ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಸ್ವಚ್ಛತೆಯಿದ್ದರೆ ಡೆಂಗಿ ದೂರ!

Published 3 ಜುಲೈ 2023, 21:30 IST
Last Updated 3 ಜುಲೈ 2023, 21:30 IST
ಅಕ್ಷರ ಗಾತ್ರ

ಕೋವಿಡ್‌ 19ರ ಹಾವಳಿಗೂ ಮುನ್ನ ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿದ್ದ ವೈರಸ್‌ ಡೆಂಗಿ ಜ್ವರದ್ದು. ಕೋವಿಡ್‌ ಭೀತಿ ಕಳೆದರೂ ಡೆಂಗಿ ಜ್ವರದ ಅಪಾಯ ಮುಂದುವರಿದಿದೆ. 

ಸೊಳ್ಳೆಗಳ ಮೂಲಕ ಹರಡುವ ಡೆಂಗಿ ವೈರಸ್ ತೀವ್ರ ಜ್ವರ, ಕೀಲುಗಳ ನೋವು, ಚರ್ಮ ಕೆಂಪಾಗುವುದು ಮೊದಲಾದ ಲಕ್ಷಣಗಳನ್ನು ತೋರುತ್ತದೆ. ಡೆಂಗಿ ಜ್ವರದ ಬಹುತೇಕ ರೋಗಿಗಳು ಪ್ರಾಥಮಿಕ ಚಿಕಿತ್ಸೆ, ಸಾಕಷ್ಟು ದ್ರವಾಹಾರ, ಮತ್ತು ವಿಶ್ರಾಂತಿಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ, ಕೆಲವರಲ್ಲಿ ಕಾಯಿಲೆ ತೀವ್ರ ಸ್ವರೂಪ ಪಡೆದು ರಕ್ತಸ್ರಾವ ಮತ್ತು ಅಂಗವೈಫಲ್ಯದಂಥ ಮಾರಣಾಂತಿಕ ಸಮಸ್ಯೆಗಳು ಉಂಟಾಗಬಹುದು. ಸಮಸ್ಯೆ ಯಾರಲ್ಲಿ ತೀವ್ರ ಸ್ವರೂಪ ಪಡೆಯುತ್ತದೆ ಎಂದು ಮೊದಲೇ ತಿಳಿಯಲು ಸಾಧ್ಯವಿಲ್ಲದ ಕಾರಣ ಪ್ರತಿಯೊಬ್ಬ ರೋಗಿಯ ವಿಷಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯ.

ಡೆಂಗಿ ಜ್ವರದ ರೋಗಿಗಳಾಗಲಿ, ಅವರ ಕುಟುಂಬಸ್ಥರಾಗಲಿ ಜತೆಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಇಂತಹ ಎಚ್ಚರದ ಆವಶ್ಯಕತೆ ತಪ್ಪಿದ್ದಲ್ಲ. ಮಕ್ಕಳ ವಿಷಯದಲ್ಲಂತೂ ಪೋಷಕರು ಮೈಯೆಲ್ಲ ಕಣ್ಣಾಗಿರಬೇಕು. ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ಆ್ಯಂಟಿಬಯಾಟಿಕ್ ಔಷಧಗಳ ಬಳಕೆಯಿಂದ ತಕ್ಕ ಮಟ್ಟಿಗೆ ನಿಗ್ರಹಿಸಬಹುದು. ಆದರೆ ಆ್ಯಂಟಿಬಯಾಟಿಕ್ ಔಷಧಗಳು ವೈರಸ್ ಕಾಯಿಲೆಗಳ ಮೇಲೆ ಕೆಲಸ ಮಾಡುವುದಿಲ್ಲ. ಬಹುತೇಕ ವೈರಸ್ ಕಾಯಿಲೆಗಳಿಗೆ ಪಕ್ಕಾ ಚಿಕಿತ್ಸೆ ಇಲ್ಲ. ಹೀಗಾಗಿ, ನಮ್ಮ ಶರೀರದ ರಕ್ಷಕ ವ್ಯವಸ್ಥೆಯೇ ವೈರಸ್ ವಿರುದ್ಧ ಹೊಡೆದಾಡಬೇಕು; ಈ ಕಾದಾಟಕ್ಕೆ ಪೂರಕವಾಗುವಂತೆ ನಾವು ಶರೀರವನ್ನು ನೋಡಿಕೊಳ್ಳಬೇಕು.

