ಗಯಾ (ಬಿಹಾರ): ಗಯಾ ಜಿಲ್ಲೆಯ ಲಹತುವಾ ಪ್ರದೇಶದ ಕೋಠಿಲ್ವಾಗ್ರಾಮದ ವ್ಯಕ್ತಿಯೊಬ್ಬರು ಹತ್ತಿರದ ಬೆಟ್ಟ ಪ್ರದೇಶದಿಂದ ಹರಿದು ಬರುವ ಮಳೆ ನೀರನ್ನು ಗ್ರಾಮದ ಹೊಲಗಳಿಗೆ ಹರಿಸಲು 3 ಕಿಮೀ ಉದ್ದದ ಕಾಲುವೆ ನಿರ್ಮಿಸಿದ್ದಾರೆ.
30 ವರ್ಷಗಳ ಕಾಲ ಏಕಾಂಗಿಯಾಗಿ3 ಕಿ.ಮೀ ಕಾಲುವೆ ನಿರ್ಮಿಸಿ ಗ್ರಾಮದ ರೈತರಿಗೆ ನೆರವಾದ ಈ ವ್ಯಕ್ತಿಯ ಹೆಸರು ಲೌಂಗಿ ಭುಯಾನ್.ಈ ಕಾಲುವೆಯ ಮೂಲಕ ಹರಿದು ಬರುವ ನೀರಿನಿಂದ ಗ್ರಾಮದ ಕೆರೆಗಳು ತುಂಬಿವೆ.
ಕಳೆದ 30 ವರ್ಷಗಳಿಂದ ಜಾನುವಾರುಗಳನ್ನು ಮೇಯಲು ಕಾಡಿಗೆ ಅಟ್ಟಿ, ಕಾಲುವೆ ಅಗೆಯುವ ಕಾರ್ಯದಲ್ಲಿ ನಿರತನಾಗಿದ್ದೆ. ಯಾರೊಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ. ಗ್ರಾಮದಲ್ಲಿರುವವರು ಪಟ್ಟಣಕ್ಕೆ ಹೋಗಿ ಜೀವನ ನಿರ್ವಹಣೆಯ ದಾರಿ ಕಂಡುಕೊಳ್ಳುತ್ತಾರೆ. ಆದರೆ ನಾನು ಇಲ್ಲೇ ಇರಲು ತೀರ್ಮಾನಿಸಿದೆ ಅಂತಾರೆ ಭುಯಾನ್.
Bihar: A man has carved out a 3-km-long canal to take rainwater coming down from nearby hills to fields of his village, Kothilawa in Lahthua area of Gaya. Laungi Bhuiyan says, "It took me 30 years to dig this canal which takes the water to a pond in the village." (12.09.2020) pic.twitter.com/gFKffXOd8Y
— ANI (@ANI) September 12, 2020
ಗಯಾದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕೋಠಿಲ್ವಾಗ್ರಾಮವು ದಟ್ಟಅರಣ್ಯ ಮತ್ತು ಬೆಟ್ಟ ಪ್ರದೇಶದಿಂದಾವೃತವಾಗಿದೆ.ಈ ಗ್ರಾಮವು ಮಾವೋವಾದಿಗಳ ಸಂರಕ್ಷಣಾ ತಾಣ ಎಂದೇ ಗುರುತಿಸಲ್ಪಟ್ಟಿದೆ. ಇಲ್ಲಿನ ಜನರು ಜೀವನ ನಿರ್ವಹಣೆಗಾಗಿ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುವ ಮಳೆ ನೀರು ನದಿ ಸೇರುತ್ತದೆ. ಈ ನೀರನ್ನು ಗ್ರಾಮದ ಕೆರೆಗಳಿಗೆ ಹರಿಯುವಂತೆ ಮಾಡುವ ಯೋಚನೆ ಮೂಡಿದ್ದೇ ತಡ ಭುಯಾನ್ ಕಾಲುವೆ ನಿರ್ಮಿಸುವ ನಿರ್ಧಾರ ಕೈಗೊಂಡರು.
ಬೆಟ್ಟದಿಂದ ಬರುವ ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂಬ ಉದ್ದೇಶ ಭುಯಾನ್ ಅವರದ್ದಾಗಿತ್ತು. 30 ವರ್ಷಗಳಿಂದ ಅವರೊಬ್ಬರೇ ಕಾಲುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿನ ಹೊಲಗಳಿಗೂ, ಜಾನುವಾರುಗಳಿಗೂ ಕುಡಿಯಲು ನೀರು ಲಭಿಸಲಿದೆ. ಅವರು ತಮ್ಮ ಸ್ವಂತಕ್ಕಾಗಿ ಅಲ್ಲ ಇಡೀ ಗ್ರಾಮಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂದುಸ್ಥಳೀಯರಾದ ಪಾಟ್ಟಿ ಮಾಂಝಿ ಹೇಳಿದ್ದಾರೆ .
ಈ ಕಾಲುವೆಯಿಂದ ಹಲವಾರು ಜನರಿಗೆ ಪ್ರಯೋಜನವಾಗಲಿದೆ. ಅವರ ಈ ಕೆಲಸದಿಂದಲೇ ಜನರು ಈಗ ಗುರುತಿಸುತ್ತಿದ್ದಾರೆ ಎಂದು ಗ್ರಾಮದ ಶಿಕ್ಷಕ ರಾಮ್ ವಿಲಾಸ್ ಸಿಂಗ್ ಭುಯಾನ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.