ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಏಕೆ ಬೇಕು? ಹೇಗೆ ಕುಡಿಯಬೇಕು?

Last Updated 1 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ನಾವು ಕುಡಿಯುವ ನೀರಿಗೆ ಮಾಂತ್ರಿಕ ಶಕ್ತಿ ಇದೆ. ದಿನವೂ ಸರಿಯಾದ ಪ್ರಮಾಣದಲ್ಲಿ, ಸೂಕ್ತರೀತಿಯಲ್ಲಿ ಕುಡಿದಾಗ ದೇಹ ಹಾಗೂ ಮನಸ್ಸನ್ನು ಪ್ರಪುಲ್ಲವಾಗಿರಿಸಿ ವ್ಯಕ್ತಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿ ಅದಕ್ಕಿದೆ.

ವ್ಯಕ್ತಿ ದಿನವೊಂದರಲ್ಲಿ ಕನಿಷ್ಠ 2.5ರಿಂದ 3.5 ಲೀಟರ್‌ಗಳಷ್ಟು ನೀರು ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿಯೆ ಕುಡಿಯುವ ಎರಡರಿಂದ ಮೂರು ಲೋಟ ನೀರು ನಮ್ಮನ್ನು ದಿನವಿಡೀ ಚೈತನ್ಯಶಾಲಿಗಳನ್ನಾಗಿರಿಸಬಲ್ಲದು. ಆಹಾರ ಸೇವಿಸುವ ಅರ್ಧ ಗಂಟೆಯ ಮೊದಲು ಹಾಗೂ ಆಹಾರ ಸೇವಿಸಿದ ಅರ್ಧ ತಾಸಿನ ಬಳಿಕ ನೀರನ್ನು ಕುಡಿಯುವುದು ಜೀರ್ಣಕ್ರಿಯೆಗೆ ಕೂಡ ಸಹಕಾರಿ. ಬೇಸಿಗೆಯಲ್ಲೇನೋ ಬಾಯಾರಿಕೆಯಾದಾಗಲೆಲ್ಲ ನೀರನ್ನು ಕುಡಿಯುತ್ತೇವೆ. ಮಳೆ ಹಾಗೂ ಚಳಿಗಾಲದಲ್ಲಿ ಕೂಡ ಅಷ್ಟೇ ಪ್ರಮಾಣದ ನೀರು ಕುಡಿಯಬೇಕೆಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

ನಮ್ಮ ಶರೀರಕ್ಕೆ ಅಗತ್ಯವಾದ ನೀರಿನಾಂಶವು ಹಣ್ಣು, ತರಕಾರಿ, ಕಾಫಿ, ಚಹ, ಇತರ ಪಾನೀಯಗಳ ರೂಪದಲ್ಲಿಯೂ ತಲುಪುತ್ತದೆ. ಹಾಗಾಗಿ ಆಯಾ ಕಾಲದಲ್ಲಿ ದೊರಕುವ ತಾಜಾ ಕಲ್ಲಂಗಡಿ, ಕರಬೂಜ, ಕಿತ್ತಳೆ ಮೊದಲಾದ ಹಣ್ಣುಗಳ ಸೇವನೆ ಕೂಡ ಮುಖ್ಯ. ಆದರೆ ಪಾನೀಯಗಳನ್ನು ಕುಡಿಯುವಾಗ ಚಹ-ಕಾಫಿ ಅತಿಯಾಗದಂತೆ ಗಮನ ವಹಿಸಬೇಕು. ಅಂತೆಯೇ ಇಂಗಾಲಯುಕ್ತ ಪಾನೀಯಗಳು ನೀರಿನಾಂಶದ ಜೊತೆಯಲ್ಲಿ ಹೆಚ್ಚಾದ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಅವುಗಳ ಸೇವನೆ ಅಪಾಯ.

