ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆಯಿಂದ ಹೊರಗೆ ಬನ್ನಿ... ಇಲ್ಲಿವೆ ಪರಿಹಾರೋಪಾಯಗಳು...

Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆ! ಈ ವಿಷಣ್ಣತೆ ಆ ವ್ಯಕ್ತಿಯೊಬ್ಬನನ್ನು ಸೋಲಿಸುವುದಲ್ಲದೆ, ಸುತ್ತಮುತ್ತಲಿನವರನ್ನೂ ಕಂಗೆಡಿಸುತ್ತದೆ. ಹಾಗಾದರೆ ಈ ಅಸಮಾಧಾನ ಸ್ಥಿತಿಗೆ ಕಾರಣವೇನು?

ಖಿನ್ನತೆಯಾಗುವುದು ಒಬ್ಬ ವ್ಯಕ್ತಿಯಿಂದಾದರೆ, ಒಂದು ವಿಷಯದಿಂದಾದರೆ ಅಥವಾ ನಿರ್ದಿಷ್ಟ ಸಂದರ್ಭದಿಂದಾದರೆ, ಅದರಿಂದ ದೂರ ಸರಿಯಬಹುದು. ಉದಾಹರಣೆಗೆ, ಕಚೇರಿಯ ಕೆಲಸ ನಿಮಗೆ ಅಸಮಾಧಾನ ತರುವಂತಾದಾಗ, ಅದನ್ನು ಬಿಟ್ಟು ಬೇರೆ ಕೆಲಸಕ್ಕೆ ಸೇರಬಹುದು. ಕಾಲ ಸರಿದಂತೆ ಹಳೆ ನೆನಪುಗಳು ಮಾಸಿ, ಅಸಮಾಧಾನ, ನೋವು ನೀಗುತ್ತವೆ. ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ಆದರೆ ವ್ಯಕ್ತಿಯೊಬ್ಬ ಒಬ್ಬನೇ ಇರುವಾಗಲೂ ನಿರುತ್ಸಾಹದಿಂದ, ಚಿಂತೆಯಿಂದ, ಕೊರಗಿನಿಂದಿದ್ದಾಗ, ಆ ವ್ಯಕ್ತಿ ಮಾನಸಿಕವಾಗಿ ಅನಾರೋಗ್ಯದಿಂದಿದ್ದಾನೆ ಎಂದು ಹೇಳಬಹುದು. ಮಾನಸಿಕ ರೋಗ ಎಂದಾಕ್ಷಣ ಅದು ಮರುಳಲ್ಲ! ಬಹುತೇಕ ಜನರು ಮಾನಸಿಕ ತಜ್ಞರ ಬಳಿ ಹೋಗಲು ಹೆದರುತ್ತಾರೆ. ಮಾನಸಿಕವಾಗಿ ಉನ್ಮತ್ತರಾಗಿರುವವರು ಮಾತ್ರ ಮಾನಸಿಕ ವೈದ್ಯರ ಬಳಿ ಹೋಗಬೇಕೆಂದಿಲ್ಲ. ದೇಹಕ್ಕಾಗುವ ನೋವಿಗೆ ಹೇಗೆ ಔಷಧ ಇದೆಯೋ ಹಾಗೆಯೇ ಮಾನಸಿಕ ನೋವಿಗೂ ಔಷಧಿ ಇದೆ. ವ್ಯತ್ಯಾಸವೆಂದರೆ, ದೈಹಿಕ ಕಾಯಿಲೆಯಾದಾಗ ಜನರಿಂದ ಕಾಳಜಿ, ಅನುಕಂಪ ದೊರೆಯುತ್ತದೆ. ಅದೇ ಮಾನಸಿಕವಾಗಿ ನೋವಾದಾಗ ಯಾರೂ ನಿಮ್ಮ ಬಳಿ ಸುಳಿಯುವುದಿಲ್ಲ!

