ಮುಂಬೈ: ಅಶಕ್ತರು ವಿವಿಧ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಗಸ್ಟ್ 1 ರಿಂದ ಆರಂಭಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಮಹಾನಗರ ಪಾಲಿಗೆ ಮಂಗಳವಾರ ಬಾಂಬೆ ಹೈಕೋರ್ಟ್ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳ ಗೊಂಡ ವಿಭಾಗೀಯ ಪೀಠ, ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದೆ.‘ಕೇಂದ್ರ ಸರ್ಕಾರ ಇಂಥದ್ದೊಂದು ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ, ಅದೇ ಕೆಲಸವನ್ನು ಸರ್ಕಾರವು ಸಕಾಲಿಕವಾಗಿ ಕೈಗೆತ್ತಿಕೊಂಡಿದೆ. ಇದು ಕತ್ತಲಿನ ಸುರಂಗದಲ್ಲಿ ಬೆಳಕಿನ ಕಿರಣವೊಂದು ಕಾಣಿಸಿದಂತಾಗಿದೆ‘ ಎಂದು ಹೇಳಿದೆ.
ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ, ‘ಪುಣೆಯಲ್ಲಿ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಅಭಿಯಾನ ಶುರು ಮಾಡಬೇಕೆಂದು ಯೋಚಿಸಿದ್ದೆವು. ಆದರೆ, ಮುಂಬೈ ನಿವಾಸಿಗಳಿಂದ ದೊರೆತ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಹಿಂದಿನ ಯೋಜನೆಯನ್ನು ಬದಲಾಯಿಸಿದ್ದೇವೆ‘ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
‘ಮುಂಬೈನಲ್ಲಿರುವ ಅಶಕ್ತ, ಹಾಸಿಗೆ ಹಿಡಿದಿರುವ ಹಾಗೂ ಲಸಿಕೆ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ಸುಮಾರು 3505 ಮಂದಿ ಮನೆಗೆ ಬಂದು ಲಸಿಕೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆಗಸ್ಟ್ 1 ರಿಂದ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗುವ ಕುರಿತುಸರ್ಕಾರ ಆದೇಶ ಹೊರಡಿಸಲಿದೆ‘ ಎಂದು ಅಶುತೋಷ್ ತಿಳಿಸಿದರು.