ನವದೆಹಲಿ: ಬಿಎಸ್ಪಿಯ ಮಾಜಿ ಶಾಸಕ ಮೊಹಮ್ಮದ್ ಇಕ್ಬಾಲ್ ವಿರುದ್ಧದ ಹಣ ಅಕ್ರಮ ವರ್ಗಾವಣೆ (ಪಿಎಂಎಲ್ಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ₹ 1,097 ಕೋಟಿ ಮೌಲ್ಯದ 7 ಸಕ್ಕರೆ ಕಾರ್ಖಾನೆಗಳನ್ನುಉತ್ತರಪ್ರದೇಶದಲ್ಲಿ ಜಪ್ತಿ ಮಾಡಿದ್ದಾರೆ.
ತನಿಖಾ ಸಂಸ್ಥೆಯ ಲಖನೌ ವಲಯ ಕಚೇರಿಯು ಜಪ್ತಿ ಆದೇಶವನ್ನು ಪಿಎಂಎಲ್ಎ ಅನ್ವಯ ಹೊರಡಿಸಿತ್ತು. ಇಕ್ಬಾಲ್ ಮಾಲೀಕತ್ವದ ಈ ಕಾರ್ಖಾನೆಗಳು ಖುಷಿನಗರ, ಬರೇಲಿ, ಡಿಯೋರಿಯ, ಹರ್ದೋಯಿ, ಬಾರಾಬಂಕಿ ಜಿಲ್ಲೆಗಳಲ್ಲಿವೆ ಎಂದು ತಿಳಿಸಿದ್ದಾರೆ.
ಈ ಕಾರ್ಖಾನೆಗಳನ್ನು 2010–11ರಲ್ಲಿ ಬಂಡವಾಳ ಹಿಂತೆಗೆತ/ಮಾರಾಟ ಪ್ರಕ್ರಿಯೆಯಡಿ ಇಕ್ಬಾಲ್ ಮತ್ತು ಅವರ ಕುಟುಂಬ ಸದಸ್ಯರಿಗೆ ₹ 60.28 ಕೋಟಿಗೆ ಮಾರಾಟ ಮಾಡಲಾಗಿತ್ತು. ಆಗ ಮಾಯಾವತಿ ನೇತೃತ್ವದ ಬಿಎಸ್ಪಿ ಸರ್ಕಾರ ಅಧಿಕಾರದಲ್ಲಿ ಇತ್ತು ಎಂದು ತನಿಖಾ ಸಂಸ್ಥೆಯು ತಿಳಿಸಿದೆ.
ಇಕ್ಬಾಲ್ ಮತ್ತು ಕುಟುಂಬ ಸದಸ್ಯರ ಹಿಡಿತವಿದ್ದ ನಕಲಿ ಕಂಪನಿಗಳಾದ ನಮ್ರತಾ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಗಿರಿಯಾಶೊ ಕಂಪನಿ ಲಿಮಿಟೆಡ್ ಹೆಸರಿನಲ್ಲಿ ಇವುಗಳನ್ನು ಖರೀದಿಸಲಾಗಿತ್ತು. ಕಾರ್ಖಾನೆಗಳ ಖರೀದಿಗೆ ಮತ್ತೆ ಏಳು ನಕಲಿ ಕಂಪನಿ ಸ್ಥಾಪಿಸಿದ್ದು, ಬಳಿಕ 2011ರಲ್ಲಿ ಎಲ್ಲವನ್ನು ಒಂದೇ ದಿನ ವಿಲೀನಗೊಳಿಸಲಾಗಿತ್ತು ಎಂದು ತಿಳಿಸಿದೆ.