ನೀರು ನಮ್ಮ ಆರೋಗ್ಯವನ್ನು ಕಾಪಾಡಲು ಹೇಗೆ ನೆರವಾಗಬಲ್ಲದು?

ಶರೀರದ ಕಲ್ಮಶಗಳನ್ನು ಹೊರ ಹಾಕಲು ನೀರು ಅತ್ಯಗತ್ಯ. ಮಲ, ಮೂತ್ರ, ಉಸಿರು ಹಾಗೂ ಬೆವರಿನ ಮೂಲಕ ದೇಹದಿಂದ ವಿಷಕಾರಿಕ ವಸ್ತುಗಳ ವಿಸರ್ಜನೆಗೆ ನೀರು ಬೇಕೇ ಬೇಕು.

ಮಲಬದ್ಧತೆಗೆ ನೀರೇ ಅತ್ಯುತ್ತಮ ಔಷಧ.

ಎಲ್ಲ ಅಂಗಾಂಗ ವ್ಯವಸ್ಥೆಗಳ, ಅದರಲ್ಲಿಯೂ ಮೂತ್ರಪಿಂಡಗಳ ಸಮರ್ಪಕ ಕಾರ್ಯನಿರ್ವಹಣೆಗೆ ನೀರು ಅತ್ಯವಶ್ಯ.

ಮೂತ್ರಪಿಂಡ, ಮೂತ್ರ ಕೋಶ ಹಾಗೂ ಮೂತ್ರ ಚೀಲಗಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಗಾತ್ರದ ಕಲ್ಲುಗಳನ್ನು ಹೊರಹಾಕಲು ನೀರಿನ ಚಿಕಿತ್ಸೆಯೇ ಸಾಕಾಗುತ್ತದೆ.

ರಕ್ತದೊತ್ತಡ ಕಡಿಮೆ ಇರುವಂತಹ ಸಮಸ್ಯೆ ಇರುವವರು ಯಥೇಚ್ಛವಾಗಿ ನೀರನ್ನು ಕುಡಿಯಬೇಕು.

ಮೈಮನಸ್ಸಿಗೆ ಚೈತನ್ಯವನ್ನು ತುಂಬಿ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೀರು ಅಗತ್ಯ.

ದೇಹದ ತೂಕ ಇಳಿಸಲೂ ಸಹಕಾರಿ.

ದಿನವೂ ಸೂಕ್ತ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಕೆಲವೊಂದು ರೀತಿಯ ತಲೆನೋವು ಕೂಡ ಮಾಯವಾಗಬಲ್ಲದು.

ದೇಹಕ್ಕಾದ ಆಯಾಸದಿಂದ ಚೇತರಿಸಿಕೊಳ್ಳಲು, ಮೈಮನಸ್ಸಿಗೆ ತಾಜಾತನವನ್ನು ತುಂಬಿಕೊಳ್ಳಲು ನೀರು ಸಹಕಾರಿ.

ಸಮರ್ಪಕವಾಗಿ ನೀರನ್ನು ಕುಡಿದಾಗ ಆಗುವ ರಭಸದ ಮೂತ್ರ ವಿಸರ್ಜನಾ ಪ್ರಕ್ರಿಯೆ ಮೂತ್ರಕೋಶದ ತುದಿಯಲ್ಲಿನ ಸೂಕ್ಷ್ಮಾಣುಗಳನ್ನು ಸಹ ಹೊರಹಾಕಬಲ್ಲದು. ಇದರಿಂದ ಮೂತ್ರನಾಳಗಳ ಸೋಂಕನ್ನು ತಡೆಯಬಹುದು.

ಶರೀರದ ಉಷ್ಣಾಂಶದ ಮಟ್ಟವನ್ನು ನಿಯಂತ್ರಿಸುವಲ್ಲಿಯೂ ನೀರು ಸಹಕಾರಿ.

ನೀರನ್ನು ಯಾರು ಹೆಚ್ಚು ಕುಡಿಯಬೇಕು?

