ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಿ ಅಳಿಯನ ಬಂಧನ: ಕಾಂಗ್ರೆಸ್ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಸಿಧು ಹೇಳಿದ್ದೇನು?

Last Updated 5 ಫೆಬ್ರುವರಿ 2022, 6:59 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ಪ್ರಾಮಾಣಿಕ ಹಾಗೂ ಉತ್ತಮ ಹಿನ್ನೆಲೆಯುಳ್ಳವರನ್ನೇ ಕಾಂಗ್ರೆಸ್ ಆಯ್ಕೆ ಮಾಡಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸಿಧು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆಯಲಿರುವ ವರ್ಚುವಲ್ ರ್‍ಯಾಲಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಮಾತನಾಡಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆ ಇದೆ. ಸಂಭಾವ್ಯರ ಪೈಕಿ ಚನ್ನಿ ಮುಂಚೂಣಿಯಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪಂಜಾಬ್‌ನಲ್ಲಿ ಫೆಬ್ರುವರಿ 20ರಂದು ಚುನಾವಣೆ ನಡೆಯಲಿದೆ.

ನೈತಿಕರಾಗಿಲ್ಲದ, ಅಪ್ರಾಮಾಣಿಕ, ಭ್ರಷ್ಟಾಚಾರ ಮತ್ತು ಕೆಲವು ಮಾಫಿಯಾ ನಂಟು ಹೊಂದಿರುವವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇ ಆದಲ್ಲಿ ಜನರು ಬದಲಾವಣೆಗಾಗಿ ಮತ ಚಲಾಯಿಸಬಹುದು, ಸೋಲಿಸಬಹುದು ಎಂದು ಸಿಧು ಹೇಳಿರುವುದಾಗಿ ‘ಎನ್‌ಡಿ ಟಿವಿ’ ವರದಿ ಮಾಡಿದೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಕನಿಷ್ಠ 60 ಶಾಸಕರ ಬೆಂಬಲವಾದರೂ ಇರಬೇಕು ಎಂದು ಅವರು ಹೇಳಿದ್ದಾರೆ.

‘ನಮಗೆ ಪ್ರಾಮಾಣಿಕ ಅಭ್ಯರ್ಥಿ ಬೇಕು. ನಮ್ಮ ಆಯ್ಕೆಯ ಮೇಲೆ ನಮ್ಮ ಹಣೆಬರಹ ನಿರ್ಧಾರಗೊಂಡಿದೆ. ಮಾಫಿಯಾ ನಂಟು ಹೊಂದಿರುವ ವ್ಯಕ್ತಿಯು ಯೋಜನೆಗಳನ್ನು ಜಾರಿ ಮಾಡಲಾರ. ಮಾಫಿಯಾ ನಂಟು ಹೊಂದಿರುವ ವ್ಯಕ್ತಿಯೇ ಮುಖ್ಯಮಂತ್ರಿಯಾದರೆ ಮಾಫಿಯಾವನ್ನು ಮಟ್ಟ ಹಾಕುವುದು ಯಾರು’ ಎಂದು ಸಿಧು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT