ಮುಂಬೈ: ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಬಾಂಬೆ ಹೈಕೋರ್ಟ್ ಗುರುವಾರ ನಡೆಸಬೇಕಿದ್ದ ಎಲ್ಲ ಕಲಾಪಗಳನ್ನು ಮುಂದೂಡಿದೆ.
ಏಳು ಪೀಠಗಳಲ್ಲಿ ವರ್ಚುವಲ್ ಕಲಾಪಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ರೈಲು ಸೇವೆಗಳ ವ್ಯತ್ಯಯದಿಂದಾಗಿ ಸಿಬ್ಬಂದಿ ಕೊರತೆ ಉಂಟಾಯಿತು. ಪರಿಣಾಮವಾಗಿ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ದಿನದ ಎಲ್ಲ ಕಲಾಪಗಳನ್ನು ನ್ಯಾಯಾಲಯ ಸ್ಥಗಿತಗೊಳಿಸಲಾಗಿದೆ ಎಂದು ನ್ಯಾಯಾಲಯದ ರಿಜಿಸ್ಟ್ರಾರ್ ವಿ.ಆರ್.ಕಚಾರೆ ತಿಳಿಸಿದ್ದಾರೆ.
ಗುರುವಾರ ನಡೆಯಬೇಕಿದ್ದ ಎಲ್ಲ ಅರ್ಜಿಯ ವಿಚಾರಣೆಗಳನ್ನು ಶುಕ್ರವಾರಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಮಳೆಯ ಕಾರಣದಿಂದ ಮಂಗಳವಾರವೂ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತ್ತು. ಇದು ಈ ವಾರದಲ್ಲಿ ಎರಡನೇ ಬಾರಿಗೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿರುವುದು.
ಮುಂಬೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮವಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರೈಲು ಮತ್ತು ರಸ್ತೆ ಸಾರಿಗೆ ಸೇವೆಗಳಿಗೆ ಅಡ್ಡಿ ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.