ವೈರಸ್ ಕಾಯಿಲೆಗಳು ಬಂದ ನಂತರ ಅವಕ್ಕೆ ಚಿಕಿತ್ಸೆ ನೀಡುವುದರ ಬದಲಿಗೆ, ಅವುಗಳು ಬಾರದಂತೆ ಕಾಪಾಡಿಕೊಳ್ಳುವುದು ಸೂಕ್ತ ನಡೆ. ಇದನ್ನು ಮಾಡಲು ರೋಗಗಳ ಬಗ್ಗೆ ಅರಿವು ಮೂಡುವುದು ಮುಖ್ಯ.

ಡೆಂಗಿ ಜ್ವರ ಒಂದು ಸಾಂಕ್ರಾಮಿಕ ಕಾಯಿಲೆ. ಅಂದರೆ, ಅದು ಒಬ್ಬ ರೋಗಿಯಿಂದ ಮತ್ತೊಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಅಧಿಕತರ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮೂರು ಅಂಶಗಳಿರುತ್ತವೆ – ರೋಗಕಾರಕ ಸೂಕ್ಷ್ಮಾಣುಜೀವಿ, ರೋಗವನ್ನು ಹರಡುವ ವಾಹಕ, ಮತ್ತು ಇವೆರಡರ ಬೆಳವಣಿಗೆಗೆ ಪೂರಕವಾಗುವ ವಾತಾವರಣ. ಈ ಮೂರನ್ನೂ ಕೂಡಿಸಿದರೆ ‘ಸೋಂಕಿನ ತ್ರಿಕೋಣ’ವಾಗುತ್ತದೆ. ಕಾಯಿಲೆಯನ್ನು ಹರಡದಂತೆ ತಡೆಗಟ್ಟಬೇಕಾದರೆ ಸೋಂಕಿನ ತ್ರಿಕೋಣದ ಯಾವುದಾದರೂ ಒಂದು ಬಾಹುವನ್ನಾದರೂ ಮುರಿಯಬೇಕು.

ಡೆಂಗಿ ಔಷಧ, ಅಥವಾ ದೇಹದೊಳಗೆ ವೈರಸ್ ಬೆಳೆಯದಂತೆ ವಿರೋಧಿಸುವ ಲಸಿಕೆಯ ಲಭ್ಯತೆಯಿಲ್ಲ. ಆದ್ದರಿಂದ, ವೈರಸ್ ಮಟ್ಟದಲ್ಲಿ ಇದನ್ನು ನಿಗ್ರಹಿಸುವುದು ಕಷ್ಟ. ಡೆಂಗಿ ವೈರಸ್ ಹರಡುವುದು ಈಡಿಸ್ ಇಜಿಪ್ಟೈ ಎನ್ನುವ ಹೆಣ್ಣುಸೊಳ್ಳೆಗಳಿಂದ. ಈ ಪ್ರಭೇದದ ಸೊಳ್ಳೆಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇದು ನಿಂತ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನವನ್ನು ಬೆಳೆಸುತ್ತದೆ. ಹಗಲಿನ ವೇಳೆ ಸಕ್ರಿಯವಾಗಿರುವ ಈ ಸೊಳ್ಳೆ ಸಂಜೆಯ ನಂತರ ತನ್ನ ಕೆಲಸವನ್ನು ಕಡಿಮೆ ಮಾಡುತ್ತದೆ. ಡೆಂಗಿ ಜ್ವರದ ರೋಗಿಯನ್ನು ಇಂತಹ ಸೊಳ್ಳೆಗಳು ಕಡಿದಾಗ ಅವುಗಳ ಒಳಗೆ ವೈರಸ್ ಸೇರಿಕೊಳ್ಳುತ್ತದೆ. ಅದೇ ಸೊಳ್ಳೆ ಮತ್ತೊಬ್ಬ ನಿರೋಗಿಯನ್ನು ಕಡಿದಾಗ ಡೆಂಗಿ ವೈರಸ್ ಆ ವ್ಯಕ್ತಿಯ ರಕ್ತವನ್ನು ಸೇರಿ ಕಾಯಿಲೆ ತರುತ್ತದೆ. ಡೆಂಗಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಅದೇನಿದ್ದರೂ ‘ಈಡಿಸ್ ಇಜಿಪ್ಟೈ’ ಎಂಬ ಹೆಣ್ಣುಸೊಳ್ಳೆಯ ಕಡಿತದಿಂದ ಮಾತ್ರ ಹರಡಬಲ್ಲದು. ಅಂದರೆ, ಸೊಳ್ಳೆಗಳನ್ನು ನಿಗ್ರಹಿಸಿದರೆ ಡೆಂಗಿ ಜ್ವರದಿಂದ ರಕ್ಷಣೆ ಸಾಧ್ಯ.

