ಋತುವಿಗೆ ತಕ್ಕಂತೆ ಮನುಷ್ಯನ ದೇಹದಲ್ಲಿಯೂ ಬದಲಾವಣೆ ಸಹಜ. ಅದಕ್ಕೆ ಪೂರಕವಾಗಿ ಆರೋಗ್ಯಕರವಾದ ಆಹಾರ ವಿಹಾರಗಳನ್ನು ಪಾಲಿಸುವುದೇ ಋತುಚರ್ಯೆ. ಮಾನಸಿಕ ದೈಹಿಕ ಸ್ವಸ್ಥತೆಯನ್ನು ಸದಾ ಕಾಲ ಕಾಪಾಡಿಕೊಳ್ಳುವುದೇ ಆಯುರ್ವೇದದ ಮೊದಲ ಧ್ಯೇಯ; ದಿನಚರ್ಯೆ, ಋತುಚರ್ಯೆಗಳ ಪಾಲನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು.
ರೋಗಕ್ಕೆ ಮೊದಲ ಆಹ್ವಾನವೇ ಋತುಚರ್ಯವನ್ನು ಪಾಲಿಸದಿರುವುದು. ಇದನ್ನು ಈಗಿನ ಯುಗದಲ್ಲಿ ‘ಲೈಫ್ ಸ್ಟೈಲ್ ಡಿಸೀಸಸ್’ ಎಂದು ಕರೆಯಲಾಗುತ್ತಿದೆ. ಉದಾ: ರಕ್ತದ ಒತ್ತಡ, ಥೈರಾಯ್ಡ್ ಸಮಸ್ಯೆ, ಸಕ್ಕರೆಕಾಯಿಲೆ ಮುಂತಾದವು. ಋತುಗಳು ಆರು; ಪ್ರತಿ ಎರಡು ತಿಂಗಳಿಗೊಂದರಂತೆ; ಅವೇ ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ.
ಋತುಚರ್ಯೆಗಳು ಮತ್ತು ಅವುಗಳ ಪಾಲನೆ
ಹೇಮಂತಋತು (ನವೆಂಬರ್ ಮಧ್ಯಭಾಗದಿಂದ - ಜನವರಿಯ ಮಧ್ಯಭಾಗದವರೆಗೆ)
ಶಿಶಿರಋತು (ಜನವರಿ ಮಧ್ಯಭಾಗದಿಂದ- ಮಾರ್ಚ್ ಮಧ್ಯಭಾಗದವರೆಗೆ):
ಋತುವಿನ ಗುಣಧರ್ಮ:
ಈ ಚಳಿಗಾಲದಲ್ಲಿ ತಂಗಾಳಿಯಿಂದಾಗಿ ದೇಹದ ಜೀರ್ಣಶಕ್ತಿಯು ವರ್ಧಿಸುತ್ತದೆ. ತೀಕ್ಷ್ಣ ಸೂರ್ಯಕಿರಣಗಳಿಂದ ಶುಷ್ಕತೆ ಹೆಚ್ಚುತ್ತದೆ.
ಆಹಾರ: ಆಹಾರದಲ್ಲಿ ಜಿಡ್ಡಿನ ಅಂಶ ಉಳ್ಳ ಪದಾರ್ಥಗಳು, ಹಾಲಿನ ಉತ್ಪನ್ನಗಳು, ಬಿಸಿ ನೀರು, ಕಬ್ಬಿನ ಹಾಲು, ಉಪ್ಪು, ಹುಳಿ ಅಂಶಗಳ ಆಹಾರ, ಮಾಂಸಸೇವನೆ.
ವಿಹಾರ: ಅಭ್ಯಂಗ (ಮಸಾಜ್), ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು.
ನಿಷಿದ್ಧ: ತೀಕ್ಷ್ಣ (ಖಾರ) ಕಟು, ತಂಪಾದ ಆಹಾರ ಸೇವನೆ. ಹಗಲಿನಲ್ಲಿ ನಿದ್ರೆ ಮಾಡುವುದು.
ವಸಂತಋತು (ಮಾರ್ಚ್ ಮಧ್ಯ ಭಾಗದಿಂದ ಮೇ ಮಧ್ಯ ಭಾಗದವರೆಗೆ)
ಗುಣ: ಪ್ರಖರವಾದ ಸೂರ್ಯನ ಬಿಸಿಲು. ಇದರಿಂದಾಗಿ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ.
ಆಹಾರ: ಲಘು ಆಹಾರಸೇವನೆ, ಬಾರ್ಲಿ, ಗೋಧಿ.
ವಿಹಾರ: ವ್ಯಾಯಾಮ.
ನಿಷಿದ್ಧ: ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುವ ಸಿಹಿ ಪದಾರ್ಥಗಳು, ಜಿಡ್ಡಿನ ಆಹಾರ. ಹಗಲಿನಲ್ಲಿ ನಿದ್ರೆ ಮಾಡುವುದು.
