ಪಣಜಿ: ಗೋವಾದಲ್ಲಿ ಆಡಳಿತರೂಢ ಬಿಜೆಪಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು, ಪ್ರಮುಖರು ತೃಣಮೂಲ ಕಾಂಗ್ರೆಸ್ ಜೊತೆಗೆ ಕೈಜೋಡಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೋರಿದ್ದಾರೆ.
ಗೋವಾಗೆ ಇದೇ 28ರಂದು ತಾವು ಭೇಟಿ ನೀಡುವುದಾಗಿಯೂ ಅವರು ಪ್ರಕಟಿಸಿದರು. ಮುಂದಿನ ವರ್ಷ ನಡೆಯುವ ಗೋವಾ ವಿಧಾನಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಪಕ್ಷ ಈಗಾಗಲೇ ಪ್ರಕಟಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘28 ರಂದು ಗೋವಾಗೆ ಭೇಟಿಗೆ ಸಿದ್ಧತೆ ನಡೆದಿದೆ. ಬಿಜೆಪಿ ಮತ್ತು ಅದರ ವಿಭಜನೆಯ ಕಾರ್ಯಸೂಚಿ ಸೋಲಿಸಲು ಪಕ್ಷಗಳು, ಎಲ್ಲರೂ ಕೈಜೋಡಿಸಬೇಕು. ಕಳೆದ 10 ವರ್ಷಗಳಲ್ಲಿ ಗೋವಾದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ’ ಎಂದು ಮಮತಾ ಅವರು ಟ್ವೀಟ್ ಮಾಡಿದ್ದಾರೆ.
‘ಗೋವಾದಲ್ಲಿ ಒಟ್ಟಾಗಿ ನಾವು ರಚಿಸಲಿರುವ ನೂತನ ಸರ್ಕಾರವು, ಖಂಡಿತವಾಗಿ ಜನರ ಸರ್ಕಾರವಾಗಿರಲಿದೆ. ಅವರ ಆಶೋತ್ತರಗಳನ್ನು ಈಡೇರಿಸಲಿದೆ. ಅದಕ್ಕೆ ನಾವು ಬದ್ಧವಾಗಿದ್ದೇವೆ’ ಎಂದೂ ಹೇಳಿದ್ದಾರೆ.