ಈ ನಿಟ್ಟಿನಲ್ಲಿ ಕೆಲಸಕ್ಕೆ ಬರುವುದು ಪರಿಸರದ ಬಗೆಗಿನ ನಮ್ಮ ಅರಿವು. ಸೊಳ್ಳೆಗಳು ಬೆಳೆಯಲು ಪೂರಕವಾಗುವ ಗಲೀಜು ಪರಿಸರವನ್ನು ಚೊಕ್ಕಟಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ನಿಂತ ನೀರಿನಲ್ಲಿ ಈಡಿಸ್ ಇಜಿಪ್ಟೈ ಸೊಳ್ಳೆಗಳು ಬೆಳೆಯುತ್ತವೆ ಎಂದು ತಿಳಿದಾಗ, ಎಲ್ಲೂ ನೀರು ನಿಲ್ಲದಂತೆ ನಿಗಾ ವಹಿಸುವುದು; ಹೀಗೆ ನಿಂತ ನೀರನ್ನು ಶುಚಿಗೊಳಿಸುವುದು ಮುಖ್ಯ. ಆದರೆ ಧಾವಂತದ ಆಧುನಿಕ ಬದುಕಿನಲ್ಲಿ ಈ ರೀತಿ ಗಮನಿಸುವುದು ಸುಲಭದ ಮಾತಲ್ಲ. ನಮ್ಮ ಅರಿವಿನ ಪರಿಧಿಗೆ ಬರದಂತಹ ಎಡೆಗಳಲ್ಲಿ ನೀರು ನಿಂತು ಸೊಳ್ಳೆಗಳ ಬೆಳವಣಿಗೆ ಆಗಬಹುದು.