ಗ್ರೀಷ್ಮಋತು (ಮೇ ಮಧ್ಯಭಾಗದಿಂದ - ಜುಲೈ ಮಧ್ಯ ಭಾಗದವರೆಗೆ)
ಗುಣ: ಸೂರ್ಯನ ತೀಕ್ಷ್ಣಕಿರಣಗಳು ಭೂಮಿಯ ಮೇಲಿನ ನೀರಿನ ಅಂಶವನ್ನು ಆವಿಯಾಗಿಸುವುದರಿಂದ ದೇಹಬಲ ಕಡಿಮೆಯಾಗುತ್ತದೆ.
ಆಹಾರ: ಸಿಹಿ ಆಹಾರ ಪದಾರ್ಥಗಳು, ತಂಪು ಪಾನೀಯಗಳು, ಜಿಡ್ಡು ಪದಾರ್ಥಗಳು, ತುಪ್ಪ, ಹಾಲು ಸೇವನೆ ಹಿತಕರ.
ವಿಹಾರ: ಹಗಲಿನಲ್ಲಿ ತಂಪಾದ ಸ್ಥಳದಲ್ಲಿ ನಿದ್ರೆ ಹಿತವನ್ನು ಉಂಟುಮಾಡುತ್ತದೆ. ಚಂದನದಂತಹ ತಂಪಾದ ದ್ರವ್ಯಗಳ ಲೇಪನ.
ನಿಷಿದ್ಧ: ವ್ಯಾಯಾಮ, ಹೆಚ್ಚು ಬಿಸಿಯಾದ, ಮಸಾಲೆ ಪದಾರ್ಥಗಳುಳ್ಳ ಆಹಾರ.
ವರ್ಷಋತು (ಜುಲೈ ಮಧ್ಯಭಾಗದಿಂದ - ಸೆಪ್ಟೆಂಬರ್ ಮಧ್ಯಭಾಗದವರೆಗೆ)
ಗುಣ: ಮಳೆಗಾಲ; ದೇಹದಲ್ಲಿ ಜೀರ್ಣಶಕ್ತಿ, ದೇಹ ಬಲ, ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆಯಾಗಿರುತ್ತದೆ.
ಆಹಾರ: ಬಾರ್ಲಿ, ಗೋಧಿ, ಜೀರ್ಣಕ್ಕೆ ಸುಲಭವಾಗುವ ಆಹಾರ. ಕುಡಿಯುವ ನೀರಿನೊಂದಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸುವುದು ಹಿತಕರ.
ವಿಹಾರ: ಔಷಧೀಯ ಚೂರ್ಣಗಳ ಲೇಪ.
ನಿಷಿದ್ಧ: ತಂಪು ಪಾನೀಯಗಳು, ಹಗಲುನಿದ್ರೆ.
ಶರತ್ ಋತು (ಸೆಪ್ಟೆಂಬರ್ ಮಧ್ಯಭಾಗದಿಂದ - ನವೆಂಬರ್ ಮಧ್ಯಭಾಗದ ವರೆಗೆ)
ಗುಣ: ಮಳೆ ಕಡಿಮೆಯಾಗಿ, ಉಷ್ಣತೆಯು ಹೆಚ್ಚುವ ಕಾಲ.
ಆಹಾರ: ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ, ತುಪ್ಪದ ಸೇವನೆ ಅತ್ಯಂತ ಹಿತಕರ.
ವಿಹಾರ: ಅಭ್ಯಂಗನಿಷಿದ್ಧ, ಮಸಾಲೆ ಆಹಾರ ಪದಾರ್ಥಗಳು.
ಹಿತಮಿತವಾದ ಆಹಾರ–ವಿಹಾರ, ದಿನಚರ್ಯ ಋತುಚರ್ಯೆಗಳ ಪಾಲನೆ, ಸದ್ವಿಚಾರಗಳ ಚಿಂತನೆಗಳಿಂದ ಈಗಿನ ಧಾವಂತದ ಜೀವನಕ್ರಮದಲ್ಲೂ ಮನುಷ್ಯ ಸ್ವಸ್ಥನಾಗಿರಲು ಸಾಧ್ಯ.
ಆಹಾರಕ್ರಮ
ಶಿಶಿರ
ಪಥ್ಯ ಆಹಾರ: ಅಕ್ಕಿ, ಗೋಧಿ, ಎಳ್ಳು, ಹಾಲು, ಹಾಲಿನ ಉತ್ಪನ್ನ, ಕಬ್ಬು, ಬೆಲ್ಲ, ಜಿಡ್ಡಿನ ಪದಾರ್ಥಗಳು, ಹಿಟ್ಟಿನಿಂದ ತಯಾರಿಸಿದ ತಿನಿಸುಗಳು. ಶುಂಠಿ, ಬೆಳ್ಳುಳ್ಳಿ, ಅಳಲೆಕಾಯಿ, ಹಿಪ್ಪಲಿ.
ಅಪಥ್ಯ ಆಹಾರ: ತಂಪು ಪಾನೀಯಗಳು, ಕಡಲೆಕಾಳು, ಉದ್ದಿನ ಬೇಳೆ, ಅವಲಕ್ಕಿ.