ವ್ಯಾಯಾಮ ಮಾಡುವವರು. ವ್ಯಾಯಾಮದ ಮೊದಲು, ವ್ಯಾಯಾಮ ಮಾಡುವಾಗ ಹಾಗೂ ನಂತರ ಆರ್ದ್ರತೆ (ಹ್ಯುಮಿಡಿಟಿ) ಹಾಗೂ ಉಷ್ಣಾಂಶ ಹೆಚ್ಚಿರುವ ಮತ್ತು ಎತ್ತರದ ಪ್ರದೇಶಗಳಲ್ಲಿ ವಾಸಿಸುವವರು

ಅತಿಸಾರ, ವಾಂತಿ, ಮೂತ್ರಪಿಂಡದ ಕಲ್ಲು, ಮೂತ್ರನಾಳದ ಸೋಂಕು ಮೊದಲಾದ ಸಮಸ್ಯೆಗಳಿಂದ ಬಳಲುವವರು

ಗರ್ಭಿಣಿಯರು ಹಾಗೂ ಮಗುವಿಗೆ ಹಾಲುಣಿಸುವ ತಾಯಂದಿರು

ಅಗತ್ಯತೆಗೆ ತಕ್ಕಂತೆ ನೀರನ್ನು ಕುಡಿಯದಿದ್ದಾಗ ವ್ಯಕ್ತಿ ನಿರ್ಜಲೀಕರಣದಿಂದ ಬಳಲಬಹುದು. ಅತಿಯಾದ ಬಾಯಾರಿಕೆ, ಆಯಾಸ, ಚರ್ಮ ಬಿಳಿಚಿಕೊಳ್ಳುವುದು, ಮೂತ್ರ ಗಾಢವಾದ ಬಣ್ಣಕ್ಕೆ ತಿರುಗುವುದು, ತಲೆ ಸುತ್ತುವಿಕೆ, ತಲೆನೋವು, ಕಣ್ಣು ಕತ್ತಲೆ ಬಂದಂತಾಗುವುದು, ರಕ್ತದೊತ್ತಡ ಕಡಿಮೆಯಾಗುವುದು – ಇವೇ ಮೊದಲಾದುವು ನಿರ್ಜಲೀಕರಣದ ಗುಣಲಕ್ಷಣಗಳು. ಇಂತಹ ಸಂದರ್ಭದಲ್ಲಿ ಒಂದು ಲೋಟ ಸ್ವಚ್ಛವಾದ ನೀರಿಗೆ ಒಂದು ಚಿಟಿಕೆ ಉಪ್ಪು ಮತ್ತು ಒಂದು ಚಮಚ ಸಕ್ಕರೆಯನ್ನು ಬೆರೆಸಿ ಕುಡಿಯುವುದು ಉತ್ತಮ. ಬೇಕಿದ್ದಲ್ಲಿ ಸ್ವಲ್ಪ ನಿಂಬೆ ರಸವನ್ನೂ ಬೆರೆಸಿದರೆ ಆಯಾಸ ಬೇಗನೇ ಮಾಯವಾಗಬಲ್ಲದು. ನಿರಂತರವಾಗಿ ಕಾಡುವ ಅತಿಯಾದ ಬಾಯಾರಿಕೆ ಒಮ್ಮೊಮ್ಮೆ ಮಧುಮೇಹದ ಲಕ್ಷಣವಿದ್ದರೂ ಇರಬಹುದು. ಅದರ ಜೊತೆಯಲ್ಲಿ ಅತಿಯಾದ ಹಸಿವು ಮತ್ತು ಹೆಚ್ಚು ಬಾರಿ ಮೂತ್ರ ವಿಸರ್ಜನೆಯಾಗುತ್ತಿದ್ದರೆ ವೈದ್ಯರಲ್ಲಿ ಸಲಹೆ ಪಡೆಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT