಹಲವು ಹಂತಗಳಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರವು, ಆ ಕಂಪನಿಯಲ್ಲಿ ತನ್ನ ಪಾಲನ್ನು ಕಡಿಮೆ ಮಾಡಿಕೊಂಡಿದೆ.‘ಉದ್ದಿಮೆ ನಡೆಸುವುದು ಸರ್ಕಾರದ ಕೆಲಸವಲ್ಲ’ ಎಂಬುದು ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಮೋದಿ ಅವರ ಘೋಷಣೆ. ಅಂದರೆ ಬಂಡವಾಳ ಹಿಂತೆಗೆದ ಮೂಲಕ ಸರ್ಕಾರಿ ಕಂಪನಿಗಳಲ್ಲಿನ ತನ್ನ ನಿಯಂತ್ರಣವನ್ನು ಖಾಸಗಿಯವರಿಗೆ ಬಿಟ್ಟುಕೊಡುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ.

ಆರ್ಥಿಕ ವರ್ಷ; ಬಂಡವಾಳ ಹಿಂತೆಗೆತದ ಮೊತ್ತ

2014–15;₹24,349 ಕೋಟಿ

2015–16;₹23,996.80 ಕೋಟಿ

2016–17;₹46,246.58 ಕೋಟಿ

2017–18;₹1,00,056.91 ಕೋಟಿ

2018–19;₹84,972.17 ಕೋಟಿ

2019–20;₹50,298.64 ಕೋಟಿ

2020–21;₹32,845.18 ಕೋಟಿ

2021–22;₹13,530.67 ಕೋಟಿ

2022-23 (ಮೇ 10ರವರೆಗೆ);₹3,058.78 ಕೋಟಿ

ಸಂಪೂರ್ಣ ಮಾರಾಟ

ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿದ್ದ ಲಾಭದಲ್ಲಿದ್ದ ಮತ್ತು ನಷ್ಟದಲ್ಲಿದ್ದ ಕೆಲವು ಕಂಪನಿಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ. ಎಂಟು ವರ್ಷಗಳಲ್ಲಿ ಹೀಗೆ ಒಟ್ಟು ಎಂಟು ಕಂಪನಿಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಗಳಲ್ಲಿ ಸರ್ಕಾರವು ಶೇ 1ರಷ್ಟು ಷೇರುಗಳನ್ನೂ ಈಗ ಹೊಂದಿಲ್ಲ. ಹೀಗೆ ಮಾರಾಟ ಮಾಡುವುದರೊಂದಿಗೆ ಆ ಕಂಪನಿಗಳ ನಿಯಂತ್ರಣವನ್ನೂ ಸರ್ಕಾರವು ವರ್ಗಾಯಿಸುತ್ತದೆ. ಈ ಸ್ವರೂಪದ ಮಾರಾಟವನ್ನು ಖಾಸಗೀಕರಣ ಎಂದು ಸರ್ಕಾರವು ವಿವರಿಸಿದೆ.

* ಸಾರ್ವಜನಿಕ ಸೇವೆಯಲ್ಲಿ ಅತ್ಯಂತ ಮುಖ್ಯವಾದ ಕಂಪನಿಗಳನ್ನೂ ಈ ರೀತಿ ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ. ಈಶಾನ್ಯ ಭಾರತದಲ್ಲಿ ವಿದ್ಯುತ್ ಪೂರೈಕೆಯ ಹಣೆ ಹೊತ್ತಿರುವಈಶಾನ್ಯ ವಿದ್ಯುಚ್ಛಕ್ತಿ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ

* ದೇಶದ ವಿದ್ಯುಚ್ಛಕ್ತಿ ಕಂಪನಿಗಳು ಮತ್ತು ಯೋಜನೆಗಳಿಗೆ ಹಣಕಾಸು ನೆರವು ಮತ್ತು ಸಾಲ ಒದಗಿಸುವ ಪ್ರಮುಖ ಕಂಪನಿಯಾದಪವರ್ ಫೈನಾನ್ಸ್‌ ಕಾರ್ಪೊರೇಷನ್ ಲಿಮಿಟೆಡ್‌ನ ಎಲ್ಲಾ ಷೇರುಗಳನ್ನು ಸರ್ಕಾರ ಮಾರಾಟ ಮಾಡಿದೆ

