ನವದೆಹಲಿ: ಮೂರೂ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 7 ತಿಂಗಳು ಮುಗಿಸಿ 8ನೇ ತಿಂಗಳಿಗೆ ಕಾಲಿಟ್ಟಿದೆ. ರೈತ ಮುಖಂಡರು ಈಗಲೂ ತಮ್ಮ ಬೇಡಿಕೆಗೆ ಅಂಟಿಕೊಂಡಿದ್ದು, ಕಾಯ್ದೆಗಳನ್ನು ಹಿಂಪಡೆಯದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರವೇ ರೈತರು ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಯುಧ್ವೀರ್ ಸಿಂಗ್ ಹೇಳಿದ್ದಾರೆ.
‘ಸರ್ಕಾರವು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಮಾತನಾಡುವುದಿಲ್ಲ. ಸರ್ಕಾರವು ಯಾವಾಗಲೂ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಮಾತನಾಡುತ್ತದೆ. ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ನಾವು ಬಯಸುತ್ತೇವೆ. ಎಂಎಸ್ಪಿ ಕುರಿತು ಕಾನೂನನ್ನು ಪರಿಚಯಿಸಬೇಕು’ ಎಂದು ಸಿಂಗ್ ಹೇಳಿದರು.
ಕಾಯ್ದೆಗಳನ್ನು ಹಿಂಪಡೆಯದ ಹೊರತು ನಾವು ಯಾವುದೇ ಪೂರ್ವ ಭರವಸೆ ಮೇಲೆ ಮಾತುಕತೆಗೆ ಬರುವುದಿಲ್ಲ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಶಿವಕುಮಾರ್ ಕಕ್ಕಾ ಹೇಳಿದರು.
‘ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದರೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಯೊಂದಿಗೆ ಹೊಸ ಕಾನೂನು ಮಾಡಿದರೆ, ನಾವು ಅವರಿಗೆ ಧನ್ಯವಾದ ಅರ್ಪಿಸಿ ಪ್ರತಿಭಟನೆ ಹಿಂಪಡೆಯುತ್ತೇವೆ’ಎಂದು ಕಕ್ಕಾ ಹೇಳಿದರು.
ಸರ್ಕಾರ ಮತ್ತು ರೈತ ಸಂಘಗಳು ಈವರೆಗೆ 11 ಸುತ್ತಿನ ಮಾತುಕತೆ ನಡೆಸಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಜನವರಿ 22 ರಂದು ಕೊನೆಯ ಬಾರಿ ಮಾತುಕತೆ ನಡೆದಿತ್ತು.