ಭುವನೇಶ್ವರ: 14 ದಿನಗಳ ಕೊರೊನಾವೈರಸ್ ಲಾಕ್ಡೌನ್ ಅವಧಿಯಲ್ಲಿ ಬೀದಿಗಳಲ್ಲಿರುವ ಪ್ರಾಣಿಗಳ ಬಗ್ಗೆಯೂ ಅತೀವ ಕಾಳಜಿ ವಹಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಅವುಗಳಿಗೆ ಆಹಾರ ತಿನಿಸಲು ವಿಶೇಷ ಮೊತ್ತವನ್ನು ಮಂಜೂರು ಮಾಡಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್ಡೌನ್ ನಡೆಯುತ್ತಿದೆ. ಆದ್ದರಿಂದ ಬೀದಿಗಳಲ್ಲಿರುವ ನಾಯಿಗಳು, ಹಸುಗಳು ಆಹಾರದಿಂದ ವಂಚಿತವಾಗಿವೆ. ಹಾಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹60 ಲಕ್ಷ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಐದು ಪುರಸಭೆಗಳು, 48 ನಗರಪಾಲಿಕೆಗಳು, 61 ಎನ್ಎಸಿಗಳಿಗೆ ಮೊತ್ತ ಮಂಜೂರು ಮಾಡಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಹಾರವನ್ನು ಒದಗಿಸಲಿವೆ.
ಜಾಜ್ಪುರ ಜಿಲ್ಲೆಯ ಚಾಂದಿಕೋಲೆ ಪ್ರದೇಶದ ಮಹಾವಿನಾಯಕ್ ದೇವಸ್ಥಾನದಲ್ಲಿ ಸ್ಥಳೀಯ ಆಡಳಿತವು ಭಾನುವಾರದಂದು ಕೋತಿಗಳು, ಶ್ವಾನಗಳು ಮತ್ತು ಹಸುಗಳಿಗೆ ಆಹಾರವನ್ನು ವಿತರಿಸಿದೆ ಎಂದು ವರದಿಯೊಂದು ತಿಳಿಸಿದೆ.
ಮೇ 5ರಿಂದ ಪ್ರಾರಂಭವಾದ ಲಾಕ್ಡೌನ್ ಹಂತದಲ್ಲಿ ಬೀದಿಗಳಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡುವಂತೆ ಜಿಲ್ಲಾಡಳಿತವು ಮನವಿ ಮಾಡಿದೆ.