ದೇಹಕ್ಕಾದ ಗಾಯ ಕಾಣುತ್ತದೆ. ಆದರೆ ಮನಸ್ಸಿಗಾದ ಗಾಯ ಯಾರ ಕಣ್ಣಿಗೂ ಗೋಚರಿಸುವುದಿಲ್ಲ. ಮನಸ್ಸಿನ ಗಾಯದ ನೋವು ಬಹಳ ಆಳವಾಗಿರುತ್ತದೆ. ಖಿನ್ನತೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಅನುಭವಿಸಿಯೇ ಇರುತ್ತಾರೆ. ಆದರೆ ಅದರ ತೀವ್ರತೆ ಮಾತ್ರ ಹೆಚ್ಚು ಕಡಿಮೆಯಾಗಿರುತ್ತದೆ. ಈಗಿನ ಸಂದರ್ಭವನ್ನೇ ತೆಗೆದುಕೊಂಡರೆ, ಈ ಸರ್ವವ್ಯಾಪಿ ವ್ಯಾಧಿಯಾದ ಕರೋನಾದಿಂದ ಎಷ್ಟೋ ಜನರು ಖಿನ್ನತೆಯನ್ನು ಅನುಭವಿಸಿದ್ದಾರೆ.

ಯಾವುದೇ ಒಂದು ಘಟನೆ ಘಟಿಸಿದಾಗ, ಆ ಸಂದರ್ಭಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮ್ಮ ಸಂತೋಷ ಅಥವಾ ದುಃಖ ಅವಲಂಬಿತವಾಗಿರುತ್ತದೆ. ಆಯ್ಕೆ ನಮ್ಮದೇ ಆಗಿರುವಾಗ ಚಿಂತೆ ಏಕೆ? ನಮ್ಮ ಮನಃಸ್ಥಿತಿಯ ನಿರ್ಧಾರ ನಮ್ಮ ಕೈಯಲ್ಲೇ ಇರುವಾಗ, ನಮ್ಮ ಸಂತೋಷ-ದುಃಖಗಳನ್ನೂ ನಾವೇ ಆಯ್ಕೆ ಮಾಡಿಕೊಳ್ಳಬಹುದಲ್ಲವೇ? ಇದು ಎಷ್ಟು ಸುಲಭವೋ ಅಷ್ಟೇ ಕಷ್ಟಕರವಾದದ್ದೂ ಹೌದು. ಆದರೆ ಅಸಾಧ್ಯವಾದುದೇನಲ್ಲ. ಮೊದಲಿಗೆ ಖಿನ್ನತೆ ಆವರಿಸಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

ಖಿನ್ನತೆಯ ಕುರುಹುಗಳು

ನಿರುತ್ಸಾಹ, ಒಂಟಿತನ, ಭಾವನಾತ್ಮಕ ಏರಿಳಿತ, ಹಸಿವು-ನೀರಡಿಕೆಗಳ ವ್ಯತ್ಯಯ, ನಿಶ್ಯಕ್ತಿ, ಆತ್ಮಹತ್ಯೆಯ ಚಿಂತನೆ, ಚಡಪಡಿಕೆ, ಕಳವಳ, ಭಯ, ಭ್ರಮೆ, ಆತಂಕ, ನಿದ್ರಾಹೀನತೆ ಅಥವಾ ಅತಿ ನಿದ್ರೆ ಮುಂತಾದವುಗಳು ಖಿನ್ನತೆಯ ಲಕ್ಷಣಗಳು.

ಮನುಷ್ಯ ಭಾವನಾ ಜೀವಿ. ಅವನಿಗೆ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಅಂತರ ಅಥವಾ ಸ್ಪೇಸ್ ಬೇಕಾಗುತ್ತದೆ. ಖಿನ್ನತೆ ಇರುವವರಿಗೆ ಈ ಅವಕಾಶವನ್ನು ಮಾಡಿಕೊಡಬೇಕು. ಅದಿಲ್ಲದಾದಾಗ ಈ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ಖಿನ್ನತೆ ತೀವ್ರವಾದಾಗ ತಜ್ಞರಿಂದ ಚಿಕಿತ್ಸೆ ಅಗತ್ಯ.

ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದಲ್ಲಿ ಖಿನ್ನತೆಯು ದೈಹಿಕ ಅನಾರೋಗ್ಯಗಳಾದ ಅಸ್ತಮಾ, ಆರ್ಥರೈಟಿಸ್, ಮಧುಮೇಹ, ಬೊಜ್ಜು, ತೂಕ ಕಳೆದುಕೊಳ್ಳುವಿಕೆ, ಹೃದಯ ಸಂಬಂಧಿ ಕಾಯಿಲೆ ಮುಂತಾದವುಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಆತ್ಮಹತ್ಯೆಗೂ ಕಾರಣವಾಗುತ್ತದೆ.

ಹೊರಬರುವ ದಾರಿಗಳು

ಆದಷ್ಟೂ ಮನಸ್ಸಿಗೆ ಆಗಾಗ ದಾಳಿ ಇಡುವ ನಕಾರಾತ್ಮಕ ಚಿಂತನೆಗಳಿಂದ ದೂರವಿರಬೇಕು. ಚಿಂತೆ ನಿಜವಾದದ್ದೋ ಅಥವಾ ನಾವೇ ಸ್ವತಃ ಆಯ್ದುಕೊಂಡದ್ದೋ ಎನ್ನುವುದನ್ನು ತಿಳಿದುಕೊಳ್ಳಬೇಕು. ಬೇರೆಯವರ ನಿರೀಕ್ಷೆಗೆ ತಕ್ಕಂತೆ, ಅಂದರೆ ಜನ ಏನೆಂದುಕೊಳ್ಳುವರೋ ಎಂದು ಚಿಂತಿಸಿದರೆ, ಅದು ನಾವೇ ಆಯ್ದುಕೊಂಡ ಚಿಂತೆ.

lಸಮಸ್ಯೆ ಎದುರಾದಾಗ, ಅದರ ಬಗ್ಗೆಯೇ ಆಳವಾಗಿ ಯೋಚಿಸುವ ಬದಲು ಅದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಯತ್ನಿಸಬೇಕು. ಪರಿಹಾರ ನಿಮ್ಮಿಂದ ಸಾಧ್ಯವಾಗದಾದಾಗ ಗೊತ್ತಿರುವವರ ಬಳಿ ಚರ್ಚಿಸಿ, ಪರಿಹಾರ ಪಡೆಯಲು ಪ್ರಯತ್ನಿಸಬೇಕು.

ಇಂದಿನ ಬಗ್ಗೆ ಮಾತ್ರ ಚಿಂತಿಸಿ, ಕಳೆದುಹೋದುದರ ಬಗ್ಗೆ ಅಥವಾ ಮುಂದೆ ನಡೆಯುವುದರ ಬಗ್ಗೆ ಚಿಂತಿಸುವುದರಿಂದ ಸಮಸ್ಯೆಯ ಉತ್ಪತ್ತಿಯೇ ಹೊರತು ಪರಿಹಾರವಲ್ಲ.

ಕೆಲಸವಿಲ್ಲದ ಖಾಲಿ ಮನ ದೆವ್ವಗಳ ವಾಸಸ್ಥಾನ! ಇಲ್ಲಿ ದೆವ್ವಗಳೆಂದರೆ ಚಿಂತೆಗಳು. ಆದ್ದರಿಂದ ಯಾವಾಗಲೂ ಕ್ರಿಯಾಶೀಲರಾಗಿರಿ.

ಚಿಂತೆ ಮಾಡುವುದೇ ಆದರೆ ಸಕಾರಾತ್ಮಕ ಚಿಂತನೆಯನ್ನು ಮಾಡಿ. ಇದರಿಂದ ಖಿನ್ನತೆ ದೂರವಾಗುತ್ತದೆ. ಆತ್ಮವಿಶ್ವಾಸ ಹಾಗೂ ಶ್ರೇಷ್ಠ ಚಿಂತನೆಯಿಂದ ಕೀಳರಿಮೆಯನ್ನು ಹಿಮ್ಮೆಟ್ಟಿ.

ಧ್ಯಾನ ಮತ್ತು ದೈಹಿಕ ವ್ಯಾಯಾಮ ಮಾಡುವುದರಿಂದಲೂ ಖಿನ್ನತೆಯಿಂದ ಹೊರಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT