ಮುಂಬೈ:ಮಹಾರಾಷ್ಟ್ರದಲ್ಲಿ ಮಕ್ಕಳು ಭಿಕ್ಷೆ ಬೇಡುವುದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಶೀಘ್ರವೇ ಕೌಶಲಾಭಿವೃದ್ಧಿ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್ ಶನಿವಾರ ಹೇಳಿದ್ದಾರೆ.
ಜಲಗಾಂವ ಹಾಗೂ ಧುಲೆ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಸಚಿವೆ ಯಶೋಮತಿಯವರನ್ನು ಭೇಟಿಯಾಗಿದ್ದ ಬಾಲಕಿಯೊಬ್ಬಳು, ಭಿಕ್ಷೆ ಬೇಡಿಯೇ ಜೀವನ ಸಾಗಿಸುತ್ತಿರುವುದಾಗಿ ಹೇಳಿದ್ದಳು.
ಈ ಘಟನೆ ನಂತರ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸಚಿವೆ, ರಾಜ್ಯದಲ್ಲಿ ಮಕ್ಕಳು ಭಿಕ್ಷಾಟನೆಗಿಳಿಯುತ್ತಿರುವುದು ಹೆಚ್ಚುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಮಕ್ಕಳು ಹಾಗೂ ವಯಸ್ಕ ಭಿಕ್ಷುಕರಲ್ಲಿ ಕೌಶಲ ಅಭಿವೃದ್ಧಿಗೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು. ಆ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಕೋವಿಡ್ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ನೆರವು ನೀಡುವುದಾಗಿಯೂ ಅವರು ಹೇಳಿದರು.