* ದೇಶದ ಬಂದರುಗಳು ಮತ್ತು ವಿದೇಶಿ ಬಂದರುಗಳಲ್ಲೂ ಹೂಳೆತ್ತುವ ಸೇವೆ ಒದಗಿಸುವಡ್ರೆಜಿಂಗ್‌ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಎಲ್ಲಾ ಷೇರುಗಳನ್ನು ಸರ್ಕಾರ ಮಾರಾಟ ಮಾಡಿದೆ.

ಕಂಪನಿ;ಮಾರಾಟದ ಮೊತ್ತ

ಎಚ್‌ಎಸ್‌ಸಿಸಿ ಇಂಡಿಯಾ ಲಿಮಿಟೆಡ್‌;₹285 ಕೋಟಿ

ಡ್ರೆಜಿಂಗ್‌ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್;₹1,049.17 ಕೋಟಿ

ಪವರ್ ಫೈನಾನ್ಸ್‌ ಕಾರ್ಪೊರೇಷನ್ ಲಿಮಿಟೆಡ್;₹14,499.99 ಕೋಟಿ

ಟಿಎಚ್‌ಡಿಸಿ ಇಂಡಿಯಾ ಲಿಮಿಟೆಡ್;₹7,500 ಕೋಟಿ

ಈಶಾನ್ಯ ವಿದ್ಯುಚ್ಛಕ್ತಿ ಕಾರ್ಪೊರೇಷನ್ ಲಿಮಿಟೆಡ್;₹4,000 ಕೋಟಿ

ಕಾಮರಾಜ್ ಪೋರ್ಟ್‌ ಲಿಮಿಟೆಡ್‌;₹2,383 ಕೋಟಿ

ಐಪಿಸಿಎಲ್‌;₹219.34 ಕೋಟಿ

ಏರ್‌ ಇಂಡಿಯಾ;₹2,700 ಕೋಟಿ

8/ ಈ ಸ್ವರೂಪದಲ್ಲಿ ಮಾರಾಟ ಮಾಡಲಾದ ಕಂಪನಿಗಳ ಸಂಖ್ಯೆ

₹32,636 ಕೋಟಿ/ ಈ ಕಂಪನಿಗಳ ಮಾರಾಟದಿಂದ ಸರ್ಕಾರಕ್ಕೆ ದೊರೆತ ವರಮಾನ

ಇಂಡಿಯನ್‌ ಆಯಿಲ್‌ನಲ್ಲಿ ಸರ್ಕಾರದ ಪಾಲು ಇಳಿಕೆ

ದೇಶದ ಅತ್ಯಂತ ದೊಡ್ಡ ತೈಲ ಸಂಸ್ಕರಣ ಮತ್ತು ಮಾರಾಟ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ (ಐಒಸಿಎಲ್‌) ಷೇರುಗಳನ್ನು ಕೇಂದ್ರ ಸರ್ಕಾರವು ಹಲವು ಬಾರಿ ಮಾರಾಟ ಮಾಡಿದೆ. ಹೀಗೆ ಮಾರಾಟ ಮಾಡಿದ ಕಾರಣ, ಕಂಪನಿಯ ಷೇರುಗಳಲ್ಲಿ ಸರ್ಕಾರದ ಪಾಲುದಾರಿಕೆ ಕುಸಿದಿದೆ. ಷೇರುಗಳ ಮಾರಾಟದಿಂದ ಸರ್ಕಾರವು ದೊಡ್ಡ ಪ್ರಮಾಣದ ವರಮಾನವನ್ನೂ ಗಳಿಸಿದೆ.

