ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವರಿಷ್ಠರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
‘ಕಾದು ಸುಸ್ತಾಗಿದ್ದೇನೆ. ಹಿರಿಯರಿಂದ ಯಾವುದೇ ಪ್ರೋತ್ಸಾಹವಿಲ್ಲ. ನನ್ನ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡಿದ್ದೇನೆ’ ಎಂದು ಫೈಸಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
Tired of waiting around. No encouragement from the top brass. Keeping my options open
— Faisal Patel (@mfaisalpatel) April 5, 2022
ಈ ಹಿನ್ನೆಲೆಯಲ್ಲಿ ಫೈಸಲ್ ಅವರನ್ನು ಸಂಪರ್ಕಿಸಿದಾಗ, ಅವರು ಹೆಚ್ಚೇನೂ ಹೇಳಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
‘ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಪಕ್ಷದ ಕೆಲಸ ಮಾಡಲು ಬಯಸಿರುವ ಪಟೇಲ್ ಪುತ್ರ ವರಿಷ್ಠರ ಕರೆಗಾಗಿ ಕಾಯುತ್ತಿದ್ದಾರೆ. ಆದರೆ ಅಹ್ಮದ್ ಪಟೇಲ್ ನಿಧನದ ನಂತರ ಅವರಿಗೆ ಪಕ್ಷದಲ್ಲಿ ಯಾವುದೇ ಔಪಚಾರಿಕ ಕಾರ್ಯ ನಿಗದಿ ಮಾಡಿಲ್ಲ. ಅಲ್ಲದೇ, ಫೈಸಲ್ ಕೂಡ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ಹಿಂದೆ ಮಾರ್ಚ್ 27 ರಂದು, ಫೈಸಲ್ ಅವರು ಭರೂಚ್ನ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವುದಾಗಿ ಘೋಷಿಸಿದ್ದರು. ಏಪ್ರಿಲ್ 1 ರಿಂದ ನರ್ಮದಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದ್ದರು. ತಮ್ಮ ತಂಡವು ಪ್ರಸ್ತುತ ರಾಜಕೀಯದ ವಾಸ್ತವ ಪರಿಸ್ಥಿತಿಯನ್ನು ಅರಿಯಲಿದೆ ಎಂದೂ ಅವರು ತಿಳಿಸಿದ್ದರು.
ಆದರೆ, ‘ಯಾವಾಗ ಪಕ್ಷಕ್ಕೆ ಸೇರುವಿರಿ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಫೈಸಲ್, ಸದ್ಯಕ್ಕೆ ರಾಜಕೀಯ ಸೇರುವುದಿಲ್ಲ ಮತ್ತು ಪಕ್ಷಕ್ಕೆ ಸೇರುವ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ಐಎಎನ್ಎಸ್ಗೆ ತಿಳಿಸಿದ್ದರು.
ಮುಂದೆ ರಾಜಕೀಯಕ್ಕೆ ಬಂದರೂ, ಚುನಾವಣಾ ರಾಜಕೀಯಕ್ಕೆ ಬರದೇ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದರು.
ಗುಜರಾತ್ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಕಾಂಗ್ರೆಸ್ ಕೂಡ ಸಿದ್ಧತೆಯಲ್ಲಿ ತೊಡಗಿದೆ.
ಗುಜರಾತ್ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಚೈತನ್ಯ ತುಂಬಲು ರಾಹುಲ್ ಗಾಂಧಿಯವರೂ ಹಲವಾರು ಸಭೆಗಳನ್ನು ನಡೆಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಲು ನಾಲ್ವರು ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿದೆ.
ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿಯವರ ಅತ್ಯಂತ ಆಪ್ತರು, ಪ್ರಭಾವಿಯೂ ಎನಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.