ನವದೆಹಲಿ: ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂದು ಕೋರಿ ಸುಮಾರು ನೂರು ಮುಖಂಡರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ನಿಂದ ಅಮಾನತಾಗಿರುವ ಮುಖಂಡ ಸಂಜಯ್ ಝಾ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಅಂತಹ ಯಾವುದೇ ಪತ್ರ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ನ ಸದ್ಯದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ನೂರು ಮುಖಂಡರು ಸೋನಿಯಾಗೆ ಪತ್ರ ಬರೆದಿದ್ದಾರೆ ಎಂದು ಝಾ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರರಾಗಿದ್ದ ಅವರನ್ನು ಆ ಹುದ್ದೆಯಿಂದ ಇತ್ತೀಚೆಗೆ ವಜಾ ಮಾಡಲಾಗಿತ್ತು. ಬಳಿಕ ಅವರನ್ನು ಪಕ್ಷದಿಂದಲೂ ಅಮಾನತು ಮಾಡಲಾಗಿದೆ.
ಫೇಸ್ಬುಕ್ ಪ್ರಕರಣದಿಂದ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಬಿಜೆಪಿಯ ಕುಮ್ಮಕ್ಕಿನಿಂದ ಝಾ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಸೋನಿಯಾಗೆ ಪತ್ರ ಬರೆದವರಲ್ಲಿ ಸಂಸದರೂ ಇದ್ದಾರೆ. ನಾಯಕತ್ವ ಬದಲಾಗಬೇಕು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಪಾರದರ್ಶಕ ಚುನಾವಣೆ ನಡೆಯಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ಝಾ ಟ್ವೀಟ್ನಲ್ಲಿ ಹೇಳಿದ್ದಾರೆ.