ಕೇಂದ್ರ ಸರ್ಕಾರದ ಒಡೆತನದ ಹಾಗೂ ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಲ್ಲಿ ಇರುವ ಬಂಡವಾಳದ ಪಾಲನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ನಡೆಸುತ್ತಿದ್ದು, ಇದನ್ನು ಸಮರ್ಥಿಸಿಕೊಳ್ಳಲು ಕೆಲವು ಕಾರಣಗಳನ್ನು ಮುಂದಿಟ್ಟಿದೆ. ಸರ್ಕಾರ ಹಮ್ಮಿಕೊಂಡಿರುವ ಹಲವು ಬಗೆಯ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತದ ಹಣ ಅಗತ್ಯವಿದೆ. ಬಂಡವಾಳ ಹಿಂತೆಗೆತದಿಂದ ಬಂದ ವರಮಾನವನ್ನು ಈ ಕಲ್ಯಾಣ ಕಾರ್ಯಕ್ರಮಗಳನ್ನು ಮುನ್ನಡೆಸಲು ಬಳಸಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದೆ.ಜೊತೆಗೆ, ಸರ್ಕಾರಿ ಒಡೆತನದ ಕಂಪನಿಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸುವುದು, ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದು ಹಾಗೂ ಈ ಸಂಸ್ಥೆಗಳ ನಿರ್ವಹಣೆಗೆ ಉತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಸರ್ಕಾರದ ಉದ್ದೇಶ. ಬಂಡವಾಳ ಹಿಂತೆಗೆತದ ಮೂಲಕ ಈ ಎಲ್ಲ ಉದ್ದೇಶಗಳು ಕಾರ್ಯರೂಪಕ್ಕೆ ಬರಲಿವೆ ಎಂಬುದು ಸರ್ಕಾರದ ಸಮರ್ಥನೆ.

ಸಾರ್ವಜನಿಕ ವಲಯದ ಕಂಪನಿಗಳ ಬಂಡವಾಳ ಹಿಂತೆಗೆತ ನೀತಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು 2021–22ರ ಬಜೆಟ್ ಮಂಡಿಸುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ್ದರು. ಸಾರ್ವಜನಿಕ ವಲಯದ ಕಂಪನಿಗಳನ್ನು ಎರಡು ರೀತಿ ವರ್ಗೀಕರಣ ಮಾಡಲಾಗಿದ್ದು, ಸರ್ಕಾರದ ಪಾಲು ಮಾರಾಟ ಮಾಡಲು ಈ ನೀತಿ ಸ್ಪಷ್ಟ ಚೌಕಟ್ಟು ಒದಗಿಸುತ್ತದೆ ಎಂದು ಅವರು ಹೇಳಿದ್ದರು.ಮೊದಲ ವರ್ಗದಲ್ಲಿ ಅಣುಶಕ್ತಿ, ಬಾಹ್ಯಾಕಾಶ, ರಕ್ಷಣೆ, ಸಾರಿಗೆ, ಸಂವಹನ, ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು ಹಾಗೂ ಇತರೆ ಖನಿಜ ಸಂಸ್ಥೆಗಳು, ಬ್ಯಾಂಕ್, ವಿಮೆ ಹಾಗೂ ಹಣಕಾಸು ಸಂಸ್ಥೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಸರ್ಕಾರದ ಪಾಲನ್ನು ಹಿಂಪಡೆಯುವುದು ಸರ್ಕಾರದ ಉದ್ದೇಶ.

ಎರಡನೇ ವರ್ಗದಲ್ಲಿರುವ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದು ಅಥವಾ ಇತರೆ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ವಿಲೀನ ಮಾಡುವುದು ಅಥವಾ ಅವುಗಳನ್ನು ಬಂದ್ ಮಾಡುವ ಆಯ್ಕೆಗಳಿವೆ. 2021–22ರ ಆರ್ಥಿಕ ವರ್ಷದಲ್ಲಿ ಬಿಪಿಸಿಎಲ್, ಏರ್ ಇಂಡಿಯಾ, ಎಲ್‌ಐಸಿ ಮೊದಲಾದ ಸಂಸ್ಥೆಗಳನ್ನು ಸರ್ಕಾರ ಗುರುತಿಸಿತ್ತು. ಮುಂದಿನ ಹಂತದಲ್ಲಿ ಬಂಡವಾಳ ಹಿಂತೆಗೆತ ಮಾಡಬೇಕಿರುವ ಸಂಸ್ಥೆಗಳನ್ನು ಪಟ್ಟಿ ಮಾಡುವಂತೆ ನೀತಿ ಆಯೋಗಕ್ಕೆ ಸರ್ಕಾರ ಸೂಚಿಸಿತ್ತು.

