ಇಲಾಖೆ ನಡೆಸಿದ ಸಭೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಸಮಗ್ರ ನವೀಕರಣದ ಬಗ್ಗೆ ಚರ್ಚಿಸಿರಲಿಲ್ಲ. ಈ ನವೀಕರಣವೂ ಅಗತ್ಯವಿಲ್ಲ. ನವೀಕರಣದ ಹೆಸರಿನಲ್ಲಿ ಬಾಡಿಗೆ ಹೆಚ್ಚಿಸಿದರೆ ಕಲಾಕ್ಷೇತ್ರ ಕನ್ನಡಿಗರಿಗೆ ಸಿಗದಂತೆ ಆಗುತ್ತದೆ. ಹಾಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಉತ್ತಮವಾಗಿದೆ. ವೇದಿಕೆಯ ಮರದ ಹಾಸುಗಳನ್ನು ಪಾಲಿಶ್ ಮಾಡಿಸಿದರೆ ಸಾಕಾಗುತ್ತದೆ. ವೇದಿಕೆಯ ಮೇಲಿರುವ ಕಬ್ಬಿಣದ ಲೈಟ್ ಬಾರ್ಗಳನ್ನು ಕೆಳಗೆ ಇಳಿಸುವ ಹಾಗೂ ಮೇಲಕ್ಕೆ ಎತ್ತುವ ವ್ಯವಸ್ಥೆ ಈಗಾಗಲೇ ಇದ್ದು ಅದನ್ನು ಕಲಾವಿದರಿಗೆ ಬಳಸಲು ಅನುಕೂಲ ಮಾಡಿಕೊಡಬೇಕು. ನಿರ್ವಹಣೆಗೆ ಸಂಬಂಧಿಸಿದಂತೆ ಧ್ವನಿ ಹಾಗೂ ಬೆಳಕಿನಲ್ಲಿ ಅನುಭವ ಹಾಗೂ ರಂಗಶಿಕ್ಷಣ ಪಡೆದಿರುವ ವ್ಯಕ್ತಿಗಳನ್ನು ಕಾಯಂ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು.-ಶಶಿಧರ್ ಭಾರಿಘಾಟ್, ರಂಗಕರ್ಮಿ
‘ಸಮಗ್ರ ನವೀಕರಣ ಅಗತ್ಯವಿಲ್ಲ’ ನಗರದಲ್ಲಿ ರವೀಂದ್ರ ಕಲಾಕ್ಷೇತ್ರ ಮಾತ್ರ ಲಾವಿದರಿಗೆ ಕೈಗೆಟುಕುವಂತಹ ರಂಗಮಂದಿರವಾಗಿದೆ. ಇಲಾಖೆ ನಡೆಸಿದ ಸಭೆಯಲ್ಲಿ ಬಾಡಿಗೆ ದರವನ್ನು ವಾರ್ಷಿಕ ಶೇ 5 ರಷ್ಟು ಏರಿಕೆ ಮಾಡದಂತೆ ತಿಳಿಸಲಾಗಿತ್ತು. ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳ ಧ್ವನಿವರ್ಧಕದಿಂದ ಕಲಾಕ್ಷೇತ್ರದ ಒಳಗೆ ನಡೆಯುವ ಕಾರ್ಯಕ್ರಮಕ್ಕೆ ಆಗುವ ತೊಂದರೆಗಳ ಬಗ್ಗೆ ತಿಳಿಸಿ ಈ ರಂಗಮಂದಿರಗಳ ನಡುವೆ ಇರುವ ರೋಲಿಂಗ್ ಶಟರ್ ಬದಲು ಒಂದು ಪೂರ್ಣ ಪ್ರಮಾಣದ ಶಾಶ್ವತ ಗೋಡೆಯನ್ನು ಕಟ್ಟುವ ಬಗ್ಗೆ ಮನವಿ ಮಾಡಲಾಗಿತ್ತು. ರವೀಂದ್ರ ಕಲಾಕ್ಷೇತ್ರದ ಕುರ್ಚಿಗಳು ಉತ್ತಮವಾಗಿವೆ. ಸಮಗ್ರ ನವೀಕರಣ ಅಗತ್ಯವಿಲ್ಲ.-ಜೆ. ಲೋಕೇಶ್ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.