ಬೆತುಲ್ (ಮಧ್ಯಪ್ರದೇಶ): ಬೆತುಲ್ ಜಿಲ್ಲೆಯ ಅಮ್ದೋಹ್ ಗ್ರಾಮದಲ್ಲಿ ಶಾಲೆಯ ಬಸ್ ತಪ್ಪಿಹೋಗಿದ್ದಕ್ಕೆ ವಿಚಲಿತನಾದ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 14 ವರ್ಷದ ಬಾಲಕ ಸೋಮವಾರ ಬೆಳಿಗ್ಗೆ ಶಾಲೆಗೆ ಸಿದ್ಧವಾಗಿ ಮನೆಯಿಂದ ಹೊರಟಿದ್ದ. ಆದರೆ ಶಾಲೆಯ ಬಸ್ ತಪ್ಪಿ ಹೋಗಿತ್ತುಎಂದು ಪೊಲೀಸರು ತಿಳಿಸಿದ್ದಾರೆ.
‘ಶಾಲೆಗೆ ಆತ ತಪ್ಪದೆ ಹೋಗುತ್ತಿದ್ದ. ಬಸ್ ಹೊರಟುಹೋಗಿದ್ದ ಕಾರಣ ಬೇಸರಗೊಂಡಿದ್ದ. ಮನೆಗೆ ಅಳುತ್ತಾ ವಾಪಸ್ಸಾಗಿದ್ದ. ನಂತರ ಮನೆಯ ಹಿಂದಿದ್ದ ಮಾವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ’ಎಂದು ಕುಟುಂಬದ ಸದಸ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
‘ಆತ ಓದಿನಲ್ಲಿ ಚುರುಕಾಗಿದ್ದ. ಮನೆಗೆ ಹಿಂತಿರುಗಿದ್ದ ಅವನು ಸಮವಸ್ತ್ರವನ್ನೂ ತೆಗೆದಿರಲಿಲ್ಲ’ಎಂದು ಬಾಲಕನ ಚಿಕ್ಕಪ್ಪ ತಿಳಿಸಿದ್ದಾರೆ.