ಕೋಲ್ ಇಂಡಿಯಾ

ಪ್ರಪಂಚದ ಅತಿಹೆಚ್ಚು ಕಲ್ಲಿದ್ದಲು ಉತ್ಪಾದಕ ಕಂಪನಿಗಳಲ್ಲಿ ಒಂದಾಗಿರುವ ಭಾರತದ ‘ಕೋಲ್ ಇಂಡಿಯಾ ಲಿಮಿಟೆಡ್‌’ನಲ್ಲಿ ಸರ್ಕಾರದ ಪಾಲು ವರ್ಷಗಳು ಉರುಳಿದಂತೆ ಕಡಿಮೆಯಾಗುತ್ತಿದೆ. 2016–17ರಿಂದ 2018–19ರ ಅವಧಿಯಲ್ಲಿ ಸರ್ಕಾರವು ಈ ಕಂಪನಿಯ ಷೇರುಗಳನ್ನು ಮಾರಾಟ ಮಾಡಿ ₹8,912 ಕೋಟಿ ವರಮಾನ ಗಳಿಸಿದೆ. 2018–19ರಲ್ಲಿ ಮೂರು ಬಾರಿ ಷೇರು ಮಾರಾಟಕ್ಕೆ ಇಟ್ಟಿತ್ತು. ಈಗ ಸರ್ಕಾರದ ಬಳಿ ಕೋಲ್ ಇಂಡಿಯಾದ ಶೇ 72ರಷ್ಟು ಷೇರುಗಳಿವೆ.

ಬಂಡವಾಳ ಹಿಂತೆಗೆತ ನೀತಿ

ಕೇಂದ್ರ ಸರ್ಕಾರದ ಒಡೆತನದ ಹಾಗೂ ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಲ್ಲಿ ಇರುವ ಬಂಡವಾಳದ ಪಾಲನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ನಡೆಸುತ್ತಿದ್ದು, ಇದನ್ನು ಸಮರ್ಥಿಸಿಕೊಳ್ಳಲು ಕೆಲವು ಕಾರಣಗಳನ್ನು ಮುಂದಿಟ್ಟಿದೆ. ಸರ್ಕಾರ ಹಮ್ಮಿಕೊಂಡಿರುವ ಹಲವು ಬಗೆಯ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ದೊಡ್ಡ ಮೊತ್ತದ ಹಣ ಅಗತ್ಯವಿದೆ. ಬಂಡವಾಳ ಹಿಂತೆಗೆತದಿಂದ ಬಂದ ವರಮಾನವನ್ನು ಈ ಕಲ್ಯಾಣ ಕಾರ್ಯಕ್ರಮಗಳನ್ನು ಮುನ್ನಡೆಸಲು ಬಳಸಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದೆ. ಜೊತೆಗೆ, ಸರ್ಕಾರಿ ಒಡೆತನದ ಕಂಪನಿಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸುವುದು, ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದು ಹಾಗೂ ಈ ಸಂಸ್ಥೆಗಳ ನಿರ್ವಹಣೆಗೆ ಉತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಸರ್ಕಾರದ ಉದ್ದೇಶ. ಬಂಡವಾಳ ಹಿಂತೆಗೆತದ ಮೂಲಕ ಈ ಎಲ್ಲ ಉದ್ದೇಶಗಳು ಕಾರ್ಯರೂಪಕ್ಕೆ ಬರಲಿವೆ ಎಂಬುದು ಸರ್ಕಾರದ ಸಮರ್ಥನೆ.