ಆಲಂಕಾರಿಕವಾಗಿ ಮನೆಯೊಳಗೆ ಬೆಳೆಯುವ ಸಸ್ಯಗಳ ಕುಂಡಗಳು; ಮನೆಯ ಹಿತ್ತಲಲ್ಲಿ ಎಸೆದಿರುವ ಹಳೆಯ ಪಾತ್ರೆ, ಮಡಕೆ, ಟೈರು, ಆಟಿಕೆ, ಬಕೆಟ್ ಮೊದಲಾದವುಗಳಲ್ಲಿ ಸೇರಿರುವ ನೀರು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ. ನೀರು ಹೊತ್ತು ತರುವ ಅಥವಾ ಹೊರಹಾಕುವ ಪೈಪುಗಳಲ್ಲಿ ಎಂದೋ ಆಗಿರಬಹುದಾದ ಸಣ್ಣ ಬಿರುಕಿನಿಂದ ಹರಿದ ನೀರು ಮನೆಯ ಆಸುಪಾಸಿನ ಸ್ವಲ್ಪ ತಗ್ಗು ಪ್ರದೇಶದಲ್ಲಿ ಅನಾಯಾಸವಾಗಿ ನಿಲ್ಲುತ್ತದೆ. ಇವುಗಳಲ್ಲಿ ಸೊಳ್ಳೆಗಳು ಹುಲುಸಾಗಿ ಬೆಳೆಯುತ್ತವೆ. ನಮ್ಮ ಮನೆಯನ್ನು ನಾವು ಚೊಕ್ಕಟವಾಗಿ ಇಟ್ಟುಕೊಂಡರೂ, ನೆರೆಹೊರೆಯವರ ನಿರ್ಲಕ್ಷ್ಯದಿಂದ ನಿಲ್ಲುವ ನೀರಿನಲ್ಲಿ ಬೆಳೆಯುವ ಸೊಳ್ಳೆಗಳು ಆಯಾ ಪ್ರದೇಶದ ಪ್ರತಿಯೊಬ್ಬರಿಗೂ ಹಾನಿಮಾಡಬಲ್ಲವು. ಹೀಗಾಗಿ, ಈ ವಿಷಯದ ಬಗ್ಗೆ ಸಾಂಘಿಕ ಅರಿವು ಮೂಡಿಸಿ, ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಗತ್ಯಂತರವಿಲ್ಲದೆ ನೀರನ್ನು ಹಿಡಿದಿಡಬೇಕಾದ ಸಂದರ್ಭದಲ್ಲಿ ಬಳಕೆಗೆ ಸಂಗ್ರಹಿಸಿರುವ ನೀರಿನಲ್ಲಿ ಸೊಳ್ಳೆಗಳ ಗೊದಮೊಟ್ಟೆಗಳನ್ನು ತಿನ್ನುವ ಮೀನುಗಳ ಪೋಷಣೆ; ನಿಂತ ನೀರಿನ ಮೇಲೆ ಬೇವಿನ ಎಣ್ಣೆಯ ಸಿಂಪಡಿಕೆ ಮೊದಲಾದ ಪರಿಸರಕ್ಕೆ ಹಾನಿ ಮಾಡದ ವಿಧಾನಗಳಿಂದ ಸೊಳ್ಳೆಗಳ ಬೆಳವಣಿಗೆ ತಪ್ಪಿಸುವಂತಹ ಕೆಲಸಗಳನ್ನು ಮಾಡಬಹುದು. ಮನೆಯೊಳಗೆ ಸೊಳ್ಳೆಗಳು ಬಾರದಂತೆ ಕಿಟಕಿ ಬಾಗಿಲುಗಳಿಗೆ ಜಾಲರಿಗಳ ಅಳವಡಿಕೆ, ಮನೆಯನ್ನು ಅನಗತ್ಯ ಕಸದಿಂದ ತುಂಬದೆ ಚೊಕ್ಕಟ ಮಾಡುವುದು, ಮನೆಯಿಂದ ಹೊರಹೋಗುವಾಗ ಮೈತುಂಬುವ ಬಟ್ಟೆಗಳ ಬಳಕೆ, ಸೊಳ್ಳೆನಿರೋಧಕ ಮುಲಾಮುಗಳನ್ನು ಹಚ್ಚುವಿಕೆ ಮೊದಲಾದವುಗಳಿಂದ ಮಕ್ಕಳಾದಿಯಾಗಿ ಎಲ್ಲರನ್ನೂ ಸೊಳ್ಳೆಗಳ ಕಡಿತದಿಂದ ಕಾಪಾಡಬಲ್ಲವು.

ಕಾಯಿಲೆಯ ಗಹನತೆಯನ್ನು ಅರಿಯಲಾಗದ ಮಕ್ಕಳನ್ನು ಮನೆಯ ಹಿರಿಯರು ಬಹಳ ಜತನದಿಂದ ನೋಡಿಕೊಂಡು ಅಪಾಯದಿಂದ ರಕ್ಷಿಸಬೇಕು. ಇಷ್ಟಾಗಿಯೂ ಡೆಂಗಿ ಜ್ವರ ಬಾರದಂತೆ ತಡೆಯುವುದು ಸಾಧ್ಯವಾಗದಿರಬಹುದು. ಕಾಯಿಲೆಯ ಪ್ರಾಥಮಿಕ ಲಕ್ಷಣಗಳು ಕಂಡಾಗ ಕೂಡಲೇ ಕುಟುಂಬವೈದ್ಯರನ್ನು ಕಾಣುವುದು ಒಳ್ಳೆಯದು; ಈ ವಿಷಯದಲ್ಲಿ ನಿರ್ಲಕ್ಷ್ಯ ಕೂಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT