ನವದೆಹಲಿ: ಶ್ರದ್ಧಾ ಅಮಾನುಷ ಕೊಲೆ ಪ್ರಕರಣದಲ್ಲಿ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲನ ಬಗ್ಗೆ ಮಾಹಿತಿ ಬಯಸಿ ದೆಹಲಿ ಪೊಲೀಸರು ಡೇಟಿಂಗ್ ಆ್ಯಪ್ ‘ಬಂಬಲ್‘ಗೆ ಪತ್ರ ಬರೆಯಲಿದ್ದಾರೆ.
ಶ್ರದ್ಧಾ ವಾಲ್ಕರ್ ಅವರನ್ನು ಕೊಲೆ ಮಾಡಿ, ಆಕೆಯ ಶವ ಫ್ರಿಡ್ಜ್ನಲ್ಲಿ ಇರಿಸಿಕೊಂಡಿದ್ದ ಸಮಯದಲ್ಲೇ ‘ಬಂಬಲ್‘ ಆ್ಯಪ್ ಮೂಲಕ ಇನ್ನೊಬ್ಬಾಕೆಯನ್ನು ಪರಿಚಯ ಮಾಡಿಕೊಂಡಿದ್ದ ಮತ್ತು ಅದೇ ಮನೆಗೆ ಆಕೆಯನ್ನು ಅಫ್ತಾಬ್ ಕರೆ ತಂದಿದ್ದ.
ಹೀಗಾಗಿ ಆ್ಯಪ್ ಮೂಲಕ ಬೇರೆ ಯಾವುದಾದರೂ ಹುಡುಗಿಯರ ಪರಿಚಯ ಉಂಟಾಗಿತ್ತೇ ಎಂದು ತಿಳಿದುಕೊಳ್ಳುವ ಸಲುವಾಗಿ ಪೊಲೀಸರು ಪತ್ರ ಬರೆಯಲಿದ್ದಾರೆ.
‘ಶ್ರದ್ಧಾಳ ಶವ ಮನೆಯಲ್ಲಿ ಇರುವಾಗ ಯಾರೆಲ್ಲಾ ಭೇಟಿ ನೀಡಿದ್ದರು? ಕೊಲೆಗೂ, ಅಫ್ತಾಬ್ನ ಬೇರೆ ಪ್ರೇಯಸಿಯರಿಗೂ ಸಂಬಂಧ ಇದೆಯಾ? ಮುಂತಾದ ಕೋನಗಳಲ್ಲಿ ತನಿಖೆ ನಡೆಸುವ ಸಲುವಾಗಿ ಆ್ಯಪ್ಗೆ ಪತ್ರ ಬರೆಯಲಾಗುತ್ತದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಪ್ರೇಯಸಿ ಶ್ರದ್ಧಾಳ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಎಸೆದಿದ್ದ.