ಸಾರ್ವಜನಿಕ ವಲಯದ ಕಂಪನಿಗಳ ಬಂಡವಾಳ ಹಿಂತೆಗೆತ ನೀತಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು 2021–22ರ ಬಜೆಟ್ ಮಂಡಿಸುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ್ದರು. ಸಾರ್ವಜನಿಕ ವಲಯದ ಕಂಪನಿಗಳನ್ನು ಎರಡು ರೀತಿ ವರ್ಗೀಕರಣ ಮಾಡಲಾಗಿದ್ದು, ಸರ್ಕಾರದ ಪಾಲು ಮಾರಾಟ ಮಾಡಲು ಈ ನೀತಿ ಸ್ಪಷ್ಟ ಚೌಕಟ್ಟು ಒದಗಿಸುತ್ತದೆ ಎಂದು ಅವರು ಹೇಳಿದ್ದರು. ಮೊದಲ ವರ್ಗದಲ್ಲಿ ಅಣುಶಕ್ತಿ, ಬಾಹ್ಯಾಕಾಶ, ರಕ್ಷಣೆ, ಸಾರಿಗೆ, ಸಂವಹನ, ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು ಹಾಗೂ ಇತರೆ ಖನಿಜ ಸಂಸ್ಥೆಗಳು, ಬ್ಯಾಂಕ್, ವಿಮೆ ಹಾಗೂ ಹಣಕಾಸು ಸಂಸ್ಥೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಸರ್ಕಾರದ ಪಾಲನ್ನು ಹಿಂಪಡೆಯುವುದು ಸರ್ಕಾರದ ಉದ್ದೇಶ.

ಎರಡನೇ ವರ್ಗದಲ್ಲಿರುವ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದು ಅಥವಾ ಇತರೆ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ವಿಲೀನ ಮಾಡುವುದು ಅಥವಾ ಅವುಗಳನ್ನು ಬಂದ್ ಮಾಡುವ ಆಯ್ಕೆಗಳಿವೆ. 2021–22ರ ಆರ್ಥಿಕ ವರ್ಷದಲ್ಲಿ ಬಿಪಿಸಿಎಲ್, ಏರ್ ಇಂಡಿಯಾ, ಎಲ್‌ಐಸಿ ಮೊದಲಾದ ಸಂಸ್ಥೆಗಳನ್ನು ಸರ್ಕಾರ ಗುರುತಿಸಿತ್ತು. ಮುಂದಿನ ಹಂತದಲ್ಲಿ ಬಂಡವಾಳ ಹಿಂತೆಗೆತ ಮಾಡಬೇಕಿರುವ ಸಂಸ್ಥೆಗಳನ್ನು ಪಟ್ಟಿ ಮಾಡುವಂತೆ ನೀತಿ ಆಯೋಗಕ್ಕೆ ಸರ್ಕಾರ ಸೂಚಿಸಿತ್ತು.

ಆರ್ಥಿಕ ವರ್ಷ;ಮಾರಾಟ ಮಾಡಲಾದ ಷೇರುಗಳ ಪ್ರಮಾಣ;ಸರ್ಕಾರದ ಬಳಿ ಉಳಿದ ಷೇರುಗಳ ಪ್ರಮಾಣ;ಮಾರಾಟದಿಂದ ಬಂದ ಆದಾಯ

2015–16;10%;58.57%;₹9,369 ಕೋಟಿ

2016–17;0.5%;58.28%;₹262.49 ಕೋಟಿ

2018–19;3.39%;53.88%; ₹2,647 ಕೋಟಿ

ಆಧಾರ: ಸಾರ್ವಜನಿಕ ಆಸ್ತಿ ನಿರ್ವಹಣೆ ಮತ್ತು ಬಂಡವಾಳ ಹಿಂತೆಗೆತ ಇಲಾಖೆ ವಾರ್ಷಿಕ ವರದಿಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT