ಫ್ಯಾಕ್ಟ್ಚೆಕ್: ಬಿರಿಯಾನಿಯಲ್ಲಿ ಸಂತಾನ ಶಕ್ತಿ ಹರಣ ಮಾತ್ರೆ– ಈ ಸುದ್ದಿ ಸುಳ್ಳು

‘ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ರಸ್ತೆಬದಿಯ ಬಿರಿಯಾನಿ ಅಂಗಡಿಗಳಲ್ಲಿ ದೊರೆಯುವ ಬಿರಿಯಾನಿಗಳಲ್ಲಿ ಸಂತಾನ ಶಕ್ತಿ ಹರಣ ಔಷಧವನ್ನು ಬೆರೆಸಲಾಗುತ್ತದೆ’ ಎಂಬುದಾಗಿ ಟ್ವಿಟರ್ನಲ್ಲಿ ಚರ್ಚೆಯಾಗುತ್ತಿದೆ. ‘ಹಿಂದೂಗಳು ಅದರಲ್ಲೂ ಮದುವೆಯಾಗದ ಯುವಕರನ್ನು ಗುರಿಯಾಗಿಸಿ ಈ ಕೃತ್ಯ ಎಸಗಲಾಗುತ್ತಿದೆ. ಬಲಪಂಥೀಯ ಸಂಘಟನೆ ಕಾರ್ಯಕರ್ತ ಹಾಗೂ ಇಂದೂ ಮಕ್ಕಳ್ ಕಚ್ಚಿ ಸಂಸ್ಥಾಪಕ ಅರ್ಜುನ್ ಸಂಪತ್ ಅವರು ಈ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ’ ಎಂಬುದಾಗಿ ಚರ್ಚೆಯಾಗುತ್ತಿದೆ. 40 ಸಾವಿರಕ್ಕೂ ಹೆಚ್ಚು ಬಿರಿಯಾನಿ ಅಂಗಡಿಗಳು ಸ್ಥಳೀಯ ಆಹಾರ ಪದ್ಧತಿಯ ಮೇಲೆ ಸಾಂಸ್ಕೃತಿಕ ಭಯೋತ್ಪಾದನೆ ನಡೆಸುತ್ತಿವೆ ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ.
ಟ್ವಿಟರ್ನಲ್ಲಿ ಚರ್ಚೆಯಾಗುತ್ತಿರುವ ಹಾಗೆ ಬಿರಿಯಾನಿಯಲ್ಲಿ ಸಂತಾನ ಶಕ್ತಿ ಹರಣ ಮಾತ್ರೆಗಳನ್ನು ಬೆರೆಸಲಾಗುತ್ತಿದೆ ಎಂಬ ಮಾಹಿತಿ ಸುಳ್ಳು ಎಂದು ಚೆನ್ನೈನ ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಸ್ಪಷ್ಪಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ‘ಆರೋಪ ಕೇಳಿಬಂದ ಬಿರಿಯಾನಿ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ನಗರದ ಯಾವುದೇ ರೆಸ್ಟೋರೆಂಟ್, ಹೋಟೆಲ್ ಅಥವಾ ಉಪಹಾರ ಮಂದಿರಗಳ ವಿರುದ್ಧ ಯಾರೂ ದೂರು ನೀಡಿಲ್ಲ. ಈ ವದಂತಿಯನ್ನು ನಂಬಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.