ಮುಂಬೈ: ತಮ್ಮ ಪಕ್ಷಕ್ಕೆ 170 ಶಾಸಕರ ಬೆಂಬಲವಿದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ಗಿರೀಶ್ ಮಹಾಜನ್ ಗುರುವಾರ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು 145 ಶಾಸಕರ ಅಗತ್ಯವಿದ್ದು, ಶಿವಸೇನಾ ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ.
ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಗಿರೀಶ್ ಮಹಾಜನ್, ‘ನಮಗೆ 170 ಶಾಸಕರ ಬೆಂಬಲವಿದೆ. ಒಂದು ವೇಳೆ ಬಹುಮತ ಸಾಬೀತುಪಡಿಸಲು ಹೇಳಿದರೆ, ನಾವು ನಿರಾಯಾಸವಾಗಿ ಜಯಸಾಧಿಸಲಿದ್ದೇವೆ’ ಎಂದು ಹೇಳಿದ್ದಾರೆ.
ಸದನದಲ್ಲಿ ಪಕ್ಷದ ಬಲ 106 ಆಗಿದ್ದು, ಇತರ 13 ಪಕ್ಷೇತರಶಾಸಕರ ಬೆಂಬಲವಿದೆ. ಶಿಂಧೆ ಜೊತೆ ಗುರುತಿಸಿಕೊಂಡಿರುವ ಶಾಸಕರೂ ನಮ್ಮೊಂದಿಗೆ ಬರಲಿದ್ದಾರೆಎಂದು ಬಿಜೆಪಿ ಹೇಳಿಕೊಂಡಿದೆ.
ಶಿಂಧೆ ಅವರು ಬುಧವಾರ ರಾತ್ರಿ ಗುವಾಹಟಿಯಿಂದ 50 ಶಾಸಕರ ಗುಂಪಿನೊಂದಿಗೆ ಗೋವಾಕ್ಕೆ ಬಂದಿಳಿದಿದ್ದಾರೆ. ಅವರಲ್ಲಿ 39 ಶಿವಸೇನಾ ಭಿನ್ನಮತೀಯರು, ಉಳಿದವರು ಇತರ ಸಣ್ಣ ಪಕ್ಷಗಳ ಹಾಗೂ ಸ್ವತಂತ್ರ ಶಾಸಕರಿದ್ದಾರೆ.
‘ಶಿವಸೇನಾ ಭಿನ್ನಮತೀಯರು ಶಿವಸೈನಿಕರಾಗಿದ್ದಾರೆ ಮತ್ತು ಶಿವಸೇನಾದಲ್ಲಿಯೇ ಇರುತ್ತಾರೆ’ ಎಂದು ಶಿಂಧೆ ಬುಧವಾರ ರಾತ್ರಿ ಪುನರುಚ್ಚರಿಸಿದ್ದಾರೆ.