ಪಣಜಿ: ‘ನನ್ನ 71ನೇ ಜನ್ಮದಿನದಂದು ದೇಶದಾದ್ಯಂತ 2.50 ಕೋಟಿ ಡೋಸ್ಗಳಷ್ಟು ಕೋವಿಡ್ ಲಸಿಕೆಗಳನ್ನು ನೀಡಿರುವುದು ನನಗೆ ಮರೆಯಲಾಗದ ಮತ್ತು ಭಾವನಾತ್ಮಕ ಕ್ಷಣ’ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.
ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ನಿಮ್ಮೆಲ್ಲರ ಪ್ರಯತ್ನದಿಂದಾಗಿ ಒಂದೇ ದಿನದಲ್ಲಿ 2.5 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡುವ ಮೂಲಕ ಭಾರತದ ವಿಶ್ವದಾಖಲೆ ಸೃಷ್ಟಿಸಿದೆ. ಅತ್ಯಂತ ಶಕ್ತಿ ಶಾಲಿ ಎನಿಸಿಕೊಳ್ಳುವ ರಾಷ್ಟ್ರಗಳು ಈವರೆಗೂ ಇಂಥದ್ದೊಂದು ಸಾಧನೆ ಮಾಡಲು ಸಾಧ್ಯವಾಗಿಲ್ಲ’ ಎಂದು ಪ್ರಶಂಸಿಸಿದರು.
‘ನಿನ್ನೆ ಇಡೀ ರಾಷ್ಟ್ರದ ಕಣ್ಣು ಕೋವಿನ್ ಪೋರ್ಟ್ಲ್ನ ಡ್ಯಾಷ್ಬೋರ್ಡ್ನಲ್ಲಿ ಬದಲಾಗುತ್ತಿದ್ದ ದತ್ತಾಂಶಗಳ ಮೇಲೆ ನೆಟ್ಟಿತ್ತು. ಆ ಪ್ರಕಾರ ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆಗಳನ್ನು ಪಡೆದಿದ್ದಾರೆ. ಪ್ರತಿ ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಪ್ರತಿ ಸೆಕೆಂಡಿಗೆ 425ಕ್ಕೂ ಹೆಚ್ಚು ಮಂದಿ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ‘ ಎನ್ನುತ್ತಾ ಮೋದಿಯವರು ಅಂಕಿ ಅಂಶಗಳ ಸಹಿತ ಲಸಿಕೆ ಅಭಿಯಾನದ ವೇಗವನ್ನು ಉಲ್ಲೇಖಿಸಿದರು.
Addressing healthcare workers and vaccine beneficiaries of Goa. https://t.co/Q04GNSbqBw
— Narendra Modi (@narendramodi) September 18, 2021
‘ಇಂಥದ್ದೊಂದು ಉತ್ತಮ ಪ್ರಯತ್ನಕ್ಕಾಗಿ ದೇಶದ ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿದಲ್ಲಿರುವ ಸಿಬ್ಬಂದಿಯನ್ನು ನಾನು ಪ್ರಶಂಸಿಸುತ್ತೇನೆ‘ ಎಂದು ಮೋದಿ ಹೇಳಿದರು. ಇಂಥದ್ದೊಂದು ಕಾರ್ಯವನ್ನು ಯಶಸ್ವಿ ಗೊಳಿಸಲು ಬೇಕಾದ ಬಹುದೊಡ್ಡ ಪ್ರಯತ್ನ ಹಾಗೂ ನುರಿತ ಮಾನವ ಸಂಪನ್ಮೂಲ ಭಾರತದಲ್ಲಿದೆ ಎಂಬುದು ಸಾಬೀತಾಯಿತು‘ ಎಂದು ಅವರು ಹೇಳಿದರು.
‘ಜನ್ಮದಿನಗಳು ಬರುತ್ತವೆ, ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರವಿರುತ್ತೇನೆ. ಆದರೆ ನಿನ್ನೆಯ ದಿನ ಮಾತ್ರ ನನಗೆ ತುಂಬಾ ಭಾವನಾತ್ಮಕವಾಗಿತ್ತು. ಇದು ಮರೆಯಲಾಗದ ದಿನವೂ ಹೌದು‘ ಎಂದರು.
‘ಲಸಿಕೆ ತೆಗೆದುಕೊಂಡಾಗ ಜ್ವರ ಬರುತ್ತದೆ. ಅದು ಲಸಿಕೆಯ ಅಡ್ಡಪರಿಣಾಮ‘ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಆದರೆ, ನನ್ನ ಜನ್ಮದಿನದಂದು ದೇಶದಾದ್ಯಂತ 2.5 ಕೋಟಿ ಲಸಿಕೆಗಳನ್ನು ನೀಡಿದ್ದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದುಬಿಟ್ಟಿದೆ‘ ಎಂದು ಯಾವುದೇ ಪಕ್ಷದ ಹೆಸರು ಉಲ್ಲೇಖಿಸಿದೇ ಮೋದಿ ಹೇಳಿದರು.
ಇದೇ ಸಂದರ್ಭದಲ್ಲಿ, ಮೊದಲ ಡೋಸ್ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಗೋವಾ ರಾಜ್ಯ ಶೇ 100ರಷ್ಟು ಸಾಧನೆ ಮಾಡಿರುವುದಕ್ಕೆ ಪ್ರಧಾನಿಯವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ವಿಶ್ವದ ಅತಿದೊಡ್ಡ ಹಾಗೂ ವೇಗವಾದ ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ (ಸಬ್ ಕೊ ವ್ಯಾಕ್ಸಿನ್, ಮುಫ್ತ್ ವ್ಯಾಕ್ಸಿನ್)‘ ಎಂಬ ಕೋವಿಡ್ ಲಸಿಕೆ ಅಭಿಯಾನದ ಯಶಸ್ಸಿನಲ್ಲಿ ಗೋವಾ ಪ್ರಮುಖ ಪಾತ್ರವಹಿಸುತ್ತಿದೆ‘ ಎಂದು ಅವರು ಶ್ಲಾಘಿಸಿದರು.
ಇತ್ತೀಚೆಗಷ್ಟೇ ಭಾರಿ ಮಳೆ, ಚಂಡಮಾರುತ ಪ್ರವಾಹದಿಂದ ಗೋವಾ ತತ್ತರಿಸಿತ್ತು. ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಆ ಎಲ್ಲ ಸಮಸ್ಯೆಗಳ ವಿರುದ್ಧ ಧೈರ್ಯವಾಗಿ ಹೋರಾಡಿ ಗೆದ್ದಿದ್ದಾರೆ. ಗೋವಾದಲ್ಲಿರುವ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆಂದು ತಿಳಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಧೈರ್ಯವಾಗಿ ಭೇಟಿ ನೀಡುತ್ತಾರೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.