ವಸಂತ
ಪಥ್ಯ ಆಹಾರ: ಅಕ್ಕಿ, ಗೋಧಿ, ಜೋಳ, ಮೆಕ್ಕೆಜೋಳ, ಹೆಸರುಬೇಳೆ, ತೊಗರಿಬೇಳೆ, ಮಸೂರ, ಬಾರ್ಲಿ, ಜೇನುತುಪ್ಪ ಬೇರೆಸಿದ ನೀರು,
ಶುಂಠಿ, ಅರಿಶಿಣ, ತುಳಸಿ, ಬೇವು, ಖದಿರ, ಮುಸ್ತಾ, ಕೊತ್ತಂಬರಿ, ಜೀರಿಗೆ, ಮೆಂತ್ಯ.
ಅಪಥ್ಯ ಆಹಾರ: ತಂಪು ಪಾನೀಯಗಳು, ಸಿಹಿ ತಿನಿಸುಗಳು, ಹುಳಿ ಮೊಸರಿನಿಂದ ತಯಾರಿಸಿದ ಆಹಾರ, ಎಣ್ಣೆ ಜಿಡ್ಡಿನ ಪದಾರ್ಥಗಳು, ಮಾಂಸಾಹಾರ, ಉದ್ದಿನ ಬೇಳೆ.
ಗ್ರೀಷ್ಮ
ಪಥ್ಯ: ಅಕ್ಕಿ, ಹೆಸರು ಬೇಳೆ, ಸೌತೆಕಾಯಿ, ಮಾವಿನ ಹಣ್ಣು, ಕಲ್ಲಂಗಡಿ ಹಣ್ಣು, ಹಣ್ಣಿನ ರಸ, ಎಳನೀರು, ಮಜ್ಜಿಗೆ, ಕಾಳುಮೆಣಸಿನ ಪುಡಿ ಸೇರಿಸಿದ ಮೊಸರು, ಮಾಂಸರಸ, ಮೆಂತ್ಯೆ.
ಅಪಥ್ಯ: ಮೆಣಸಿನಕಾಯಿ, ಮಸಾಲೆ ಪದಾರ್ಥಗಳು, ಅತ್ಯಂತ ಬಿಸಿಯಾದ ಆಹಾರಸೇವನೆ,
ಅತಿಯಾದ ಮಾಂಸಸೇವನೆ.
ವರ್ಷ
ಪಥ್ಯ: ಬಿಸಿಯಾದ ತಾಜಾ ಆಹಾರ, ಶುಂಠಿ, ನಿಂಬೆ, ಹಿಪ್ಪಲಿ, ಸೈಂಧವ ಲವಣ, ಕಾಳು ಮೆಣಸು, ಮಾಂಸ ರಸ, ವಿವಿಧ ತರಕಾರಿಗಳ ಸೂಪ್.
ಅಪಥ್ಯ: ಉಪ್ಪಿನಂಶ ಅಧಿಕವುಳ್ಳ ಆಹಾರ, ಹುದುಗಿಸಿದ ಆಹಾರ.
ಶರತ್
ಪಥ್ಯ: ಗೋಧಿ, ಹೆಸರು ಬೇಳೆ, ಸಿಹಿ ತಿನಿಸುಗಳು, ತುಪ್ಪ, ಪಡವಲಕಾಯಿ, ಸೊಪ್ಪುಗಳು, ಕಂದಮೂಲಗಳು.
ಅಪಥ್ಯ: ಹುದುಗಿಸಿದ ಆಹಾರ. ಮೆಣಸಿನ ಕಾಯಿ.
ಹೇಮಂತ
ಪಥ್ಯ: ಹೆಸರು ಬೇಳೆ, ಧಾನ್ಯಗಳು, ಜೋಳ, ಹಾಲಿನ ಉತ್ಪನ್ನಗಳು, ಪಾಲಕ್, ಖರ್ಜೂರ.
ಶುಂಠಿ, ಹಿಪ್ಪಲಿ, ಮೆಣಸು.
ಅಪಥ್ಯ: ಉದ್ದಿನ ಬೇಳೆ, ಕಡಲೆ ಕಾಳು.
ಋತು ಸಂಧಿ ಎನ್ನುವುದು ಎರಡು ಋತುಗಳು ಸಂಧಿಸುವ ಕಾಲ. ಹಿಂದಿನ ಋತುವಿನ ಕೊನೆಯ ಏಳು ದಿನಗಳು ಮತ್ತು ಮುಂಬರುವ ಋತುವಿನ ಆರಂಭದ ಏಳು ದಿವಸಗಳು. ಈ ಸಮಯದಲ್ಲಿ ಕಳೆದ ಋತುವಿನ ಆಹಾರಪದ್ಧತಿಯನ್ನು ನಿಧಾನವಾಗಿ ಬದಲಾಯಿಸುತ್ತಾ ಮುಂದಿನ ಋತುವಿನ ಆಹಾರಪದ್ಧತಿಗೆ ಒಗ್ಗಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.